ತೂಫಾನ್ ನಿರೀಕ್ಷೆಯಲ್ಲಿ ನಾಡದೋಣಿ ಮೀನುಗಾರರು
Team Udayavani, Jun 25, 2021, 5:30 AM IST
ಕುಂದಾಪುರ: ಇಷ್ಟೊತ್ತಿಗೆ ಆರಂಭವಾಗಬೇಕಿದ್ದ ನಾಡದೋಣಿ ಮೀನುಗಾರಿಕೆಗೆ ಕಡಲಿನಲ್ಲಿ ಪೂರಕ ವಾತಾವರಣವಿಲ್ಲದ ಕಾರಣ ವಿಳಂಬ ವಾಗಿದೆ. ಗಂಗೊಳ್ಳಿ, ಮರವಂತೆ, ಬೈಂದೂರು ವಲಯದ ನಾಡದೋಣಿ ಮೀನುಗಾರರು ಇನ್ನೊಂದು ತೂಫಾನ್ನ
ನಿರೀಕ್ಷೆಯಲ್ಲಿದ್ದು, ಜುಲೈ ಮೊದಲ ವಾರ ಕಡಲಿಗಿಳಿಯುವ ಸಾಧ್ಯತೆಗಳಿವೆ. ಕಳೆದ ತೌಖ್ತೆ ಚಂಡಮಾರುತದ ವೇಳೆ ದೊಡ್ಡ ಮಟ್ಟದ ತೂಫಾನ್ ಕಾಣಿಸಿಕೊಂಡಿದ್ದು, ಮುಂಗಾರು ಆರಂಭ ದಲ್ಲಿಯೂ ಒಂದು ಬಾರಿ ಕಡಲು ಪ್ರಕ್ಷುಬ್ಧಗೊಂಡಿತ್ತು. ಆದರೆ ಈಗ ಮತ್ತೆ ಮಳೆ ಕಡಿಮೆಯಾಗಿದ್ದು, ಕಡಲು ಶಾಂತವಾಗಿದೆ. ಇದು ಮೀನುಗಾರಿಕೆಗೆ ಪೂರಕ ವಾಗಿಲ್ಲದ ಕಾರಣ, ಇನ್ನೊಂದು ತೂಫಾನ್ಗೆ ಕಾಯುತ್ತಿದ್ದಾರೆ.
ಸಾಮಾನ್ಯವಾಗಿ ನಾಡದೋಣಿ ಮೀನು ಗಾರರು ಗಂಗಾ ಪೂಜೆಯಾದ ಬಳಿಕ ಕಡಲಿಗಿಳಿಯುತ್ತಾರೆ. ಈ ಬಾರಿ ಅಲ್ಲಲ್ಲಿ ಸಣ್ಣ ಮಟ್ಟಿಗೆ ಪೂಜೆ ನೆರವೇರಿಸಲಾಗಿದ್ದು, ಮಲ್ಪೆ, ಗಂಗೊಳ್ಳಿ, ಉಪ್ಪುಂದ ಭಾಗ ಗಳಲ್ಲಿ ಈಗಾಗಲೇ ಸಣ್ಣ (ಸಿಂಗಲ್ ದೋಣಿ) ದೋಣಿಗಳು ಸಮುದ್ರಕ್ಕೆ ಇಳಿದಿದ್ದರೂ, ಸಾಕಷ್ಟು ಪ್ರಮಾಣದಲ್ಲಿ ಮೀನು ದೊರೆತಿಲ್ಲ. ಆದರೆ ಜೋಡು (ಮೂರು ದೋಣಿಗಳಿರುತ್ತವೆ) ದೋಣಿಯ ಮೀನುಗಾರಿಕೆ ಇನ್ನೂ ಆರಂಭವಾಗಬೇಕಷ್ಟೆ.
2 ಸಾವಿರಕ್ಕೂ ಮಿಕ್ಕಿ ದೋಣಿಗಳು:
ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಕೋಡಿ, ಗಂಗೊಳ್ಳಿ, ಕಂಚುಗೋಡು, ಹೊಸಪೇಟೆ, ಮರವಂತೆ, ಕೊಡೇರಿ, ಉಪ್ಪುಂದ, ಶಿರೂರು ಭಾಗದಲ್ಲಿ, ಕೋಡಿಕನ್ಯಾನ, ಮಲ್ಪೆ, ಹೆಜಮಾಡಿ ಭಾಗದಲ್ಲಿಯೂ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ನಡೆಯು ತ್ತದೆ. ಗಂಗೊಳ್ಳಿ ವಲಯದಲ್ಲಿ ಸುಮಾರು 600 ನಾಡದೋಣಿಗಳಿದ್ದರೆ, ಬೈಂದೂರು ವಲಯದಲ್ಲಿ 1,500ಕ್ಕೂ ಮಿಕ್ಕಿ ನಾಡದೋಣಿಗಳಿವೆ.
ಪ್ರಕ್ಷುಬ್ಧಗೊಂಡರೆ ಲಾಭ :ಕಡಲಾಳದಲ್ಲಿ ತೂಫಾನ್ ಎದ್ದ ಬಳಿಕ ಕಡಲು ಪ್ರಕ್ಷುಬ್ಧಗೊಳ್ಳುತ್ತದೆ. ನದಿ, ಹೊಳೆಗಳ ನೀರು, ಅದ ರೊಂದಿಗೆ ತ್ಯಾಜ್ಯವೆಲ್ಲ ಸಮುದ್ರಕ್ಕೆ ಸೇರುವುದರಿಂದ ಆಹಾರಕ್ಕಾಗಿ ವಿವಿಧ ಜಾತಿಯ ಮೀನುಗಳು ಕಡಲ ತೀರದತ್ತ ಧಾವಿಸುತ್ತವೆ. ತೂಫಾನ್ ಎದ್ದರೆ ಮಾತ್ರ ನಾಡದೋಣಿಗಳಿಗೆ ಉತ್ತಮ ಪ್ರಮಾಣದಲ್ಲಿ ಮೀನು ಸಿಗುತ್ತದೆ. ಇಲ್ಲದಿದ್ದರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುತ್ತಾರೆ ಮೀನುಗಾರರು.
ನಾಡದೋಣಿಗಳಿಗೆ ಕಡಲಿಗಿಳಿಯಲು ಈಗಿನ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ. ಕೆಲವು ಕಡೆಗಳಲ್ಲಿ ಸಣ್ಣ ದೋಣಿಗಳು ಮೀನುಗಾರಿಕೆಗೆ ತೆರಳಿದ್ದರೂ ಅಷ್ಟೇನೂ ಮೀನು ದೊರೆತಿಲ್ಲ. ಹಾಗಾಗಿ ಪರಿಸ್ಥಿತಿ ಗಮನಿಸಿ, ಇನ್ನೊಂದು ತೂಫಾನ್ ಆದರೆ ಆ ಕೂಡಲೇ ಎಲ್ಲ ನಾಡದೋಣಿಗಳು ಕಡಲಿಗಿಳಿಯಬಹುದು. –ಮಂಜು ಬಿಲ್ಲವ, ಆನಂದ ಖಾರ್ವಿ, ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷರು, ಗಂಗೊಳ್ಳಿ – ಬೈಂದೂರು