ತೊಂಬಟ್ಟು: ಕುಡಿದ ಮತ್ತಿನಲ್ಲಿ ಹೆಂಡತಿಗೆ ಕತ್ತಿಯೇಟು!
Team Udayavani, Mar 16, 2018, 11:36 AM IST
ಸಿದ್ದಾಪುರ: ಕುಂದಾಪುರ ತಾಲೂಕಿನ ಮಚ್ಚಟ್ಟು ಗ್ರಾಮದ ತೊಂಬಟ್ಟಿನ ಗೊಡ್ಮಕ್ಕಿಯಲ್ಲಿ ಗುರುವಾರ ಮಧ್ಯಾಹ್ನ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಪತ್ನಿಯ ಕುತ್ತಿಗೆಗೆ ಕತ್ತಿಯಿಂದ ಕಡಿದಿದ್ದಾನೆ.
ಉದಯ ಪೂಜಾರಿ (42) ಕುಡಿದು ಬಂದು ಪತ್ನಿ ಆಶಾಳೊಂದಿಗೆ ಜಗಳ ಮಾಡಿ ಈ ಕೃತ್ಯವೆಸಗಿದ್ದಾನೆ ಎಂದು ಸ್ಥಳೀಯರು ಹೇಳುತ್ತಾರೆ. ಆಶಾ ಜೀವ ಉಳಿಸಿಕೊಳ್ಳಲು ಗಂಡನನ್ನು ತಳ್ಳಿ ಪಕ್ಕದ ಮನೆಯ ಕಡೆಗೆ ಕೂಗಿಕೊಂಡು ಓಡುವಾಗ ದಾರಿ ಮಧ್ಯೆ ಬಿದ್ದಿದ್ದಾರೆ. ಆಗ ಅಕ್ಕಪಕ್ಕದ ಮನೆಯವರು ಬಂದು ಆಶಾಳನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉದಯ ಪೂಜಾರಿ 15 ವರ್ಷ ಗಳ ಹಿಂದೆ ತೊಂಬಟ್ಟಿನ ಹೊಸಮನೆ ಆಶಾ(36)ಳನ್ನು ಮದುವೆಯಾಗಿ ಓರ್ವ ಪುತ್ರ ಮತ್ತು ಪುತ್ರಿಯನ್ನು ಹೊಂದಿದ್ದಾನೆ. 2-3 ವರ್ಷಗಳಿಂದ ದಂಪತಿ ನಡುವೆ ಆಗಾಗ ಜಗಳ ಹಾಗೂ ಹೊಡೆದಾಟ ನಡೆಯುತ್ತಿತ್ತು ಎನ್ನಲಾಗಿದೆ. ಕಳೆದ ವರ್ಷವೂ ಉದಯ ಪೂಜಾರಿ ಹೆಂಡತಿ ಆಶಾಳ ಕುತ್ತಿಗೆ ಒತ್ತಿ ಕೊಲ್ಲಲು ಯತ್ನಿಸಿದ್ದು, ಆಗ ಅಮಾಸೆಬೈಲು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು ಎನ್ನುತ್ತಾರೆ ಸ್ಥಳೀಯರು.
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಪತ್ನಿಯನ್ನು ಕೊಲ್ಲಲು ಯತ್ನಿಸಿದ್ದಾನೆ ಎಂದು ಆಕೆಯ ಸಂಬಂಧಿಕರು ಆರೋಪಿಸಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದಾನೆ. ಅಮಾಸೆಬೈಲು ಪೊಲೀಸರು ಘಟನ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಾಗಬೇಕಾಗಿದೆ.