ದ್ವಿಚಕ್ರ ವಾಹನ ಸವಾರರನ್ನು ಅಡ್ಡಗಟ್ಟಿ ದರೋಡೆ ಪ್ರಕರಣ: ಕಾಪು ಮೂಲದ ಆರೋಪಿಯ ಬಂಧನ
Team Udayavani, Sep 27, 2020, 3:23 PM IST
ಉಡುಪಿ: ಮಣಿಪಾಲ ಮತ್ತು ಉಡುಪಿ ಭಾಗದಲ್ಲಿ ತಡರಾತ್ರಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವರನ್ನು ಅಡ್ಡಗಟ್ಟಿ ಹಣ ಮೊಬೈಲ್ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಕಾಪು ಬಳಿಯ ಮಲ್ಲಾರು ಕೊಂಬುಗುಡ್ಡೆಯ ಆಶಿಕ್ (19) ಎಂದು ಗುರುತಿಸಲಾಗಿದೆ. ಇತನೊಂದಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೋರ್ವ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.
ಸೆ.19ರಂದು ತಡರಾತ್ರಿ ಮಣಿಪಾಲ ಮತ್ತು ಉಡುಪಿ ಸುತ್ತಮುತ್ತಲಿನ ಭಾಗದಲ್ಲಿ ಬೈಕ್ ನಲ್ಲಿ ಹೋಗುವವರನ್ನು ಚೂರಿ ತೋರಿಸಿ ಬೆದರಿಸಿ ಹಣ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಮಣಿಪಾಲ ಠಾಣೆಯಲ್ಲಿ ಮೂರು ಮತ್ತು ಉಡುಪಿ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ವಶಕ್ಕೆ ಪಡೆದ ಗಾಂಜಾವನ್ನು ಪೆಡ್ಲರ್ಗೆ ಮಾರಿದ ಪೊಲೀಸರು!
ಆರೋಪಿ ಆಶೀಕ್ ಶನಿವಾರ ರಾತ್ರಿ ಮತ್ತೆ ಸುಲಿಗೆಗೆಂದು ಉಡುಪಿ- ಮಣಿಪಾಲ ಪರಿಸರದಲ್ಲಿ ಸುತ್ತಾಡುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಾನೆ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಬೈಕ್, ಚೂರಿ, ಸ್ಕ್ರೂ ಡ್ರೈವರ್, ಮತ್ತು ದೋಚಿದ್ದ ಒಂದು ಮೊಬೈಲನ್ನು ವಶಕ್ಕೆ ಪಡೆಯಲಾಗಿದೆ.
ಕೊಲೆ ಯತ್ನ ಪ್ರಕರಣದ ಆರೋಪಿ
ಆರೋಪಿ ಆಶೀಕ್ ತನ್ನ ಟೀಂ ಗರುಡ ಎಂಬ ಪಡ್ಡೆ ಹುಡುಗರ ಗ್ಯಾಂಗ್ ಒಂದನ್ನು ಕಟ್ಟಿಕೊಂಡು ಮೋಜುಮಸ್ತಿ ಮಾಡುತ್ತಿದ್ದ. ಮಣಿಪಾಲ ದರೋಡೆಯ ಮರದಿನ ಅಂದರೆ ಸೆ.20ರಂದು ಕಾಪು ಬಳಿಯ ಮಲ್ಲಾರಿನಲ್ಲಿ ನಡೆದ ಕೊಲೆ ಯತ್ನ ಪ್ರಕರಣದಲ್ಲಿ ಈತನೂ ಭಾಗಿಯಾಗಿದ್ದ. ಮಲ್ಲಾರಿನ ಅಬ್ದುಲ್ ಸತ್ತಾರ್ ಎಂಬವರನ್ನು ಕೊಲೆ ಮಾಡುವ ಉದ್ದೇಶದಿಂದ ತಲವಾರಿನಲ್ಲಿ ದಾಳಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.