ಫಾಸ್ಟ್ಯಾಗ್ ನಗದು ಪಾವತಿಗೆ ಯಾವುದೇ ವಿನಾಯಿತಿ ಇಲ್ಲ
Team Udayavani, Jan 17, 2020, 6:54 AM IST
ಪಡುಬಿದ್ರಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯು ಬುಧವಾರದಿಂದ ಫಾಸ್ಟ್ಯಾಗ್ ಕಡ್ಡಾಯಗೊಳಿಸಿದೆ. ನಗದು ಪಾವತಿಸಿ ಸಾಗುವ ವಾಹನಗಳಿಗೆ 24 ಗಂಟೆಗಳೊಳಗಾಗಿ ವಾಪಸಾದರೂ ಯಾವುದೇ ವಿನಾಯಿತಿ ಇರುವುದಿಲ್ಲ. ಮತ್ತೆ ಏಕಮುಖ ದರವನ್ನು ಪಾವತಿಸಿಯೇ ಸಾಗಬೇಕಾಗುತ್ತದೆ. ಯಾವುದೇ ವಿನಾಯಿತಿ ಲಭ್ಯವಾಗಬೇಕಿದ್ದಲ್ಲಿ ವಾಹನವು ಫಾಸ್ಟ್ಯಾಗನ್ನು ಹೊಂದಿರಲೇ ಬೇಕೆಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಟೋಲ್ಪ್ಲಾಜಾಗಳಿಗೆ ಜ. 15ರಂದು ರವಾನಿಸಿದ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ನಮೂದಿಸಿದೆ.
ಹೆಜಮಾಡಿ ಟೋಲ್ ಪ್ಲಾಜಾದಲ್ಲಿ
ಗುರುವಾರ ಕೇವಲ ಒಂದು ದ್ವಾರವನ್ನು ನಗದು ಪಾವತಿಗೆ ಮೀಸಲಿಡಲಾಗಿತ್ತು. ಆ ವೇಳೆ ಟೋಲ್ನಲ್ಲಿ ವಾಹನಗಳ ಒತ್ತಡವೂ ಹೆಚ್ಚಾಗಿತ್ತು. ಫಾಸ್ಟ್ಯಾಗ್ ಇದ್ದರೂ ಆ ಖಾತೆಯಲ್ಲಿ ನಗದು ಇಲ್ಲವಾದಲ್ಲಿ ಅಂತಹ ವಾಹನ ಸವಾರರು ದುಪ್ಪಟ್ಟು ಪಾವತಿಸಿ ತೆರಳಬೇಕಾಗುತ್ತದೆ. ಕೆಲವರು ತಾವು ವಾಹನವನ್ನು ಹಿಂದೆಗೆದು ಖಾತೆಗೆ ಹಣ ತುಂಬಿಸಿ ಮುಂದುವರಿದರು ಅಥವಾ ನಗದು ಪಾವತಿ ಸಾಲಿನಲ್ಲಿ ತೆರಳಿದರು.
ಫಾಸ್ಟ್ಯಾಗ್ ಇಲ್ಲದಿದ್ದರೆ ಸಿಂಗಲ್ ಟಿಕೆಟ್
ಬಂಟ್ವಾಳ: ಗುರುವಾರ ಸಂಜೆ ಬಳಿಕ ಬ್ರಹ್ಮರಕೂಟ್ಲು ಫ್ಲಾಜಾದಲ್ಲಿ ಫಾಸ್ಟ್ಯಾಗ್ ಅಳವಡಿಸದೇ ಇರುವ ಎಲ್ಲ ವಾಹನಗಳಿಗೆ ರಿಯಾಯಿತಿ ಸಿಗುವ ಡಬಲ್ ಟಿಕೆಟ್ ಬದಲು ಸಿಂಗಲ್ ಟಿಕೆಟ್ ಮಾತ್ರ ನೀಡಲಾಗುತ್ತಿದೆ.
ಬಸ್ ಸಂಚಾರ ಮೊಟಕು
ಉಳ್ಳಾಲ: ತಲಪಾಡಿ ಟೋಲ್ ಪ್ಲಾಜಾ ದಲ್ಲಿ ಗುರುವಾರ ಸಂಜೆಯಿಂದಲೇ ನಗದು ಸ್ವೀಕಾರಕ್ಕೆ ಒಂದು ಲೇನ್ ಮಾತ್ರ ಕಲ್ಪಿಸಿದ್ದ ರಿಂದ ವಾಹನಗಳ ಸರದಿ ಸಾಲು ಹೆಚ್ಚಾಗಿತ್ತು.ಮಂಗಳೂರಿನಿಂದ ತಲಪಾಡಿಗೆ ಬರುವ ಬಸ್ಗಳಿಗೂ ಟೋಲ್ ಕಡ್ಡಾಯವಾದ್ದರಿಂದ ಆ ಬಸ್ಗಳು ಗೇಟ್ ಸಮೀಪದಿಂದಲೇ ಮರಳಿದವು. ಮೇಲಿನ ತಲಪಾಡಿ ಮತ್ತು ಕೇರಳದ ಗಡಿ ಪ್ರದೇಶಕ್ಕೆ ತೆರಳುವವರು ತೊಂದರೆಗೊಳಗಾದರು.
ಬ್ಯಾಂಕ್ಗಳಲ್ಲಿ ಅರ್ಜಿ ಸಲ್ಲಿಸಿದವರು ಅತಂತ್ರ
ಈ ನಡುವೆ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಫಾಸ್ಟ್ಯಾಗ್ಗಾಗಿ ಅರ್ಜಿ ಸಲ್ಲಿಸಿದ ಸಾರ್ವಜನಿಕರಿದ್ದು, ತಿಂಗಳು ಕಳೆದರೂ ಅವರಿಗೆ ಫಾಸ್ಟ್ಯಾಗ್ ಲಭ್ಯವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.