ಮಲ್ಪೆ ಬೀಚ್ಗೆ ಹರಿದು ಬಂದ ಪ್ರವಾಸಿಗರು; ಕರಾವಳಿಯಲ್ಲಿ ಮಳೆಯಿಲ್ಲದೆ ಶುಭ್ರ ವಾತಾವರಣ
Team Udayavani, May 30, 2022, 1:53 AM IST
ಮಲ್ಪೆ: ವಾರಾಂತ್ಯದ ರಜೆ ಮತ್ತು ಮಳೆ ಬಿಡುವು ನೀಡಿ ಶುಭ್ರ ವಾತಾವರಣ ಇದ್ದ ಹಿನ್ನೆಲೆಯಲ್ಲಿ ರವಿವಾರ ಈ ಹಿಂದಿನಂತೆಯೇ ಮಲ್ಪೆ ಬೀಚ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಸ್ಥಳಿಯರು ಆಗಮಿಸಿದ್ದರು.
ಉಡುಪಿ ಭಾಗದಲ್ಲಿ ಪ್ರವಾಸಿಗರ ಹಾಟ್ಸ್ಪಾಟ್ ಆಗಿರುವ ಮಲ್ಪೆ ಬೀಚ್ ಕಡೆಗೆ ರವಿವಾರ ಬೆಳಗ್ಗಿನಿಂದಲೇ ಪ್ರವಾಸಿಗರ ವಾಹನಗಳು ಆಗಮಿಸತೊಡಗಿದ್ದವು. ಶಾಲೆಗಳು ಈಗಾಗಲೇ ಆರಂಭವಾಗಿದ್ದರೂ ಎಲ್ಲ ಶಾಲೆಗಳು ಆರಂಭವಾಗುವುದು ಜೂ. 1ರಿಂದಲೇ. ಹೀಗಾಗಿ ಹೆಚ್ಚಿನ ಪೋಷಕರು ಮಕ್ಕಳನ್ನು ಬೀಚ್ ಕರೆದುಕೊಂಡು ಬಂದಿದ್ದುದು ಕಂಡು ಬಂದಿದೆ.
ಕಳೆದ ವಾರಾಂತ್ಯದಲ್ಲಿ ಮಳೆಯ ವಾತಾವರಣ ಇದ್ದು, ಬೀಚ್ನಲ್ಲಿ ವಿಹಾರ ಸಾಧ್ಯವಾಗಿರಲಿಲ್ಲ. ಈಗ ಮಳೆ ಕಡಿಮೆಯಾಗಿ ಬಿಸಿಲಿನ ವಾತಾವರಣ ಇದೆ. ಸಮುದ್ರವೂ ಬಹುತೇಕ ಶಾಂತವಾಗಿದೆ. ಹೀಗಾಗಿ ಹೊರರಾಜ್ಯ, ಹೊರಜಿಲ್ಲೆಗಳಿಂದ ಆಗಮಿಸಿದ್ದ ಪ್ರವಾಸಿಗರು ಕೂಡ ಬೀಚ್ ವೀಕ್ಷಣೆಗಾಗಿ ದಟ್ಟೈಸಿದ್ದರು. ಕುಟುಂಬ ಸಮೇತರಾಗಿ ಬಂದಿದ್ದ ಪ್ರವಾಸಿಗರು ಮೋಜು ಮಸ್ತಿಯಲ್ಲಿ ತೊಡಗಿಕೊಂಡು ಕಡಲಿನಲ್ಲಿ ನೀರಾಟದ ಮಜಾ ಅನುಭವಿಸಿದರು.
ಸೀವಾಕ್ ಮತ್ತು ಪಡುಕರೆ ಬೀಚ್ನಲ್ಲೂ ಜನಸಾಗರ ಕಂಡುಬಂದಿದ್ದು, ಅಲ್ಲಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು.
ಮೇ 16ರಿಂದ ಸೆ. 15ರ ವರೆಗೆ ಸೈಂಟ್ ಮೇರೀಸ್ ದ್ವೀಪ ಯಾನ ಮತ್ತು ಬೀಚ್ನಲ್ಲಿ ಜಲಕ್ರೀಡೆಗಳನ್ನು ಸ್ಥಗಿತಗೊಳಿಸಿದ್ದರಿಂದ ಈ ಸಂತೋಷ ಸಿಗುತ್ತಿಲ್ಲ. ಕೇವಲ ಬೀಚ್ಗಷ್ಟೇ ಬಂದು ಹೋಗುತ್ತಿದ್ದಾರೆ. ಅಪಾಯ ಸಂಭವಿಸದಂತೆ ಎಚ್ಚರ ವಹಿಸಲಾಗುತ್ತಿದೆ. ಮುಂದೆ ಮಳೆ ಆರಂಭವಾಗಿ ಕಡಲು ಪ್ರಕ್ಷುಬ್ಧಗೊಂಡ ತತ್ಕ್ಷಣ ಬೀಚ್ ಉದ್ದಕ್ಕೂ ನೆಟ್ ಅಳವಡಿಸಿ ಯಾರೂ ನೀರಿಗಿಳಿಯದಂತೆ ನಿರ್ಬಂಧಿಸಲಾಗುತ್ತದೆ ಎಂದು ಬೀಚ್ ಅಭಿವೃದ್ಧಿ ಸಮಿತಿಯ ನಿರ್ವಾಹಕ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.
ಪಣಂಬೂರು ಬೀಚ್ನಲ್ಲೂ ಪ್ರವಾಸಿಗರು
ಪಣಂಬೂರು: ರವಿವಾರ ಉತ್ತಮ ಬಿಸಿಲಿದ್ದು, ಪಣಂಬೂರು ಬೀಚ್ನಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡುಬಂದರು. ಹೊರ ಜಿಲ್ಲೆ, ಹೊರ ರಾಜ್ಯದ ಜನತೆ ದೇವಸ್ಥಾನಗಳ ಭೇಟಿಯ ಬಳಿಕ ಪ್ರವಾಸಿ ತಾಣವಾದ ಪಣಂಬೂರು ಬೀಚ್ಗೆ ಆಗಮಿಸಿ ನೀರಾಟವಾಡಿ ಸಂಭ್ರಮಿಸಿದರು. ಸೆಲ್ಫಿ ಕ್ಲಿಕ್ಕಿಸಿಕೊಂಡರು. ಇಲ್ಲಿನ ಖಾದ್ಯ ಸ್ಟಾಲ್ಗಳಲ್ಲಿ ಮಂಗಳೂರು ಖಾದ್ಯಗಳ ರುಚಿ ಅನುಭವಿಸಿದರು.