ಅಪಾರ ಕೃಷಿಭೂಮಿ ನೀರು ಪಾಲು
ಸಂಕಲಕರಿಯ ಶಾಂಭವಿ ಅಣೆಕಟ್ಟು ಬಳಿ ತಡೆಗೋಡೆ ಕುಸಿತ
Team Udayavani, May 21, 2020, 5:31 AM IST
ಬೆಳ್ಮಣ್: ನೂರಾರು ಎಕರೆ ಕೃಷಿಭೂಮಿಗೆ ನೀರುಣಿಸುತ್ತಿದ್ದ ಸಂಕಲ ಕರಿಯ ಶಾಂಭವಿ ನದಿ ಅಣೆಕಟ್ಟುವಿನ ಬಳಿಯ ಉಡುಪಿ ಜಿಲ್ಲಾ ಭಾಗದ ತಡೆಗೋಡೆ ಕುಸಿದು ಅಪಾರ ಕೃಷಿ ಭೂಮಿ ನೀರು ಪಾಲಾಗಿದೆ.
ಮಳೆಗಾಲದ ಸಂದರ್ಭ ಅಣೆಕಟ್ಟುವಿನ ಇಕ್ಕೆಲಗಳಲ್ಲಿ ತಡೆಗೋಡೆ ಕುಸಿದು ಅಕ್ಕ ಪಕ್ಕದ ಕೃಷಿಭೂಮಿಗಳು ನೀರು ಪಾಲಾಗಿದ್ದವು. ಇವುಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲಾ ಬಾಗದಲ್ಲಿ ಆ ಭಾಗದ ಜಿಲ್ಲಾಡಳಿತ ಹಾಗೂ ಇಲಾಖೆ ನೂತನ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದರೂ ಉಡುಪಿ ಭಾಗದಲ್ಲಿನ ಕುಸಿತದ ಬಗ್ಗೆ ಇಲ್ಲಿನ ಜಿಲ್ಲಾಡಳಿತ ಹಾಗೂ ಇಲಾಖೆ ತಲೆ ಕೆಡಿಸದಿರುವುದು ಈ ಭಾಗದ ಕೃಷಿಕರ ಬೇಸರಕ್ಕೆ ಕಾರಣವಾಗಿದೆ.
ಜಿಲ್ಲಾಡಳಿತಕ್ಕೂ ದೂರು
ಸಂಕಲಕರಿಯ ಮೇರಿ ರೋಮನ್ ಸೆರಾವೋರವರ ಗದ್ದೆ ಅರ್ಧಕ್ಕೂ ಹೆಚ್ಚು ಕುಸಿದು ಅಣೆಕಟ್ಟುವಿನ ಪರಿಣಾಮ ಇದೀಗ ಆ ಕುಟುಂಬ ಪರಿತಪಿಸುವಂತಾಗಿದೆ.
ಈಗಾಗಲೇ ಪಂಚಾಯತ್ ಮಟ್ಟದಿಂದ ಹಿಡಿದು ಜಿಲ್ಲಾಡಳಿತಕ್ಕೂ ದೂರು ನೀಡಲಾಗಿದ್ದು ಯಾರೂ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.