ಪ್ರವಾಸೋದ್ಯಮಕ್ಕೆ ಉತ್ತಜನದ ನಿಟ್ಟಿನಲ್ಲಿ ಪಡುಕರೆ ಬೀಚ್ ಅಭಿವೃದ್ದಿ:
Team Udayavani, Mar 28, 2017, 4:06 PM IST
ಮಲ್ಪೆ: ಮಲ್ಪೆ ಬಳಿಯ ಪಡುಕೆರೆ ಬೀಚ್ ಅತ್ಯಂತ ಸುಂದರವಾಗಿದ್ದು, ಸುತ್ತಮುತ್ತಲಿನ ಪ್ರದೇಶ ಅತ್ಯಂತ ರಮಣೀಯವಾಗಿದೆ. ಸ್ಥಳೀಯ ಜನರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸುಮಾರು 25 ಎಕ್ರೆಗಳಷ್ಟು ಜಾಗ ಇರುವ ಈ ಬೀಚ್ನ್ನು ವಿಶ್ವ ಪ್ರಸಿದ್ದ ಬೀಚ್ ಆಗಿ ಅಭಿವೃದ್ದಿ ಗೊಳಿಸಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಅವರು ರವಿವಾರ ಮಲ್ಪೆ ಪಡುಕೆರೆ ಬೀಚ್ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿ ರೂ.17 ಕೋಟಿ ವೆಚ್ಚದ ಮಲ್ಪೆ ಪಡುಕರೆ ಸೇತುವೆ ಕಾಮಗಾರಿ ಮುಕ್ತಾಯಗೊಂಡಿದ್ದು, ಇದರಿಂದ ಪಡುಕೆರೆಗೆ ನೇರ ಸಂಪರ್ಕ ಸಾಧ್ಯವಾಗಿದ್ದು, ಪಡುಕೆರೆ ಬೀಚ್ನ್ನು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಗೆ ಸೇರಿಸಿ ಅಭಿವೃದ್ದಿ ಪಡಿಸಲಾಗುವುದು. ಸ್ಥಳೀಯ ಜನರಿಗೆ ಹಾಗೂ ಇಲ್ಲಿರುವ ಪ್ಲಾಂಟೇಶನ್ಗಳಿಗೆ ಯಾವುದೇ ದಕ್ಕೆ ಯಾಗದ ರೀತಿಯಲ್ಲಿ ವ್ಯವಸ್ಥೆಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೀಚ್ ಕ್ಲೀನಿಂಗ್ ಯಂತ್ರದಿಂದ ಬೀಚ್ನ್ನು ಸ್ವತ್ಛಗೊಳಿಸಿ, ಬೀಚ್ನಲ್ಲಿ ವಾಹನ ಪಾರ್ಕಿಂಗ್, ಶೌಚಾಲಯಗಳ ನಿರ್ಮಾಣ, ಸ್ನಾನಗೃಹ ಗಳ ನಿರ್ಮಾಣ ಮತ್ತು ಇಲ್ಲಿನ ಬೀಚ್ಗೆ ಬರಲು ಪರ್ಯಾಯ ರಸ್ತೆಯನ್ನು ನಿರ್ಮಿಸಲಾಗುವುದು ಎಂದರು. ಪ್ರವಾಸೋದ್ಯಮದ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿದ್ದು ಇಲ್ಲಿನ ನಾಗರೀಕರ ಸಹಾಯದಿಂದ ಹೋಂ ಸ್ಟೇಗಳನ್ನು ಆರಂಭಿಸುವ ಉದ್ದೇಶ ಹೊಂದಿದ್ದು, ರಾಜ್ಯದ 3 ಕರಾವಳಿ ಜಿಲ್ಲೆಗಳಿಗೆ ಮಾದರಿಯಾದ ಹೋಂ ಸ್ಟೇ ವ್ಯವಸ್ಥೆಯನ್ನು ಮಾಡಲಾಗುವುದು, ಇದರಿಂದ ಸ್ಥಳೀಯರಿಗೆ ಸಹ ಆದಾಯ ವೃದ್ದಿಗೆ ಸಾಧ್ಯವಾಗಲಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲಾಧಿಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಹಸೀಲ್ದಾರ್ ಮಹೇಶ್ ಚಂದ್ರ, ಪೌರಾಯುಕ್ತ ಡಿ. ಮಂಜುನಾಥಯ್ಯ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಕುಪ್ಪಯ್ಯ, ಬೀಚ್ಅಭಿವೃದ್ದಿ ನಿರ್ವಾಹಕ ಸುದೇಶ್ ಶೆಟ್ಟಿ, ನಗರಸಭೆ ಸದಸ್ಯರಾದ ಜನಾರ್ದನ ಭಂಡಾರ್ಕರ್, ರಮೇಶ್ ಕಾಂಚನ್, ಗಣೇಶ್ ನೆರ್ಗಿ, ವಿಜಯ ಕುಂದರ್, ಪ್ರಮುಖರಾದ ಸತೀಶ್ ಅಮೀನ್ ಪಡುಕರೆ, ಶೇಖರ್ ಜಿ. ಕೋಟ್ಯಾನ್,ಸುರೇಶ್ ಮೆಂಡನ್, ಮೋನಪ್ಪ ಕೋಟ್ಯಾನ್, ವೆಂಕಪ್ಪ ಮೆಂಡನ್, ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.