ಉಡುಪಿ: ವರ್ಷ ಕಳೆದರೂ ದುರಸ್ತಿಯಾಗದ ಚರಂಡಿಗಳು!
Team Udayavani, Oct 13, 2020, 10:59 PM IST
ಜೋಡುಕಟ್ಟೆ ಬಳಿ ಒಳಚರಂಡಿಯ ಕಾಂಕ್ರೀಟ್ ಸ್ಲಾéಬ್ ತುಂಡಾಗಿದೆ.
ಉಡುಪಿ: ನಗರದ ವಿವಿಧೆಡೆ ಒಳಚರಂಡಿಗೆ ಆಳವಡಿಸಲಾದ ಕಾಂಕ್ರೀಟ್ ಓವರ್ ಸ್ಲಾéಬ್ ಬಾಯ್ದೆರೆದು ವರ್ಷ ಸಮೀಪಿಸುತ್ತಿದ್ದರೂ ನಗರಸಭೆ ಅಧಿಕಾರಿಗಳು ಮಾತ್ರ ಜೀವಹಾನಿ ಯಾಗುವವರೆಗೆ ದುರಸ್ತಿಗೊಳಿಸುವ ಗೋಜಿಗೆ ಹೋಗಿಲ್ಲ. ನಗರದಲ್ಲಿ ಸುಮಾರು 25ರಿಂದ 30 ಒವರ್ ಸ್ಲಾéಬ್ಗಳು ತುಂಡಾಗಿದೆ. ನಗರಸಭೆಯ 35 ವಾರ್ಡ್ನಲ್ಲಿ ಕನಿಷ್ಠವೆಂದರೂ 10 ಕಾಂಕ್ರೀಟ್ ಓವರ್ ಸ್ಲಾéಬ್ ಮುರಿದು ಒಟ್ಟು 400ಕ್ಕೂ ಅಧಿಕ ಓವರ್ ಸ್ಲಾéಬ್ ಹಾಳಾಗಿವೆ.
ನಗರದ ಹೃದಯ ಭಾಗದ
ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಮೀಪದ ಮಳೆ ನೀರಿನ ಚರಂಡಿ, ರಾ.ಹೆ. 169 (ಎ) ಬನ್ನಂಜೆ- ಉಡುಪಿ ಮಾರ್ಗ, ಜೋಡು ಕಟ್ಟೆಯ ಮೆಡಿಕಲ್ ಸೆಂಟರ್ ಎದುರಿನ ಬೃಹತ್ ಗಾತ್ರದ ನೀರಿನ ಒಳ ಚರಂಡಿ ಹಾದು ಹೋಗುವ ಮಾರ್ಗದಲ್ಲಿ ಸಂಚರಿಸುವ ಪಾದಚಾರಿಗಳಿಗೆ ಅನುಕೂಲ
ವಾಗುವಂತೆ ಚರಂಡಿಗೆ ಆಳವಡಿಸಲಾದ ಕಾಂಕ್ರೀಟ್ ಒವರ್ ಸ್ಲಾéಬ್ಗಳು ಕೆಲವೆಡೆ ತುಂಡಾಗಿದ್ದು, ಕೆಲವೆಡೆ ಬಾಯ್ದೆರೆದುಕೊಂಡಿವೆ. ನಡೆಯುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಚರಂಡಿಯೊಳಗೆ ಬಿದ್ದು ಕೈಕಾಲು ಮುರಿದುಕೊಳ್ಳುವುದು ಗ್ಯಾರಂಟಿ.
ಪೊಳ್ಳು ಭರವಸೆ!
ಕಳೆದ ಬಾರಿ ನಗರಸಭೆ ಅಧಿಕಾರಿಗಳು ಒಡೆದುಹೋದ ಕಾಂಕ್ರೀಟ್ ಒವರ್ ಸ್ಲಾéಬ್ ಆಳವಡಿಕೆಗೆ ಅಂದಾಜುಪಟ್ಟಿ ತಯಾರಿಸಲಾಗುತ್ತಿದೆ. ಸುಮಾರು 500 ಒವರ್ ಸ್ಲಾéಬ್ಗಳಿಗೆ ಟೆಂಡರ್ ನಡೆಯಲಿದ್ದು, ಮಳೆಗಾಲದಲ್ಲಿ ಟೆಂಡರ್ ಕರೆದು ಆಗಸ್ಟ್ನಲ್ಲಿ ಸ್ಲಾéಬ್ ಅಳವಡಿಕೆ ಕೆಲಸ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಇದುವರೆಗೂ ಈಡೇರಿಲ್ಲ. ಇದೀಗ ಮಳೆಗಾಲ ಮುಗಿದಿದ್ದು, ಚಳಿಗಾಲ ಆರಂಭಗೊಂಡಿದೆ. ನಾಗರಿಕರು ಹಿಂದಿನ ಭರವಸೆಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ದುರಸ್ತಿಗೆ ಮೀನಮೇಷ
ನಗರಸಭೆ ಅಧಿಕಾರಿಗಳು ದುರಸ್ತಿಗೆ ಮೀನಮೇಷ ನಡೆಸುತ್ತಿದ್ದಾರೆ. ಹಿರಿಯ ನಾಗರಿಕರು ಜೀವ ಭಯದಲ್ಲಿ ಸಂಚರಿಸಬೇಕಾಗಿದೆ.
-ಮಾಲತಿ, ಸ್ಥಳೀಯರು, ಉಡುಪಿ.