ಬದುಕು ಕಸಿಯುತ್ತಿರುವ ದುರ್ಬಲ ಕಟ್ಟಡಗಳು
Team Udayavani, Jul 17, 2019, 5:03 AM IST
ಮಣಿಪಾಲ: ನಗರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಟ್ಟಡ ಕುಸಿತ ಪ್ರಕರಣ ಹೆಚ್ಚು. ಬಹುತೇಕ ಸಂದರ್ಭಗಳಲ್ಲಿ ಬಲಿಯಾಗುವವರು ಜನಸಾಮಾನ್ಯರೇ. ಮಂಗಳವಾರ ಮುಂಬಯಿಯಲ್ಲಿ ನಡೆದ ಮತ್ತೂಂದು ಘಟನೆಯೂ ರಾಜ್ಯದಲ್ಲಿ ನಡೆದ ಘಟನೆಯನ್ನು ನೆನಪಿಸಿದ್ದು ಸುಳ್ಳಲ್ಲ.
ಏನು ಕಾರಣ ?
ನೀತಿ ನಿಯಮಗಳನ್ನು ಗಾಳಿಗೆ ತೂರಿ ತಲೆ ಎತ್ತುವ ಕಟ್ಟಡಗಳು ಲೆಕ್ಕಕ್ಕಿಲ್ಲ. ಜತೆಗೆ ಕಟ್ಟಡಗಳ ಆಯಸ್ಸು ಮುಗಿದರೂ ಕೆಡವದೇ ದುರಂತಕ್ಕೆ ಕಾದು ಕುಳಿತುಕೊಳ್ಳುವ ಸಂದರ್ಭಗಳಲ್ಲಿ ಈ ಆಡಳಿತ ಮತ್ತು ನಿಯಮ ಉಲ್ಲಂಘಕರ ನಡುವಿನ ಅಕ್ರಮ ದೋಸ್ತಿತನ ಬಯಲಿಗೆ ಬರುತ್ತದೆ. ಆಗ ಆಡಳಿತ ಮತ್ತು ಪ್ರತಿಪಕ್ಷಗಳ ಪರಸ್ಪರ ಪ್ರತ್ಯಾರೋಪದಲ್ಲೇ ಎಲ್ಲವೂ ಮುಗಿಯುತ್ತದೆ. ಮಧ್ಯೆ ಲೆಕ್ಕ ಜಮೆ ಮಾಡಲು ಒಂದಿಬ್ಬರು ಅಧಿಕಾರಿಗಳ ಅಮಾನತು. ಸಾಮಾನ್ಯವಾಗಿ ಇಷ್ಟಕ್ಕೇ ಎಲ್ಲವೂ ಮುಗಿದಂತೆ.
ಮುಂಬಯಿಯಲ್ಲಿ ಹಲವು ಪ್ರಕರಣ
ಥಾಣೆ 2013: ಮುಂಬಯಿಗೆ ಇವೇನೂ ಹೊಸತಲ್ಲ. 2013ರ ಎಪ್ರಿಲ್ 4ರಂದು ಥಾಣೆಯಲ್ಲಿ ಘಟಿಸಿದ ಘಟನೆಯಲ್ಲಿ 18 ಮಕ್ಕಳು ಸೇರಿ 74 ಜನರು ಸತ್ತಿದ್ದರು. 60 ಜನ ಗಾಯ ಗೊಂಡಿದ್ದರು. 2 ತಿಂಗಳಲ್ಲಿ 7 ಮಹಡಿಯನ್ನು ಏರಿಸ ಲಾಗಿತ್ತು. ಎಂಟನೆ ಮಹಡಿ ನಿರ್ಮಾಣವಾಗುವಾಗ ಕುಸಿದು ಬಿತ್ತು.
ದ. ಮುಂಬಯಿ 2017: 2017 ರ ಸೆಪ್ಟಂಬರ್ನಲ್ಲಿ ದಕ್ಷಿಣ ಮುಂಬ ಯಿ ಯಲ್ಲಿ 5 ಮಹಡಿಯ ಕಟ್ಟಡ ಕುಸಿದ ಪರಿಣಾಮ 33 ಮಂದಿ ಸಾವ ನ್ನಪ್ಪಿದರೆ 20 ಜನರು ಗಾಯಗೊಂಡರು. ಈ ಕಟ್ಟಡಕ್ಕೆ 117 ವರ್ಷವಾಗಿತ್ತು.
ಮಜಗಾಂವ್ 2017: ಸೆಪ್ಟಂಬರ್ 27ರಂದು ಮುಂಬಯಿಯ ಮಜಗಾಂವ್ನಲ್ಲಿ ಮರು ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು 61 ಮಂದಿ ಸಾವನ್ನಪ್ಪಿದ್ದರು. 32 ವರ್ಷ ಹಳೆಯ ಕಟ್ಟಡವನ್ನು ಮರು ವಿನ್ಯಾಸಗೊಳಿಸಲಾಗುತ್ತಿತ್ತು.
ಗೋರೆಗಾಂವ್ 2018: ಗೋರೆಗಾಂವ್ನಲ್ಲಿ ನಿರ್ಮಾಣ ಹಂತ ದಲ್ಲಿದ್ದ ಕಟ್ಟಡ ಕುಸಿದು 3 ಮಂದಿ ಸಾವನ್ನಪ್ಪಿ, 8 ಜನರು ಗಾಯಗೊಂಡಿದ್ದರು.
ಇತ್ತೀಚೆಗೆ ನಡೆದ ಕಟ್ಟಡ ದುರಂತಗಳು
ಫೆಬ್ರವರಿ 27: ದಿಲ್ಲಿಯ ಸರ್ದಾರ್ ಬಜಾ ರ್ ನಲ್ಲಿ ಫೆಬ್ರವರಿ 27 ರ ದುರಂತ ದಲ್ಲಿ ಪ್ರಾಣ ಹಾನಿ ಸಂಭವಿಸಿಲ್ಲ. ಮುಂಜಾನೆ 6.25ಕ್ಕೆ ಘಟನೆ ನಡೆದ ಕಾರಣ ಭಾರೀ ಅನಾ ಹುತ ತಪ್ಪಿದೆ. ಆದರೆ 4 ವಾಹನಗಳು ಜಖಂ ಆಗಿವೆೆ.
ಮಾರ್ಚ್ 24: ಧಾರವಾಡದ ಕುಮಾರೇಶ್ವರ್ ನಗರದಲ್ಲಿ ನಿರ್ಮಾಣ ಹಂತ ದಲ್ಲಿದ್ದ ವಾಣಿಜ್ಯ ಸಂಕೀರ್ಣ ಕುಸಿದು 16 ಮಂದಿ ಮೃತಪಟ್ಟು,15 ಜನ ಗಾಯಗೊಂಡಿದ್ದರು.
ಜುಲೈ 5: ತಮಿಳುನಾಡಿನ ಮಧುರೈನಲ್ಲಿ 4 ಅಂತಸ್ತಿನ ಕಟ್ಟಡ ಕುಸಿದಿತ್ತು. ಯಾವುದೇ ಸಾವು ಗಳು ಸಂಭವಿಸಿಲ್ಲ, ಜನರು ಸಣ್ಣ ಪುಟ್ಟ ಗಾಯ ಗಳೊಂದಿಗೆ ಪಾರಾಗಿದ್ದರು. ಕಟ್ಟಡ ಒಳಗೆ ಸಿಲುಕಿದ್ದ 4 ಜನರನ್ನು ರಕ್ಷಿಸಲಾಗಿತ್ತು.
ಜುಲೈ 10: ಬೆಂಗಳೂರಿನ ಪುಲಕೇಶಿ ನಗರದಲ್ಲಿ ಜುಲೈ 10ರಂದು ನಿರ್ಮಾಣ ಹಂತದಲ್ಲಿದ್ದ 2 ಕಟ್ಟಡ ಕುಸಿದು 5 ಮಂದಿ ಸಾವನ್ನಪ್ಪಿ, 13 ಮಂದಿ ಗಾಯಗೊಂಡಿದ್ದರು.
ಜುಲೈ 15: ಮಳೆ ಪರಿಣಾಮ ಹಿಮಾಚಲ ಪ್ರದೇಶದ ನಹನ್ ಕುಮರಹಟ್ಟಿ ರಸ್ತೆ ಯಲ್ಲಿ ಬಹುಮಹಡಿ ಕಟ್ಟಡ ಕುಸಿದ ಕಾರಣ ಕುಸಿದು 14 ಮಂದಿ ಸಾವನ್ನಪ್ಪಿದ್ದರು. 28 ಮಂದಿಗೆ ಗಾಯಗಳಾಗಿದ್ದವು.