ಮುಳುಗು ತಜ್ಞರ ಯತ್ನ ವಿಫಲ
Team Udayavani, Feb 2, 2019, 3:52 AM IST
ಮಲ್ಪೆ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಮತ್ತು ಅದರಲ್ಲಿದ್ದ 7 ಮಂದಿ ಮೀನುಗಾರರು ನಾಪತ್ತೆಯಾಗಿ 47 ದಿನಗಳು ಕಳೆದಿವೆ. ಮೀನುಗಾರರು ಎಲ್ಲಿ ಹೋದರು, ಏನಾದರು ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ. ರಾಜ್ಯ-ಕೇಂದ್ರ ಸರಕಾರದ ಮಟ್ಟದಲ್ಲಿ ನಾಪತ್ತೆಯಾಗಿರುವ ಮೀನುಗಾರರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ.
ನೌಕಾಪಡೆಯ ಹಡಗು ಶೋಧ ಮುಂದುವರಿಸಿದ್ದು, ಗುರುವಾರ ಮುಳುಗು ತಜ್ಞರನ್ನು ಕರೆಯಿಸಲಾಗಿದೆ. ಸಮುದ್ರದಲ್ಲಿ ಸುಮಾರು 35 ಮೀ. ಆಳದ ವರೆಗೆ ಮುಳುಗಿ ಶೋಧನೆ ನಡೆಸಿದ ಅವರು ತಳಭಾಗದಲ್ಲಿ ಕತ್ತಲು ಆವರಿಸಿರುವುದರಿಂದ ಹಿಂದಿರು ಗಿದ್ದಾರೆ ಎಂದು ತಿಳಿದು ಬಂದಿದೆ.
ಹೋರಾಟಕ್ಕೆ ಸಜ್ಜು
ಇತ್ತ ಮೀನುಗಾರರ ಆಕ್ರೋಶ ಹೆಚ್ಚುತ್ತಿದ್ದು, ಸರಕಾರದಿಂದಾಗಲಿ, ಅಧಿಕಾರಿಗಳಿಂದಾ ಗಲೀ ಸಮರ್ಪಕ ಮಾಹಿತಿ ಸಿಗುತ್ತಿಲ್ಲ; ವಾರದೊಳಗೆ ಸಮರ್ಪಕ ಮಾಹಿತಿ ಲಭಿಸದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಮಾಡಿ ಪ್ರತಿಭಟಿಸುತ್ತೇವೆ ಎಂದು ಮೀನುಗಾರರು ಎಚ್ಚರಿಸಿದ್ದಾರೆ.
ದೇವಿ ಅಭಯ
ಅಂಬಲಪಾಡಿ ದೇವಸ್ಥಾನದಲ್ಲಿ ಶುಕ್ರವಾರ ನಡೆದ ದೇವಿ ದರ್ಶನದಲ್ಲಿ ನಾಪತ್ತೆಯಾಗಿರುವ ಎಲ್ಲ ಮೀನುಗಾರರು ಎಲ್ಲೋ ಒಂದು ಕಡೆ ಬಂದಿಗಳಾಗಿದ್ದಾರೆ; ಮೂರು ವಾರದ ಒಳಗೆ ಅವರ ಸುಳಿವು ಕೊಡುತ್ತೇನೆ ಎಂದು ದೇವಿಯ ನುಡಿ ಆಗಿರುವುದಾಗಿ ಕುಟುಂಬಿಕರು ತಿಳಿಸಿದ್ದಾರೆ.