ಪಾದರಾಯನಪುರದ ಜನ ಅಕ್ಷರಸ್ಥರಾದ್ರೆ ಜಮೀರ್ ಗೆಲ್ಲೋದಿಲ್ಲ: ಶಾಸಕ ಸುಕುಮಾರ ಶೆಟ್ಟಿ ಟಾಂಗ್
Team Udayavani, Apr 21, 2020, 5:57 PM IST
ಬೈಂದೂರು: ಕೋವಿಡ್ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿ ದಾಂಧಲೆ ನಡೆಸಿದ ಪಾದರಾಯನಪುರ ಪ್ರದೇಶದ ಜನರು ಅನಕ್ಷರಸ್ಥರು ಮತ್ತು ಅವರಿಗೆ ಸೂಕ್ತ ಮಾಹಿತಿಯ ಕೊರತೆ ಇತ್ತು ಎಂದು ಹೇಳಿಕೆ ನೀಡಿದ್ದ ಶಾಸಕ ಜಮೀರ್ ಅಹಮ್ಮದ್ ಅವರಿಗೆ ಭಾರತೀಯ ಜನತಾ ಪಕ್ಷದ ಬೈಂದೂರು ಕ್ಷೇತ್ರದ ಶಾಸಕ ಸುಕುಮಾರ ಶೆಟ್ಟಿ ಅವರು ತಿರುಗೇಟು ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಸುಕುಮಾರ ಶೆಟ್ಟಿ ಅವರು, ‘ಶಾಸಕ ಜಮೀರ್ ಅವರು ಸತ್ಯವಾದ ಮಾತನ್ನೇ ಹೇಳಿದ್ದಾರೆ. ಪಾದರಾಯನಪುರ ಸೇರಿದಂತೆ ಅವರ ಕ್ಷೇತ್ರದ ಜನರನ್ನು ಸಾಕ್ಷರಗೊಳಿಸುವ ಕೆಲಸಕ್ಕೆ ಜಮೀರ್ ಕೈಹಾಕಲೇ ಇಲ್ಲ, ಯಾಕೆಂದರೆ ಒಂದುವೇಳೆ ಹಾಗೆ ಮಾಡಿದ್ದಿದ್ದರೆ ಅಲ್ಲಿ ಜಮೀರ್ ಅವರು ಗೆಲ್ಲುವುದಕ್ಕೇ ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.
ಅವರೆಲ್ಲಾ ಇಷ್ಟು ಸಮಯದಿಂದ ಅನಕ್ಷರಸ್ಥರಾಗಿಯೇ ಇರುವಲ್ಲಿ ಜಮೀರ್ ಅವರ ಕೊಡುಗೆ ದೊಡ್ಡದಿದೆ ಎಂದು ಶಾಸಕ ಸುಕುಮಾರ್ ಶೆಟ್ಟಿ ಅವರು ವ್ಯಂಗ್ಯವಾಡಿದ್ದಾರೆ. ನಮ್ಮಕಡೆಯಲ್ಲಾದರೆ ಇಂತಹ ಶಾಸಕರನ್ನು ಜನರು ಯಾವಾಗಲೋ ತಿರಸ್ಕರಿಸುತ್ತಿದ್ದರು ಎಂದೂ ಸಹ ಸುಕುಮಾರ ಶೆಟ್ಟಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಆದಿತ್ಯವಾರ ರಾತ್ರಿ ಇದ್ದಕ್ಕಿದ್ದಂತೆ ಪಾದರಾಯನಪುರ ಪ್ರದೇಶದಲ್ಲಿ ಕೆಲವರು ಪುಂಡಾಟ ನಡೆಸಿ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿದ್ದರು ಹಾಗೂ ಪೊಲೀಸ್ ಪೆಂಡಾಲ್ ಮತ್ತು ಸೀಲ್ ಡೌನ್ ಮಾಡಿದ್ದನ್ನು ಧ್ವಂಸಗೊಳಿಸಿದ್ದರು. ಈ ಘಟನೆಗೆ ಪ್ರತಿಕ್ರಿಯಿಸಿದ್ದ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರು ಅಲ್ಲಿನ ಜನರು ಅನಕ್ಷರಸ್ಥರು ಅವರಿಗೆ ಮಾಹಿತಿಯ ಕೊರತೆ ಇತ್ತು ಎಂದು ಪ್ರತಿಕ್ರಿಯಿಸಿದ್ದರು. ಶಾಸಕರ ಈ ಪ್ರತಿಕ್ರಿಯೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.