ಹೊಂಡಮಯ ರಸ್ತೆ ವಾಹನ ಸವಾರರಿಗೆ ಸವಾಲು
ಚಿತ್ತೂರು-ಈಡೂರು ರಾಷ್ಟ್ರೀಯ ಹೆದ್ದಾರಿ ಮುಖ್ಯ ರಸ್ತೆ : ದುಸ್ಥಿತಿಗೆ ಬೇಕು ಶಾಶ್ವತ ಪರಿಹಾರ
Team Udayavani, Oct 20, 2021, 5:55 AM IST
ವಂಡ್ಸೆ: ಚಿತ್ತೂರಿನಿಂದ ಕೊಲ್ಲೂರಿಗೆ ಸಾಗುವ ರಾ. ಹೆದ್ದಾರಿ ಮುಖ್ಯ ರಸ್ತೆಯಲ್ಲಿ ಬಹುತೇಕ ಕಡೆ ಬಾರಿ ಹೊಂಡ ಉಂಟಾಗಿದ್ದು ದ್ವಿಚಕ್ರ ವಾಹನದಲ್ಲಿ ಸಾಗುವುದು ಕೂಡ ಕಷ್ಟಸಾಧ್ಯವಾಗಿದೆ.
ಕೊಲ್ಲೂರು ಕ್ಷೇತ್ರಕ್ಕೆ ಸಾಗುವ ಮುಖ್ಯ ರಸ್ತೆ
ತಲ್ಲೂರು-ನೇರಳಕಟ್ಟೆ, ನೆಂಪು ಹಾಗೂ ಹೆಮ್ಮಾಡಿ ಮಾರ್ಗವಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಸಾಗುವ ಮುಖ್ಯ ರಸ್ತೆ ಇದಾಗಿದೆ. ಹೆಮ್ಮಾಡಿಯಿಂದ ವಂಡ್ಸೆ ತನಕ ರಸ್ತೆ ಸಂಪೂರ್ಣವಾಗಿ ಡಾಮರುಗೊಂಡಿದೆ. ಆದರೆ ಚಿತ್ತೂರಿನಿಂದ ಇಡೂರು ಮಾರ್ಗವಾಗಿ ಕೊಲ್ಲೂರಿಗೆ ಸಾಗುವ ದಾರಿಯಲ್ಲಿ ಬಹುತೇಕ ಕಡೆ ಭಾರೀ ಹೊಂಡ ಉಂಟಾಗಿದ್ದು, ಘನವಾಹನ ಸಹಿತ ದ್ವಿಚಕ್ರ ವಾಹನದಲ್ಲಿ ಸಾಗುವವರು ಆಯತಪ್ಪಿದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ.
ಇಡೂರು ಮುಖ್ಯ ರಸ್ತೆಯ ಉದ್ದಕ್ಕೂ ರಸ್ತೆ ಸಂಪೂರ್ಣ ಹೊಂಡದಿಂದ ಕೂಡಿದ್ದು, ವಾಹನ ಚಾಲಕರಿಗೆ ಕಿರಿಕಿರಿ ಉಂಟುಮಾಡಿದೆ. ರಾತ್ರಿ ಸಂಚರಿಸುವವರ ಪಾಡು ಹೇಳತೀರದು.
ಇದನ್ನೂ ಓದಿ:ಭೂಕಂಪನ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ
ರಸ್ತೆ ದುರಸ್ತಿಗೆ ಆಗ್ರಹ
ಅನೇಕ ಕಡೆಯಲ್ಲಿ ಹೊಂಡವಾಗಿರುವ ಚಿತ್ತೂರು, ಈಡೂರು ಜಡ್ಕಲ್ ಮಾರ್ಗ ದ ಮುಖ್ಯ ರಸ್ತೆಯನ್ನು ಡಾಮರುಗೊಳಿಸದಿದ್ದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಇಲಾಖೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಇಡೂರು ನಿವಾಸಿಗಳು ಆಗ್ರಹಿಸಿದ್ದಾರೆ.
ಮಳೆ ಕಾಮಗಾರಿಗೆ ಅಡಚಣೆಯಾಗಿದೆ
ಚಿತ್ತೂರಿನಿಂದ ಮುಂದೆ ಸಾಗುವ ರಾ. ಹೆದ್ದಾರಿಯ ಮುಖ್ಯ ರಸ್ತೆಯ ಡಾಮರಿಗೆ ಮಳೆ ಅಡ್ಡಿಯಾಗಿರುವುದರಿಂದ ಕಾಮಗಾರಿಗೆ ಅಡಚಣೆ ಉಂಟಾಗಿದೆ. ಮಳೆ ಮುಗಿದೊಡನೆ ಡಾಮರು ಕಾಮಗಾರಿ ಮುಂದುವರಿಸಲಾಗುವುದು.
-ದುರ್ಗಾದಾಸ್,
ಲೋಕೋಪಯೋಗಿ ಇಲಾಖೆ ಎಂಜಿನಿಯರ್