ವಿವಾಹ ತಡೆದ ಅಧಿಕಾರಿಗಳು: ಬಾಲಕಿಯ ರಕ್ಷಣೆ
Team Udayavani, Dec 12, 2017, 10:42 AM IST
ಉಡುಪಿ: ಮಣಿಪಾಲದ ಪೆರಂಪಳ್ಳಿಯಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಗೆ ಮದುವೆ ಮಾಡಲು ಸಿದ್ಧತೆ ನಡೆದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಬಾಲ್ಯ ವಿವಾಹವನ್ನು ತಡೆದು ಬಾಲಕಿಯನ್ನು ರಕ್ಷಿಸಿದ್ದಾರೆ.
ಪ್ರಭಾವತಿಯವರ ಅಪ್ರಾಪ್ತ ವಯಸ್ಕ ಪುತ್ರಿಗೆ ಡಿ. 11ರ ಬೆಳಗ್ಗೆ 11 ಗಂಟೆಗೆ ಶ್ರೀಶ ಭಟ್ ಅವರ ಮನೆಯಲ್ಲಿ ಮದುವೆ ಕಾರ್ಯ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳ ಲಾಗಿತ್ತು. ಖಚಿತ ಮಾಹಿತಿ ಹಾಗೂ ಜಿಲ್ಲಾಧಿಕಾರಿ ಆದೇಶದಂತೆ ಬಾಲ್ಯ ವಿವಾಹವನ್ನು ತಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ತಹಶೀಲ್ದಾರರು ಮತ್ತು ಪೊಲೀಸ್ ಇಲಾಖೆಯ ವೃತ್ತ ನೀರೀಕ್ಷರು, ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿ ಚಾರಕಿ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಹಾಗೂ ಸಿಬಂದಿ ಬೆಳಗ್ಗೆ 8 ಗಂಟೆಗೆ ಮನೆಗೆ ಭೇಟಿ ನೀಡಿದರು.
ಭೇಟಿಯ ಸಮಯದಲ್ಲಿ ತಾಯಿ ಪ್ರಭಾವತಿ ಹಾಗೂ ಅವರ ಕುಟುಂಬ ಸಂಬಂಧಿಕರು ಇದ್ದರು. ಅವರೊಂದಿಗೆ ಚರ್ಚಿಸಿ 18 ವರ್ಷಕ್ಕೆ ಮುಂಚಿತವಾಗಿ ಮದುವೆ ಮಾಡಿದಲ್ಲಿ ಅದು ಬಾಲ್ಯ ವಿವಾಹವಾಗುವುದಾಗಿ, ಇದು ಕಾನೂನು ರೀತಿ ಅಪರಾಧ ಎನ್ನುವ ಬಗ್ಗೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಅವರಿಗೆ ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟರು.
ಅಪ್ರಾಪ್ತ ವಯ ಸ್ಕಳೆಂಬುದು ದೃಢ
ಬಾಲಕಿಯ ಜನ್ಮದಿನಾಂಕ, ಆಧಾರ್ಕಾರ್ಡ್ ದಾಖಲಾತಿ ಪರಿ ಶೀಲಿಸಿದಾಗ ಜನ್ಮ ದಿನಾಂಕವು 2001ರ ಜ. 7 ಆಗಿತ್ತು. ಇದರಿಂದ ಆಕೆ ಅಪ್ರಾಪ್ತ ವಯಸ್ಕಳೆಂಬುದನ್ನು ದೃಢಪಡಿಸಿಕೊಳ್ಳಲಾಯಿತು.
ಹೆತ್ತವರು, ಪುರೋಹಿತರಿಂದ ಮುಚ್ಚಳಿಕೆ
ಬಾಲಕಿಗೆ 18 ವರ್ಷ ಪೂರ್ತಿಯಾಗದೆ ವಿವಾಹ ಮಾಡಿಸುವುದಿಲ್ಲ ಎನ್ನುವ ಬಗ್ಗೆ ಆಕೆಯ ತಾಯಿಯಿಂದ ಮುಚ್ಚಳಿಕೆ ಪಡೆಯಲಾಯಿತು. ಅನಂತರ ವಿವಾಹ ನಡೆಸಿಕೊಡುವ ಪುರೋಹಿತ ಶ್ರೀಶ ಭಟ್ ಅವರನ್ನು ಭೇಟಿ ಮಾಡಿ ಈ ಮದುವೆಯ ಬಗ್ಗೆ ಅಧಿಕಾರಿಗಳು ವಿಚಾರಿಸಿದ್ದು, ವಧುವಿನ ತಾಯಿ ಮದುವೆ ಮಾಡಿಸಲು ತಿಳಿಸಿದ್ದು, ವಯಸ್ಸಿನ ಬಗ್ಗೆ ಹೆತ್ತ ವರಲ್ಲಿ ಕೇಳಿದಾಗ ಮದುವೆ ವಯಸ್ಸಾಗಿದೆ ಎಂದಿದ್ದರು. ಹೀಗಾಗಿ ನಾನು ಮದುವೆ ಮಾಡಿಸಲು ಒಪ್ಪಿ ಕೊಂಡಿರುತ್ತೇನೆ. ಈಗ ಆಕೆಗೆ 18 ವರ್ಷ ಪೂರ್ತಿಯಾಗದೇ ಇರುವುದು ತಿಳಿದುಬಂದಿದೆ. ಇದು ಕಾನೂನು ರೀತಿ ತಪ್ಪೆಂದು ಗೊತ್ತಾಗಿದೆ. ಇನ್ನು ಮುಂದೆ ದಾಖಲೆಯನ್ನು ಪರಿಶೀಲಿಸಿ, ವಯಸ್ಸನ್ನು ಖಚಿತಪಡಿಸಿಕೊಂಡೇ ವಿವಾಹ ಮಾಡಿಸುವುದಾಗಿ ಲಿಖೀತ ಮುಚ್ಚಳಿಕೆ ನೀಡಿದರು. ಬಳಿಕ ಅಧಿಕಾರಿಗಳು ತೆರಳಿದ್ದಾರೆ.