ಅಸಮರ್ಪಕ ವ್ಯವಸ್ಥೆ: ಮೋರಿ ಕುಸಿಯುವ ಭೀತಿ
Team Udayavani, Jun 29, 2020, 5:34 AM IST
ಕುಂದಾಪುರ: ತೀರ್ಥಹಳ್ಳಿ – ಕುಂದಾಪುರ ರಾಜ್ಯ ಹೆದ್ದಾರಿಯ ಅಂಪಾರು ಗ್ರಾ. ಪಂ. ವ್ಯಾಪ್ತಿಯ ಮೂಡುಬಗೆ ಸಮೀಪ ರಸ್ತೆ ಬದಿ ಹೊಸದಾಗಿ ನಿರ್ಮಿಸಿರುವ ಮೋರಿಯು ಚರಂಡಿಯಲ್ಲಿ ಮಳೆ ನೀರು ಸರಿಯಾಗಿ ಹರಿದು ಹೋಗದ ಕಾರಣ ಕುಸಿಯುವ ಅಪಾಯದಲ್ಲಿದೆ.
ಅಂಪಾರು ಗ್ರಾ.ಪಂ. ವ್ಯಾಪ್ತಿಯ ಮೂಡುಬಗೆಯ ರಾಜ್ಯ ಹೆದ್ದಾರಿ ಯಲ್ಲಿರುವ ಈ ಮೋರಿಯ ಆಸುಪಾಸಿನಲ್ಲಿ ಹಾಕಿದ ಮಣ್ಣು ಮಳೆ ನೀರಿನೊಂದಿಗೆ ಕೊಚ್ಚಿ ಹೋಗುತ್ತಿದ್ದು, ಇದರಿಂದ ಮೋರಿ ಹಾಗೂ ಹೆದ್ದಾರಿಗೂ ಅಪಾಯ ಎದುರಾಗಿದೆ.
ಇಲ್ಲಿ ಚರಂಡಿ ವ್ಯವಸ್ಥೆಯಿದ್ದರೂ ಒಂದು ಕಡೆ ಸಣ್ಣ ಮೋರಿ ಅಳವಡಿಸಿದ್ದರಿಂದ ಅಲ್ಲಿನ ಚರಂಡಿಯಲ್ಲಿ ನೀರು ತುಂಬಿ, ಆ ನೀರೆಲ್ಲ ರಸ್ತೆಯಲ್ಲಿ ಹರಿದು ಈ ದೊಡ್ಡ ಮೋರಿ ಹತ್ತಿರ ಸೇರುತ್ತದೆ. ಆ ನೀರಿನೊಂದಿಗೆ ಮೋರಿ ಹತ್ತಿರದ ಮಣ್ಣು ಕೂಡ ಕೊಚ್ಚಿಕೊಂಡು ಹೋಗುತ್ತಿರುವುದರಿಂದ ಸಮಸ್ಯೆ ಉದ್ಭವವಾಗಿದೆ.
ಇದನ್ನು ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ ಕೂಡಲೇ ಸರಿಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ತೆರವಿಗೆ ಆಗ್ರಹ
ಇನ್ನು ಇಲ್ಲಿ ಹಿಂದೆ ಇದ್ದ ಮೋರಿ ಚಿಕ್ಕದಾಯಿತು ಎಂದು ರಸ್ತೆ ಅಗಲೀಕರಣದ ಬಳಿಕ ದೊಡ್ಡ ಮೋರಿಯನ್ನು ಅಳವಡಿಸಿದೆ. ಆದರೆ ಹಿಂದೆ ಇದ್ದ ಮೋರಿಯ ತಡೆಗೋಡೆ ಮಾತ್ರ ಹಾಗೆಯೇ ರಸ್ತೆಗೆ ತಾಗಿಕೊಂಡೇ ಇದೆ. ಇದು ಈ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಕಂಟಕ ವಾಗಿದ್ದು, ಇದನ್ನು ಕೂಡಲೇ ತೆರವು ಮಾಡಬೇಕು ಎನ್ನುವುದಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.