ಕುಂದಾಪುರ: ಇನ್ನೂ ಆಗಿಲ್ಲ ಸರ್ವಿಸ್ ರಸ್ತೆ ಭೂಸ್ವಾಧೀನ!
Team Udayavani, Oct 7, 2022, 11:51 AM IST
ಕುಂದಾಪುರ: ಬರೋಬ್ಬರಿ 12 ವರ್ಷಗಳ ಹಿಂದೆ ಆರಂಭವಾದ ಯೋಜನೆ. ನೀಲನಕಾಶೆ ಅದಕ್ಕೂ ಹಿಂದೆ ಸಿದ್ಧಪಡಿಸಿದ್ದು. ಆದರೆ ಅಧಿಕಾರಿಗಳ, ಎಂಜಿನಿಯರ್ಗಳ ಎಡವಟ್ಟಿನಿಂದ ಜನಸಾಮಾನ್ಯರು ಕಷ್ಟಪಡಬೇಕು. ಯಾಕೆಂದರೆ ಅಧಿಕಾರಿಗಳು ಈ ವರ್ಷ ಇದ್ದವರು ಮರುವರ್ಷ ಅದೇ ಹುದ್ದೆಯಲ್ಲಿ ಇರುವುದಿಲ್ಲ. ಮತ್ತೆ ಬಂದವರಿಗೆ ಅದು ಲಾಗಾವು ಆಗುವುದಿಲ್ಲ. ಜನರ ಕಷ್ಟ ಯಾರಿಗೂ ಬೇಕಿಲ್ಲ. ಇಷ್ಟಕ್ಕೂ ಆದದ್ದೇನೆಂದರೆ ಕುಂದಾಪುರದ ಪುರಸಭೆ ವ್ಯಾಪ್ತಿಯಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ 50 ಮೀ. ದೂರ ಎರಡೂ ಬದಿ ಸರ್ವಿಸ್ ರಸ್ತೆಯೇ ಇಲ್ಲ. ಅದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣವಾಗಿಲ್ಲ.
ಎಡವಟ್ಟಾಯ್ತು
ಮಂಗಳೂರಿನಿಂದ ಗೋವಾ ಗಡಿವರೆಗೆ ನಡೆಯಬೇಕಿದ್ದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅಳತೆ ಅಥವಾ ಗುತ್ತಿಗೆದಾರರಿಗೆ ವಹಿಸಿಕೊಡುವ ಸಂದರ್ಭ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಎಡವಟ್ಟಿನಿಂದ ರಾ.ಹೆ. 66ರಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬಳಿ ಸುಮಾರು 50 ಮೀ.ನಷ್ಟು ಕಾಮಗಾರಿ ಬಾಕಿ ಆಗಿತ್ತು. ಈ ತಪ್ಪನ್ನು ಮುಚ್ಚಿ ಹಾಕಲು ಪದೇ ಪದೆ ಜನರನ್ನು ಬಲಿಪಶು ಮಾಡಲಾಗುತ್ತಿದೆ. ಪರಿಣಾಮವಾಗಿ ಈ ಭಾಗದ ಜನತೆ ಆಗಾಗ ಭೂಮಿ ಕಳೆದುಕೊಳ್ಳುತ್ತಿದ್ದಾರೆ.
ಪ್ರಕಟನೆ
2020ರ ಸೆ.5ರ ಪತ್ರಿಕೆಯಲ್ಲಿ ಪ್ರಾಧಿಕಾರ ಇನ್ನೊಂದು ನೋಟಿಫಿಕೇಶನ್ ನೀಡಿದ್ದು ಅದರಂತೆ 10 ಮಂದಿಯ ಭೂಸ್ವಾಧೀನವಾಗಬೇಕಿತ್ತು. ಎರಡು ವರ್ಷ ಕಳೆದ ತಿಂಗಳೊಂದಾಯ್ತು. ಇನ್ನೂ ಭೂಸ್ವಾಧೀನ ಆಗಿಲ್ಲ. ಕಡತ ತಯಾರಾಗಿ ಪರಿಹಾರದ ಮೊತ್ತ ಅಂದಾಜಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಇನ್ನೂ ಕಡತ ಮಂಜೂರಾಗಿ ಬಂದಿಲ್ಲ. ಭೂಸ್ವಾಧೀನ ಪ್ರಕಟನೆ ಬರುವವರೆಗೆ ಭೂಮಿ ಕಳೆದುಕೊಳ್ಳುವ ಜನರಿಗೆ ಇದರ ಮಾಹಿತಿಯೇ ಇರಲಿಲ್ಲ. ಪ್ರಾಧಿಕಾರ ಸರಕಾರಕ್ಕೆ ಭೂಮಿಯ ವಿವರ ನೀಡಿ ಅಲ್ಲಿ ಮಂಜೂರಾಗಿ ಪ್ರಕಟನೆ ನೀಡಿ ನೋಟಿಫಿಕೇಶನ್ ಆದ ಮೇಲೆ ಡಿನೋಟಿಫಿಕೇಶನ್ ಕೂಡ ಮಾಡುವಂತಿಲ್ಲ ಎನ್ನಲಾಗಿದೆ.
ದಶಮಾನೋತ್ಸವ ಕಳೆದ ಕಾಮಗಾರಿ
ರಾ.ಹೆ. 66 ಮಹಾರಾಷ್ಟ್ರ, ಗೋವಾ, ಕರ್ನಾಟಕ ಹಾಗೂ ಕೇರಳದಲ್ಲಿ ಹಾದು ಹೋಗುತ್ತದೆ. ಕಾರವಾರ, ಉಡುಪಿ, ಮಂಗಳೂರು ಮೂರು ಜಿಲ್ಲಾ ಕೇಂದ್ರಗಳನ್ನು ಸಂಧಿಸುತ್ತದೆ. ಸುರತ್ಕಲ್ ನಿಂದ ಕುಂದಾಪುರದವರೆಗೆ 73 ಕಿ.ಮೀ. ದೂರ ನವಯುಗ ಉಡುಪಿ ಟೋಲ್ವೇಯ್ಸ ಸಂಸ್ಥೆ ಹೆದ್ದಾರಿ ಕಾಮಗಾರಿ ನಡೆಸಿದೆ. ಇದರಲ್ಲಿ 40 ಕಿ.ಮೀ.ನಷ್ಟು ಸರ್ವಿಸ್ ರಸ್ತೆಯೇ ಇದೆ. 2010 ಸೆಪ್ಟಂಬರ್ನಿಂದ ಆರಂಭವಾದ ಕಾಮಗಾರಿ 2013ರಲ್ಲಿ ಪೂರ್ಣವಾಗಬೇಕಿತ್ತು. 2021ರಲ್ಲಿ ಕಾಮಗಾರಿ ಮುಗಿದಿದೆ ಎಂದು ನಂಬಲಾಗಿದ್ದರೂ ಕೆಲಸಗಳು ಇನ್ನೂ ಬಾಕಿಯಿವೆ. ಸರ್ವಿಸ್ ರಸ್ತೆಯಂತೂ ಇನ್ನೂ ಆಗಲೇ ಇಲ್ಲ.
ಐಆರ್ಬಿಗೆ
ಕುಂದಾಪುರದ ಸಂಗಮ್ನಿಂದ ಗೋವಾ ಗಡಿವರೆಗೆ ಕಾಮಗಾರಿಯನ್ನು ಐಆರ್ಬಿ ಸಂಸ್ಥೆಗೆ 2014 ರಲ್ಲಿ 1,655 ಕೋ.ರೂ.ಗೆ ಗುತ್ತಿಗೆ ನೀಡಲಾಗಿದೆ. ಸಂಸ್ಥೆ 189 ಕಿ.ಮೀ. ಕಾಮಗಾರಿ ಆಗಿದೆ. ಶಿರೂರು ಟೋಲ್ ವಸೂಲಿ ನಡೆಯುತ್ತಿದೆ. ಐಆರ್ಬಿಯವರು ಎಪಿಎಂಸಿ ಬಳಿಯಿಂದ ಕಾಮಗಾರಿ ಆರಂಭಿಸಿದ್ದು ಕೆಎಸ್ಆರ್ಟಿಸಿ ಬಳಿಯ 50 ಮೀ. ಎರಡೂ ಸಂಸ್ಥೆಯವರಿಗೆ ಗುತ್ತಿಗೆಗೆ ಸಿಗದೇ ಬಾಕಿಯಾಗಿತ್ತು. ಟೆಂಡರ್ ಕರೆಯುವಾಗ ಕಿ.ಮೀ. ನಮೂದಿಸುವಾಗ ಆದ ಎಡವಟ್ಟಿ ನಿಂದಾಗಿ ಇಷ್ಟು ದೂರದ ಕಾಮಗಾರಿ ಬಾಕಿಯಾಗಿದೆ. ಅಲ್ಲಿ ಸರ್ವಿಸ್ ರಸ್ತೆ ಕಾಮಗಾರಿಗೆ ಯಾರೂ ಜವಾಬ್ದಾರರಾಗಿರಲಿಲ್ಲ. ಬಾಕಿ ರಸ್ತೆ ಕಾಮಗಾರಿ ಜವಾಬ್ದಾರಿ ಐಆರ್ಬಿ ಸಂಸ್ಥೆ ಮಾಡಿಮುಗಿಸಿದೆ. ತನ್ನ ತಪ್ಪಿಗೆ ತೇಪೆ ಹಾಕಲು ಹೆದ್ದಾರಿ ಪ್ರಾಧಿಕಾರ ಮುಂದಾಗಿ 2019ರ ಡಿಸೆಂಬರ್ ನಲ್ಲಿ ಗಜೆಟ್ ನೋಟಿಫಿಕೇಶನ್ ಮಾಡಿ ಜನವರಿಯ ದಿನಪತ್ರಿಕೆಯಲ್ಲಿ ಹೊಸದಾಗಿ ಭೂಸ್ವಾಧೀನ ಪ್ರಕ್ರಿಯೆ ಕುರಿತು ಮಾಹಿತಿ ಪ್ರಕಟಿಸಿದೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬಳಿಯ ಮೂವರ ಜಾಗದ ಸರ್ವೇ ನಂಬರ್ ಇದರಲ್ಲಿ ನಮೂದಾಗಿದೆ. 671 ಕೋ.ರೂ.ಗಳ ಯೋಜನೆ ತಯಾರಿಸಿದ ಕೇಂದ್ರ 221.43 ಕೋ.ರೂ. ಗಳನ್ನು ರಾಷ್ಟ್ರೀಯ ಹೆದ್ದಾರಿಪ್ರಾಧಿಕಾರಕ್ಕೆ ನೀಡಿತ್ತು. ಉಳಿಕೆ ಮೊತ್ತವನ್ನು ಗುತ್ತಿಗೆ ಪಡೆದ ನವಯುಗ ಕಂಪೆನಿ ಭರಿಸಿ, ಹೆಜಮಾಡಿ, ಸಾಸ್ತಾನ ಟೋಲ್ಗೇಟ್ ಮೂಲಕ 20 ವರ್ಷಗಳಲ್ಲಿ ಹಿಂಪಡೆಯಬೇಕು ಎಂದಿತ್ತು. ಕಾಮಗಾರಿ ಮುಗಿದಿಲ್ಲ, ಟೋಲ್ ವಸೂಲಾಗುತ್ತಲೇ ಇದೆ.
ಯಾಕಾಗಿ ಭೂಸ್ವಾಧೀನ
ಪುರಸಭೆ ವ್ಯಾಪ್ತಿಯಲ್ಲಿ ಹಾದು ಹೋಗುವ ಹೆದ್ದಾರಿಯ ಅಗಲ 22.5 ಮೀ. ಇದೆ. ನವಯುಗ ಸಂಸ್ಥೆಗೆ 22.5 ಮೀ.ಗೆ ಅವಶ್ಯವಿದ್ದಂತೆ ಭೂಸ್ವಾಧೀನ ಮಾಡಿಕೊಟ್ಟಿದ್ದು ಐಆರ್ಬಿ ಸಂಸ್ಥೆಗೆ 25 ಮೀ. ಅಗಲಕ್ಕೆ ಬೇಕಾದಂತೆ ಭೂಸ್ವಾಧೀನ ಮಾಡಿಕೊಡಲಾಗಿದೆ. ಈಗ ಬಾಕಿಯಾದ ರಸ್ತೆಯ ಕಾಮಗಾರಿಯನ್ನು ಐಆರ್ ಬಿಗೆ ನೀಡಿದ ಕಾರಣ ಹೆಚ್ಚುವರಿ 2.5 ಮೀ.ನಂತೆ ರಸ್ತೆಯ ಎರಡೂ ಬದಿ ಭೂಸ್ವಾಧೀನ ಮಾಡಬೇಕಾಗುತ್ತದೆ.
ಅಪಘಾತ ತಾಣ
ಎಪಿಎಂಸಿ ಬಳಿಯಿಂದ ಕೆಎಸ್ಆರ್ ಟಿಸಿವರೆಗೆ ಸರ್ವಿಸ್ ರಸ್ತೆ ಆಗದ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಎಪಿಎಂಸಿ ಬಳಿ ಬ್ಯಾರಿಕೇಡ್ ಇಟ್ಟು ವಾಹನಗಳು ತಿರುಗಲು ಒದ್ದಾಡುತ್ತವೆ. ಸರ್ವಿಸ್ ರಸ್ತೆಯೇ ಇಲ್ಲದೇ ಇನ್ನೊಂದು ಹೆದ್ದಾರಿಯಿಂದ ಬಸ್ ಗಳು, ಲಾರಿಗಳು ತಿರುಗಲು ನಾನೊಲ್ಲೆ ಎನ್ನುತ್ತವೆ. ಈ ಮಧ್ಯೆಯೇ ಬರುವ ಸಣ್ಣಪುಟ್ಟ ವಾಹನಗಳು ಭೀತಿಯಿಂದ ಸಂಚರಿಸಬೇಕಿದೆ. ಹೆದ್ದಾರಿ ವಾಹನಗಳ ವೇಗಕ್ಕೂ ಕಡಿವಾಣ ಹಾಕುವುದು ಈ ಭಾಗದಲ್ಲಿ ಸಾಹಸದ ಕೆಲಸ.
ಅವಾರ್ಡ್ ಆಗಿ ಬಂದಿಲ್ಲ: ಭೂಸ್ವಾಧೀನ ಪ್ರಕ್ರಿಯೆಗೆ ಸರ್ವೇ, ನಕ್ಷೆ ತಯಾರಿಸಿ ಕಡತವನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಅವಾರ್ಡ್ ಆಗಿ ಬಂದಿಲ್ಲ. ಬಳಿಕವಷ್ಟೇ ಪರಿಹಾರ ನೀಡಿ ಭೂಮಿ ವಶಕ್ಕೆ ಪಡೆಯಲು ಸಾಧ್ಯ. -ಕೆ. ರಾಜು, ಸಹಾಯಕ ಕಮಿಷನರ್, ಕುಂದಾಪುರ
ಮಾಹಿತಿ ಇಲ್ಲ: ಭೂಸ್ವಾಧೀನ ಪ್ರಕ್ರಿಯೆಗೆ ಬಾಕಿ ಇರುವ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಕಡತ ತರಿಸಿ ನೋಡಿ ವಿಚಾರಿಸುತ್ತೇನೆ. –ಲಿಂಗೇಗೌಡ, ಯೋಜನಾ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ ಯೋಜನಾ ಪ್ರಾಧಿಕಾರ
-ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Kundapur: ಬೈಕ್ ಢಿಕ್ಕಿ; ಸ್ಕೂಟರ್ ಸವಾರೆಗೆ ಗಾಯ
Congress;ಪ್ರತಾಪ್ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ
ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ
ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ