“ಮಾಹಿತಿ ತಂತ್ರಜ್ಞಾನದ ಪಿತಾಮಹ ರಾಜೀವ್ ಗಾಂಧಿ’
ರಾಜೀವ್ ಗಾಂಧಿ 29ನೇ ಪುಣ್ಯತಿಥಿ
Team Udayavani, May 22, 2020, 5:53 AM IST
ಉಡುಪಿ: ಇಂದು ಅಂಗೈಯಲ್ಲಿ ವಿಶ್ವವನ್ನು ತಲುಪಲು ಸಾಧ್ಯವಾಗುವಂತಹ ಮಾಹಿತಿ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಿ ದವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ.
ಇಂದಿನ ಡಿಜಿಟಲ್ ಇಂಡಿಯಾ ಅನ್ನುವ ದೊಡ್ಡ ಕೂಗಿಗೆ ಕಾರಣೀಕರ್ತರಾದ ರಾಜೀವ್ ಗಾಂಧಿ ಅವರನ್ನು ಇದನ್ನು ಪ್ರಚಾರ ಮಾಡುವ ನಾಯಕರುಗಳು ಮರೆತು ಬಿಟ್ಟಿದ್ದಾರೆ ಎಂದು ಮಾಜಿ ಶಾಸಕ ಯು. ಆರ್. ಸಭಾಪತಿ ಹೇಳಿದರು.
ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಆಶ್ರಯದಲ್ಲಿ ಕಾಂಗ್ರೆಸ್ ಭವನದಲ್ಲಿ ಜರಗಿದ ರಾಜೀವ್ ಗಾಂಧಿ 29ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಂಚಾಯತ್ ರಾಜ್ ವ್ಯವಸ್ಥೆಯನ್ನು ಕೇಂದ್ರೀಕರಿಸುವುದರ ಮೂಲಕ ತಳ ಹಂತದ ಪ್ರತಿನಿಧಿಗಳು ಸರಕಾರ ರಚನೆಯ ಕಾರ್ಯದಲ್ಲಿ ಭಾಗವಹಿಸುವಂತೆ ಸಂವಿಧಾನದ ತಿದ್ದುಪಡಿ ಮಾಡಿ ಗ್ರಾ.ಪಂ., ತಾ.ಪಂ., ಜಿ.ಪಂ.ಗಳಿಗೆ ಶಕ್ತಿಯನ್ನು ತುಂಬುವ ಕೆಲಸವನ್ನು ರಾಜೀವ್ ಗಾಂಧಿ ಮಾಡಿದ್ದಾರೆ.
ಯುವ ಜನತೆ ಈ ದೇಶದ ಭವಿಷ್ಯ ಎನ್ನುವ ದೂರ ದೃಷ್ಟಿಯಿಂದ 18ನೇ ವರ್ಷಕ್ಕೆ ಮತದಾನದ ಹಕ್ಕನ್ನು ಕೊಡುವ ಮಹತ್ತರವಾದ ಕಾನೂನನ್ನು ತಂದ ರಾಜೀವ್ ಗಾಂಧಿ, ಇಂದಿರಾ ಗಾಂಧಿಯವರ ಅನಂತರ ಭಾರತಕ್ಕೆ ಜಗತ್ತು ಗಮನಿಸುವಂತಹ ನಾಯಕತ್ವವನ್ನು ನೀಡಿದವರು ಎಂದರು.
ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕಿ ರೊಶನಿ ಒಲಿವರ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನೆಯ ಜಿಲ್ಲಾ ಉಸ್ತುವಾರಿ ಡಾ| ಸುನೀತಾ ಶೆಟ್ಟಿ ವಂದಿಸಿದರು.
ಈ ಸಂದರ್ಭದಲ್ಲಿ ವೆರೋನಿಕಾ ಕರ್ನೇಲಿಯೋ, ರಮೇಶ್ ಕಾಂಚನ್, ಹರೀಶ್ ಕಿಣಿ, ಉದ್ಯಾವರ ನಾಗೇಶ್ ಕುಮಾರ್, ಮಹಾಬಲ ಕುಂದರ್, ಲೂವಿಸ್ ಲೋಬೋ, ಜಯಶ್ರೀ ಶೇಟ್, ಜನಾರ್ದನ ಭಂಡಾರ್ಕಾರ್, ಜಿತೇಶ್ ಕುಮಾರ್, ಅಶೋಕ್ ಸುವರ್ಣ, ಉಪೇಂದ್ರ ಗಾಣಿಗ, ವೆಂಕಟೇಶ್ ಪೆರಂಪಳ್ಳಿ, ಸುಧನ್ವ ಶೆಟ್ಟಿ, ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.