ಉಡುಪಿ ಜಿಲ್ಲೆ ವಿವಿಧೆಡೆಗಳಲ್ಲಿ ಕ್ವಾರಂಟೈನ್ ಸೇವೆ
Team Udayavani, Apr 11, 2020, 10:37 AM IST
ಉಡುಪಿ: ಕೋವಿಡ್ 19 ಸೋಂಕು ಆರಂಭ ಆದಲ್ಲಿಂದ ಜಿಲ್ಲಾ ಆರೋಗ್ಯ ಇಲಾಖೆ ಸಜ್ಜಾಗಿ ದಿನದ 24 ಗಂಟೆಯೂ ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿದೆ. ಉಡುಪಿ, ಕುಂದಾಪುರ ಮತ್ತು ಕಾರ್ಕಳದ 15 ಕಡೆಗಳಲ್ಲಿ ಈ ಕೆಲಸ ನಡೆಯುತ್ತಿದೆ.
ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ಕೋವಿಡ್ 19 ಸೋಂಕಿತರಿಗೆ ಚಿಕಿತ್ಸೆ ನೀಡಿದರೆ ಉಳಿದೆಡೆ ತೀವ್ರ ಉಸಿರಾಟದ ಸಮಸ್ಯೆ ಇರುವವರು, ಸೋಂಕಿನ ಶಂಕೆ ಇರುವವರು, ಸೋಂಕಿತರ ಸಂಪರ್ಕ ಹೊಂದಿದವರ ಮೇಲೆ ನಿಗಾ ಇಡಲಾಗುತ್ತಿದೆ.
ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳು, ಕುಂದಾಪುರದ ಹಿಂದಿನ ಆದರ್ಶ ಆಸ್ಪತ್ರೆ, ಕಾರ್ಕಳದ ಭುವನೇಂದ್ರ ಬಾಲಕಿಯರ ಹಾಸ್ಟೆಲ್, ಮಣಿಪಾಲ ಆಸ್ಪತ್ರೆಗಳಲ್ಲಿ ಐಸೋಲೇಶನ್ ವಾರ್ಡ್ ಗಳನ್ನು ಸಿದ್ಧಪಡಿಸಿಡಲಾಗಿದೆ. ಇಲ್ಲಿ ಕೇವಲ ಶಂಕಿತರನ್ನು ಮಾತ್ರ ಸೇರಿಸಿ ಕೊಳ್ಳಲಾಗುವುದು.
ಜಿಲ್ಲೆಯ 9 ಕಡೆಗಳಲ್ಲಿ ನಿಗಾ ವಹಿಸಲು
ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಉದ್ಯಾವರದ ಎಸ್ಡಿಎಂ ಆಯು ರ್ವೇದ ಆಸ್ಪತ್ರೆ, ಉಡುಪಿ ಬನ್ನಂಜೆ ಬಿಸಿಎಂ ಹಾಸ್ಟೆಲ್, ಅಜ್ಜರಕಾಡಿನ ಗ್ರಂಥಾಲಯ ಕಟ್ಟಡ, ಕುಂದಾಪುರದ ಹರಿಪ್ರಸಾದ್ ಹೊಟೇಲ್, ಕುಂದಾಪುರದ ದೇವರಾಜ ಅರಸು ಹಾಸ್ಟೆಲ್, ಕಾರ್ಕಳದ ಪ.ಪೂ. ಮೆಟ್ರಿಕ್ ಹಾಸ್ಟೆಲ್, ಭುವನೇಂದ್ರ ಹುಡುಗರ ಹಾಸ್ಟೆಲ್ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಉಡುಪಿಯ ಸೆಂಚುರಿ ಹೊಟೇಲನ್ನೂ ಅಗತ್ಯವಿದ್ದರೆ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ.
ಸೋಂಕು ದೃಢಪಡದೆ ಕೇವಲ ಶಂಕಿತರಾಗಿದ್ದರೆ ಅವರಿಗೆ ಸಹಜವಾದ ಆಹಾರ ಕ್ರಮದಲ್ಲಿ ನಿಗಾ ವಹಿಸಲಾಗುತ್ತಿದೆ. ಇಂತಹವರು ಇತರೆಡೆಗಳಲ್ಲಿ ತಿರುಗಾಡಬಾರದು ಎಂಬ ಕಾರಣಕ್ಕೆ ಕ್ವಾರಂಟೈನ್ನಲ್ಲಿಡಲಾಗುತ್ತಿದೆ. ವಿದೇಶಗಳಿಂದ ಬಂದವರ ಕ್ವಾರಂಟೈನ್ ಅವಧಿ ಜಿಲ್ಲೆಯಲ್ಲಿ ಮುಗಿದಿದೆ. ದಿನವೂ ಇತರರ ಕ್ವಾರಂಟೈನ್ ಅವಧಿ ಮುಗಿದು ಬಿಡುಗಡೆಗೊಳ್ಳುತ್ತಿದ್ದರೆ ಹೊಸದಾಗಿ ನೋಂದಣಿಯೂ ನಡೆಯುತ್ತಿದೆ.
ಕೋವಿಡ್ 19 ಸೋಂಕು ಹರಡದಂತೆ ಜಿಲ್ಲೆಯ ವಿವಿಧ ಸರಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ಹಾಸ್ಟೆಲ್, ಹೊಟೇಲ್ಗಳಲ್ಲಿ ಕ್ವಾರಂಟೈನ್ ಸೇವೆ ನೀಡಲಾಗುತ್ತಿದೆ.
– ಡಾ| ಪ್ರಶಾಂತ ಭಟ್, ಜಿಲ್ಲಾ ನೋಡಲ್ ಅಧಿಕಾರಿ, ಉಡುಪಿ