ಜಿಲ್ಲೆಯಾದ್ಯಂತ ಪೊಲೀಸ್ ಠಾಣೆಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ
Team Udayavani, May 26, 2020, 8:38 AM IST
ಗಂಗೊಳ್ಳಿ ಠಾಣೆಯ ಪಕ್ಕದಲ್ಲಿರುವ ಮರದಡಿ ಕುರ್ಚಿಗಳನ್ನು ಹಾಕಲಾಗಿದ್ದು ಅಲ್ಲಿಯೇ ವಿಚಾರಣೆ, ದೂರು ನೀಡುವ ಪ್ರಕ್ರಿಯೆ ನಡೆಯುತ್ತಿದೆ.
ಉಡುಪಿ/ಕುಂದಾಪುರ: ಪೊಲೀಸ್ ಸಿಬಂದಿಗಳಿಗೂ ಸೋಂಕು ಲಕ್ಷಣ ಕಾಣಿಸಿಕೊಳ್ಳುತ್ತಿರುವ ಕಾರಣ ಕೋವಿಡ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಾದ್ಯಂತ ಇರುವ ಎಲ್ಲ ಠಾಣೆಗಳಲ್ಲಿಯೂ ಪೊಲೀಸ್ ಇಲಾಖೆ ವತಿಯಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕುಂದಾಪುರ ಹೊರ ವಿಭಾಗದ ಬಹುತೇಕ ಎಲ್ಲ ಠಾಣೆಗಳಲ್ಲಿಯೂ ಹೊರಗೆ ಪೆಂಡಾಲ್, ಮರದಡಿಯೇ ಠಾಣೆಯಾಗಿ ಮಾರ್ಪಟ್ಟಿದೆ. ಆದರೂ ಸಾರ್ವಜನಿಕ ವಲಯದಲ್ಲಿರುವುದರಿಂದ ಪೊಲೀಸರಿಗೆ ಇನ್ನಷ್ಟು ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಜಿಲ್ಲಾ ಪೊಲೀಸ್ ಎಸ್ಪಿ ಕಚೇರಿ, ಉಡುಪಿ ಸಬ್ ಡಿವಿಷನ್, ಕಾರ್ಕಳ ಸಬ್ ಡಿವಿಷನ್, ಕುಂದಾಪುರ ಸಬ್ ಡಿವಿಷನ್, ಬೈಂದೂರು ಸರ್ಕಲ್, ಕುಂದಾಪುರ ಸರ್ಕಲ್, ಬ್ರಹ್ಮಾವರ ಸರ್ಕಲ್, ಉಡುಪಿ ಸರ್ಕಲ್, ಕಾಪು ಸರ್ಕಲ್, ಕಾರ್ಕಳ ಸರ್ಕಲ್, ಬೈಂದೂರು, ಕೊಲ್ಲೂರು, ಗಂಗೊಳ್ಳಿ, ಕುಂದಾಪುರ, ಶಂಕರನಾರಾಯಣ, ಕುಂದಾಪುರ ಟ್ರಾಫಿಕ್, ಕೋಟ, ಬ್ರಹ್ಮಾವರ, ಮಲ್ಪೆ, ಉಡುಪಿ ಟ್ರಾಫಿಕ್, ಹಿರಿಯಡ್ಕ, ಉಡುಪಿ ನಗರ, ಮಣಿಪಾಲ, ಕಾರ್ಕಳ ಗ್ರಾಮಾಂತರ, ಹೆಬ್ರಿ, ಕಾಪು, ಪಡುಬಿದ್ರಿ, ಶಿರ್ವ, ಅಜೆಕಾರು, ಅಮಾಸೆ ಬೈಲು, ಕಾರ್ಕಳ ನಗರ, ಮಹಿಳಾ ಪೊಲೀಸ್ ಠಾಣೆ, ಕುಂದಾಪುರ ಗ್ರಾ., ಸೆನ್ ಪೊಲೀಸ್ ಠಾಣೆಗಳಿವೆ.
ಏನೆಲ್ಲ ಕ್ರಮಗಳು ?
ಜಿಲ್ಲೆಯಲ್ಲಿರುವ ಸಾವಿರಕ್ಕೂ ಅಧಿಕ ಮಂದಿ, ಪೊಲೀಸರು, ಗೃಹ ರಕ್ಷಕ ದಳ, ಜಿಲ್ಲಾ ಮೀಸಲು ಪಡೆ ಪೊಲೀಸರೆಲ್ಲರಿಗೂ 2 ಎನ್.95 ಮಾಸ್ಕ್ಗಳು ಹಾಗೂ 2 ಸಾಮಾನ್ಯ ಮಾಸ್ಕ್ಗಳನ್ನು ನೀಡಲಾಗಿದೆ. ಎಲ್ಲ ಪೊಲೀಸರಿಗೂ ಮುಖ ಮುಚ್ಚಿಕೊಳ್ಳುವ ಫೇಸ್ ಶೀಲ್ಡ್ ಕೊಡಲಾಗಿದೆ. ಕೈಗವಸುಗಳನ್ನು ಕೂಡ ನೀಡಲಾಗಿದೆ. ಕೈ ತೊಳೆದು ಒಳಗೆ ಬರುವಂತೆ ಠಾಣೆಗಳ ಹೊರಗಡೆ ಬಕೆಟ್ಗಳಲ್ಲಿ ನೀರನ್ನು ಇಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಇನ್ನು ಮುಂದೆ ಪೊಲೀಸರಿಗೆ ಸೋಂಕು ಪ್ರಕರಣ ಕಂಡುಬಂದರೆ ಪರ್ಯಾಯ ವ್ಯವಸ್ಥೆಯನ್ನು ಗುರುತಿಸಲಾಗಿದೆ. ಸೀಲ್ಡೌನ್ ಆದ ಠಾಣೆಗಳನ್ನೂ ಸ್ಯಾನಿಟೈಸ್ಗೆ ಒಳಪಡಿಸಲಾಗಿದೆ. ಕೆಲವೇ ದಿನಗಳಲ್ಲಿ ಸಿಬಂದಿ ಅಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
– ವಿಷ್ಣುವರ್ಧನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಉಡುಪಿ.