ಅಗತ್ಯ ವಸ್ತು ಖರೀದಿಗೆ ಪೊಲೀಸರೂ ಸರತಿಯಲ್ಲಿ
Team Udayavani, Apr 11, 2020, 4:55 PM IST
ಉಡುಪಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಎಲ್ಲಾ ನಾಗರಿಕರು ಮನೆಯಲ್ಲೇ ಇದ್ದು ಕೋವಿಡ್-19 ಹರಡದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಹಾಗೆಯೇ ಪೊಲೀಸರೂ ಸುವ್ಯವಸ್ಥೆ ಕಾಪಾಡಲು ಹಗಲಿರುಳು ದುಡಿಯುತ್ತಿದ್ದಾರೆ. ಸದ್ಯ ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಕೆಲ ಅಂಗಡಿ ಮುಂಗಟ್ಟುಗಳು ತೆರೆದಿದ್ದು ಆ ಮೂಲಕ ದಿನಸಿ, ತರಕಾರಿ ಖರೀದಿಸಲು ನಾಗರಿಕರಿಗೆ ಅವಕಾಶ ಕಲ್ಪಿಸಲಾಗಿದೆ. ನಗರದ ತರಕಾರಿ ಮಾರುಕಟ್ಟೆಯಲ್ಲೂ ಪೊಲೀಸರು ಸಾಲು ನಿಂತು ತರಕಾರಿ ಖರೀದಿಸುವ ದೃಶ್ಯ ಗಮನ ಸೆಳೆಯಿತು.
ಲಾಕ್ಡೌನ್ನ ನಡುವೆಯೂ ನಿಯಮ ಮುರಿದು ಹೊರಬರುವ ಮಂದಿಯನ್ನು ಕಿವಿಹಿಂಡಿ ಬುದ್ಧಿ ಕಲಿಸುವಲ್ಲಿ ಪೊಲೀಸರು ಪರಿಶ್ರಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಜನ ಸಭ್ಯವಾಗಿ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಪೊಲೀಸರು ಅನಗತ್ಯ ಓಡಾಡುವವರು ತಡೆದು ಬುದ್ಧಿವಾದ ಹೇಳಿ ಕಳಿಸುತ್ತಿದ್ದಾರೆ.
ಈ ನಡುವೆ ಶಿವಮೊಗ್ಗದಿಂದ ಒಂದು ತುಕಡಿ ಪೊಲೀಸರು ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ಅಂಗಡಿ ಹೊಟೇಲ್ ಇಲ್ಲದಿರುವುದರಿಂದ ಪೊಲೀಸರು ದಿನನಿತ್ಯದ ಆಹಾರ ಪದಾರ್ಥಗಳನ್ನು ತಾವೇ ಮಾಡಬೇಕಿದೆ. ಶುಕ್ರವಾರ ನಗರದ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಯಲ್ಲಿ ಈ ಪೊಲೀಸರು ನಿರತರಾಗಿದ್ದರು.
ಶಿವಮೊಗ್ಗದಿಂದ ಈಗಾಗಲೇ ಎರಡು ತುಕಡಿಗಳಲ್ಲಿ ಪೊಲೀಸರು ಬಂದಿದ್ದು ಕುಂದಾಪುರ ಹಾಗೂ ಉಡುಪಿಯಲ್ಲಿ ಕರ್ತವ್ಯನಿರತರಾಗಿದ್ದಾರೆ.