ಕೋವಿಡ್ ಸೋಂಕಿಗೆ ಕುಂದಾಪುರದ ಮಾಜಿ ಕ್ರೀಡಾಪಟು ಕುವೈಟ್ ನಲ್ಲಿ ಬಲಿ
Team Udayavani, Jul 17, 2020, 2:52 PM IST
ಕುಂದಾಪುರ: ಇಲ್ಲಿನ ಭಂಡಾರ್ ಕಾರ್ಸ್ ಕಾಲೇಜಿನ ಮಾಜಿ ಅಥ್ಲೆಟಿಕ್ಸ್ ಚಾಂಪಿಯನ್, ಖ್ಯಾತ ಕಬಡ್ಡಿ ಮತ್ತು ವಾಲಿಬಾಲ್ ಆಟಗಾರ ಕುಂದಾಪುರ ಖಾರ್ವಿ ಕೇರಿ ನಿವಾಸಿಯೊಬ್ಬರು ಕುವೈಟ್ ನಲ್ಲಿ ಜು.16ರಂದು ನಿಧನರಾಗಿದ್ದಾರೆ.
ಕುವೈಟ್ ನ ಕೆ.ಆರ್. ಎಚ್. ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಇವರು ಕಳೆದ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿ ತಪಾಸಣೆ ನಡೆಸಿದಾಗ ಕೋವಿಡ್ ಸೋಂಕು ತಗಲಿರುವುದು ದೃಢ ಪಟ್ಟಿತೆನ್ನಲಾಗಿದೆ. ಕಳೆದ ಸುಮಾರು 22 ದಿನಗಳಿಂದಲೂ ಕುವೈಟ್ ನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ಮೃತ ದೇಹದ ಅಂತಿಮ ಕಾರ್ಯವನ್ನು ಕುವೈಟ್ ನಲ್ಲಿಯೇ ನಡೆಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
80ರ ದಶಕದಲ್ಲಿ ಕುಂದಾಪುರದ ಖ್ಯಾತ ಕ್ರೀಡಾಪಟುವಾಗಿ ಮಿಂಚಿದ ಇವರು ಯುವ ಆಟಗಾರರಿಗೆ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದರು. ಯು.ಎ. ಇ ಯಲ್ಲಿ ಹಲವು ವರ್ಷಗಳಿಂದ ಉದ್ಯೋಗದಲ್ಲಿದ್ದ ಇವರು ಕೆಲವು ವರ್ಷಗಳ ಹಿಂದೆ ಕುವೈಟ್ ನಲ್ಲಿ ಉದ್ಯೋಗದಲ್ಲಿದ್ದರು.
ಇವರು ಪತ್ನಿ, ಮೂವರು ಪುತ್ರಿಯರು, ತಾಯಿ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ. ಇವರ ಅಗಲಿಕೆಗೆ ಹಲವರಿಂದ ಸಂತಾಪ ವ್ಯಕ್ತವಾಗಿದೆ.