ಕರಾವಳಿಯ ವಿವಿಧೆಡೆ ಸಾಧಾರಣ ಮಳೆ
Team Udayavani, Mar 31, 2019, 6:30 AM IST
ಮಂಗಳೂರು/ ಅಜೆಕಾರು: ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಶನಿವಾರ ಸಂಜೆ ವೇಳೆಗೆ ಸಾಧಾರಣ ಮಳೆಯಾಗಿದೆ.
ಸುಬ್ರಹ್ಮಣ್ಯ ಮತ್ತು ಕಾರ್ಕಳದ ಅಜೆಕಾರು, ನಾರಾವಿ ಸುತ್ತಮುತ್ತಲ ಮಾ. 30ರ ಸಂಜೆ 4ರ ಸುಮಾರಿಗೆ ಮಳೆ ಸುರಿದಿದೆ.
ಅಂಡಾರು, ಶಿರ್ಲಾಲು, ಕೆರ್ವಾಶೆ, ಕಾಡುಹೊಳೆ, ಮುನಿಯಾಲು ಪರಿಸರ ದಲ್ಲಿ ಸುಮಾರು ಅರ್ಧ ಗಂಟೆ ಕಾಲ ಮಳೆ ಸುರಿದಿದೆ. ಹಿರ್ಗಾನ ಪರಿಸರದಲ್ಲಿ ತುಂತುರು ಮಳೆ ಬಿದ್ದಿದೆ.
ಮಳೆಯ ಜತೆಗೆ ಸಿಡಿಲು ಗುಡುಗುಗಳ ಆರ್ಭಟದಿಂದಾಗಿ ಪರಿಸರದಲ್ಲಿ ಕೆಲವು ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಈ ಪರಿಸರದಲ್ಲಿ ಕಳೆದ 5 ತಿಂಗಳಿಂದ ಮಳೆ ಬೀಳದೆ ರೈತರು ತೀವ್ರ ಸಂಕಷ್ಟಪಟ್ಟಿದ್ದರೆ ಕುಡಿಯುವ ನೀರಿಗೂ ತತ್ವಾರ ಎದುರಾಗಿತ್ತು. ಸುರಿದ ಮಳೆಯಿಂದಾಗಿ ಅಲ್ಪ ಮಟ್ಟಿಗೆ ಇಳೆ ತಂಪಾಗಿದೆ.
ತಾಪಮಾನ ಏರಿಕೆ
ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಗರಿಷ್ಠ ತಾಪಮಾನ ಏರಿಕೆಯಾಗುತ್ತಿದ್ದು, ಸೆಕೆಯ ಪ್ರಮಾಣ ಹೆಚ್ಚಿತ್ತು. ಜಿಲ್ಲೆಯಲ್ಲಿ 35 ಡಿ.ಸೆ. ಗರಿಷ್ಠ ಮತ್ತು 25 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಎರಡು ದಿನಗಳ ಕಾಲ ಕರಾವಳಿ ಪ್ರದೇಶದ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.