ಗೋಪಾಡಿ-ಬೀಜಾಡಿ ಗ್ರಾ.ಪಂ.: 50ಕ್ಕೂ ಹೆಚ್ಚು ಕೆರೆಗಳು ನಾಮಾವಶೇಷ
Team Udayavani, Feb 9, 2022, 5:36 PM IST
ಕೋಟೇಶ್ವರ: ಗೋಪಾಡಿ- ಬೀಜಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಿಂದೆ 50ಕ್ಕೂ ಹೆಚ್ಚು ಕೆರೆ ಹಾಗೂ ಗುಮ್ಮಿಗಳಿದ್ದವು. ಆದರೆ ಅವುಗಳ ಹೂಳೆತ್ತದೆ ಈಗ ಬಹುತೇಕ ನಾಮಾವಶೇಷಗೊಂಡಿದೆ.
ಅನೇಕ ಕಡೆ ಕೆರೆಗಳು ಮುಚ್ಚಿಹೋಗಿದ್ದು, ಆ ಪ್ರದೇಶದಲ್ಲಿ ಕೆಸರು ತುಂಬಿ ಕಳೆ ಬೆಳೆದಿದ್ದು, ಜಾಗ ಗುರುತಿಸಲಾಗದಷ್ಟು ಮೂಲ ಸ್ವರೂಪಕ್ಕೆ ಧಕ್ಕೆಯಾಗಿದೆ. 1904ರ ಸರಕಾರದ ಅಡಂಗಲ ಪ್ರಕಾರ ಕೋಟೇಶ್ವರದ ಕುಂಬ್ರಿಯಿಂದ ಕೊಮೆ ತನಕ 50ಕ್ಕೂ ಮಿಕ್ಕಿ ಕೆರೆ ಹಾಗೂ ಗುಮ್ಮಿಗಳಿದ್ದವು. ಆ ಕಾಲಘಟ್ಟದಲ್ಲಿ ಅಲ್ಲಿನ ಕೃಷಿಕರಿಗೆ ಬೆಳೆ ಬೆಳೆಯಲು ಆಧಾರವಾಗಿತ್ತು. ಅವುಗಳ ನಿರ್ವಹಣೆಯನ್ನು ಕೃಷಿಕರೇ ಮಾಡುತ್ತಿದ್ದರು. ಕ್ರಮೇಣ ಹೂಳೆತ್ತದೇ ನಿರ್ವಹಣೆ ಇಲ್ಲದೆ ನಾಶವಾಗಿದೆ.
ಪ್ರಸ್ತುತ ಗೋಪಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ 11 ಕೆರೆಗಳಿವೆ. ಬೀಜಾಡಿಯಲ್ಲಿ ಕೂಡ ಸುಮಾರು 20 ಕೆರೆಗಳಿದ್ದೂ, ಅವುಗಳ ಹೂಳೆತ್ತುವ ಕಾರ್ಯದಲ್ಲಿ ಇಲಾಖೆ ಗಮನ ಹರಿಸಿದಲ್ಲಿ ಅಲ್ಲಿನ ನಿವಾಸಿಗಳಿಗೆ ಎಪ್ರಿಲ್, ಮೇ ತಿಂಗಳಲ್ಲಿ ನೀರಿನ ಕೊರತೆ ಇಲ್ಲದೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳಲು ಹೆಚ್ಚಿನ ಒತ್ತುಕೊಟ್ಟಂತಾಗುವುದು. ಗೋಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಂತೇಶ್ವರ ರಸ್ತೆ ಬಳಿಯ ಕೆರೆ, ಸ್ವಾಮಿಮನೆ ಹತ್ತಿರದ ಕೆರೆ, ಮೂಡುಗೋಪಾಡಿ ಕೆರೆ, ಸರಕಾರಿ ಕೆರೆ, ಮಡಿವಾಳದ ಬೆಟ್ಟು ಕೆರೆ, ಹತ್ವಾರ್ ಕೆರೆ, ಹೆಬ್ರಿಬೆಟ್ಟು ಕೆರೆ, ಆಜ್ರಾಡಿಬೆಟ್ಟು ಕೆರೆ, ಗಂಗನಕೆರೆ, ಮೂಡುಕೊಳ ಇದೆ.
ಬೀಜಾಡಿಯಲ್ಲಿ ಕಟ್ಟಿನಗುಂಡಿ, ಗೋವಿನಕೆರೆ, ಹುಣ್ಸೆಕೆರೆ, ಸೀಕೆರೆ, ಚಾತ್ರಕೆರೆ, ಮುಂಡಿಕೆರೆ, ದೇವಸ್ಥಾನಕೆರೆ, ಕಾಜುಕೆರೆ, ಸವಾತಿಕೆರೆ, ಎಳ್ಳುಕೆರೆ, ಅರಸರಬೆಟ್ಟುಕೆರೆ, ಪಡುಕೊಳ, ಮೂಡುಕೊಳ, ಬೆಳ್ಳಂಕಿ ಕೆರೆ, ಭಟ್ಟರಕೆರೆ, ಕ್ಯಾಸನಕೆರೆ, ಮಠದಕೆರೆ, ಚಿಕ್ಕುಕೆರೆ, ಚಿಪ್ಪಟ್ಟಿಕೆರೆ, ಬೀಜಾಡಿ ಕೊಳ ಇದ್ದು ಬಹುತೇಕ ನಾಮಾವಶೇಷವಾಗಿದೆ.
ಉದ್ಯೋಗ ಖಾತ್ರಿ ಯೋಜನೆಯಡಿ ಕೆಲವೊಂದು ಕೆರೆಗಳ ಹೂಳೆತ್ತಲಾಗಿದ್ದು, ಮಿಕ್ಕುಳಿದ ಕೆರೆಗಳ ಹೂಳೆತ್ತಲು ಸಂಪನ್ಮೂಲದ ಕೊರತೆಯಿಂದಾಗಿ ಅವುಗಳು ಕಡತದಲ್ಲಿ ಮಾತ್ರ ಉಳಿದಿವೆ. 50ರಷ್ಟು ಕೆರೆಗಳಿದ್ದು, ಅವೆಲ್ಲವೂ ಗುರುತಿಸಲ್ಪಟ್ಟಿದ್ದರೂ, ಹೂಳೆತ್ತುವ ಭಾಗ್ಯ ಕಾಣದೆ ಸ್ಥಳ ಗುರುತಿಸುವಿಕೆ ಪ್ರಶ್ನಾರ್ಥಕವಾಗಿ ಉಳಿದಿದೆ.
ಹೂಳೆತ್ತದ ಗಂಗನಕೆರೆ
ರಾ.ಹೆದ್ದಾರಿಯ ಸನಿಹದಲ್ಲೇ ಇರುವ ಸುಮಾರು 60 ಸೆಂಟ್ಸ್ ಜಾಗವ್ಯಾಪ್ತಿ ಹೊಂದಿರುವ ಗಂಗನಕೆರೆ 20 ವರ್ಷಗಳಿಂದ ಹೂಳೆತ್ತದೇ ತಡೆಬೇಲಿ ನಿರ್ಮಿ ಸದೇ ಅಪಾಯಕಾರಿ ಸ್ಥಿತಿಯಲ್ಲಿದೆ. ತೆಂಗಿನಬೆಟ್ಟು ತನಕ ದಾರಿ ಸಾಗುವ ಈ ಮಾರ್ಗದ ಅಂಚಿನಲ್ಲಿ 30 ಮನೆಗಳಿದ್ದೂ, 250ಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ. ಗೋಪಾಡಿ ಯುವಕಮಂಡಲ ಹಲವಾರು ವರ್ಷ ಗಳ ಹಿಂದೆ ಹೂಳೆತ್ತಿದ್ದರೂ, ಅದನ್ನು ಮುಂದುವರಿಸುವಲ್ಲಿ ಇಲಾಖೆ ಕ್ರಮಕೈ
ಗೊಂಡಿಲ್ಲ. ಈ ಕೆರೆಯನ್ನು ಸದುಪಯೋಗಗೊಳಿಸಿದಲ್ಲಿ ಅಂತರ್ಜಲ ವೃದ್ಧಿಯಾಗಿ ಜಲಕ್ಷಾಮಕ್ಕೆ ಪರಿಹಾರ ಲಭಿಸೀತು.
ಹೂಳೆತ್ತಲಾಗಿದೆ
ಉದ್ಯೋಗ ಖಾತ್ರಿ ಯೋಜನೆಯಡಿ ಆರ್ಥಿಕ ಸಂಪನ್ಮೂಲಕ್ಕನುಗುಣವಾಗಿ ಕೆಲವು ಕೆರೆಗಳ ಹೂಳೆತ್ತಲಾಗಿದೆ. ಇಲಾಖೆ ಹೆಚ್ಚಿನ ಅನುದಾನ ಒದಗಿಸಿದಲ್ಲಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು.
-ಗಣೇಶ,
ಗೋಪಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ
ಅನುಕೂಲ
ರಾ.ಹೆದ್ದಾರಿ ಸನಿಹದ ಗಂಗನಕೆರೆ ಹೂಳೆತ್ತುವಲ್ಲಿ ಗೋಪಾಡಿ ಯುವಕ ಮಂಡಲ ಕ್ರಮಕೈಗೊಂಡಿದ್ದು, ಸರಕಾರ ಅನುದಾನ ಬಿಡುಗಡೆಗೊಳಿಸಿದಲ್ಲಿ ಕೆರೆಗಳ ಹೂಳೆತ್ತಲುಅನುಕೂ
ಲವಾದೀತು.
-ಗಿರೀಶ್ ಉಪಾಧ್ಯ, ಗ್ರಾ.ಪಂ. ಸದಸ್ಯರು, ಗೋಪಾಡಿ
– ಡಾ| ಸುಧಾಕರ ನಂಬಿಯಾರ್