ಶಾಸಕರಿಂದ ಶಾಲೆ ದತ್ತು ಸ್ವೀಕಾರ; ಕುಂದಾಪುರದಲ್ಲಿ ವಿಶಿಷ್ಟ ಯೋಜನೆ, ಬೈಂದೂರಿನಲ್ಲಿ 3 ಶಾಲೆ
Team Udayavani, Jul 23, 2020, 2:45 PM IST
ಕುಂದಾಪುರ: ರಾಜ್ಯದ ಎಲ್ಲ ಶಾಸಕರು (ಸಚಿವರ ಸಹಿತ) 2020-21ನೇ ಸಾಲಿನಿಂದ ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಶಾಲೆಗಳನ್ನು ಕಡ್ಡಾಯವಾಗಿ ದತ್ತು ಪಡೆದು, ಮೂಲಸೌಕರ್ಯ ಅಭಿವೃದ್ಧಿ ಪಡಿಸಬೇಕು ಎನ್ನುವ ಯೋಜನೆಗೆ ಕುಂದಾಪುರ ಕ್ಷೇತ್ರದಲ್ಲಿ ವಿಶಿಷ್ಟ ಯೋಜನೆ ರೂಪಿಸಲಾಗಿದೆ. ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರದ ನಿರ್ದೇಶನದಂತೆ ಮೂರು ಶಾಲೆಗಳನ್ನು ಆಯ್ಕೆ ಮಾಡಲಾಗಿದೆ.
ಎಲ್ಲ ಶಾಲೆಗಳ ದತ್ತು
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 432 ಶಾಲೆಗಳಿದ್ದು ಸರಕಾರದ ಯೋಜನೆಯಂತೆ ಕೇವಲ ಮೂರು ಶಾಲೆಗಳನ್ನು ದತ್ತು ಎಂದು ಸ್ವೀಕರಿಸುವುದಿಲ್ಲ. ನನ್ನ ವಿಧಾನಸಭಾ ಕ್ಷೇತ್ರದ ಎಲ್ಲ ಶಾಲೆಗಳೂ ಅಭಿವೃದ್ಧಿಯಾಗಬೇಕೆನ್ನುವುದು ನನ್ನ ನಿಲುವು ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ತಿಳಿಸಿದ್ದಾರೆ.
ಮೂರು ಶಾಲೆಗಳಳು
ಬೈಂದೂರು ವಿಧಾನಸಭಾ ಕ್ಷೇತ್ರ ದಲ್ಲಿ ಮೂರು ಶಾಲೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದ್ದಾರೆ. ಸರಕಾರಿ ಪ್ರೌಢಶಾಲೆ ಸಿದ್ದಾಪುರ, ಕರ್ನಾಟಕ ಪಬ್ಲಿಕ್ ಶಾಲೆ ನೆಂಪು, ಸರಕಾರಿ ಪ್ರೌಢಶಾಲೆ ಉಪ್ಪುಂದ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ನೀಡಲಾಗು ವುದು ಎಂದಿದ್ದಾರೆ.
ವಿಶೇಷ ಅನುದಾನ ಇಲ್ಲ
ಶಾಲಾ ದತ್ತು ಸ್ವೀಕಾರಕ್ಕೆ ವಿಶೇಷ ಅನುದಾನ ಇಲ್ಲ. ಶಾಸಕರಿಗೆ ಈಗಾಗಲೇ ಬರುವ ಪ್ರದೇಶಾಭಿವೃದ್ಧಿ ನಿಧಿಯಲ್ಲೇ ಈ ಶಾಲೆಗಳ ಅಭಿವೃದ್ಧಿಗೂ ಅನುದಾನ ನೀಡಬೇಕು. ಜಿಲ್ಲಾಧಿಕಾರಿ ಮೇಲುಸ್ತುವಾರಿಯನ್ನು ಆಯಾ ಜಿಲ್ಲಾಧಿಕಾರಿಗಳೇ ವಹಿಸಿಕೊಳ್ಳಬೇಕು ಹಾಗೂ ಅನುದಾನ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು. ಪ್ರತಿ ತಿಂಗಳ ವರದಿಯನ್ನು ಇಲಾಖಾ ಆಯುಕ್ತರಿಗೆ ಸಲ್ಲಿಸಬೇಕು.
ವಿಶೇಷ ಅನುದಾನ ಇಲ್ಲದ್ದು ಶಾಸಕರಿಗೂ ಸಂಕಷ್ಟ ತಂದಿದೆ. ಕ್ಷೇತ್ರದ ಇತರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೊರತೆಯಾಗಲಿದೆ ಎಂಬ ಆತಂಕವಿದೆ. ಪ್ರದೇಶಾಭಿವೃದ್ಧಿ ನಿಧಿ ಬಳಸಿ ಆ ಶಾಲೆಯ ಕಟ್ಟಡ ನಿರ್ಮಾಣ, ಕೊಠಡಿ ದುರಸ್ತಿ, ಕಂಪ್ಯೂಟರ್ ಲ್ಯಾಬ್ ಅಥವಾ ಕಂಪ್ಯೂಟರ್ ಶಿಕ್ಷಣಕ್ಕೆ ಪೂರಕ ವ್ಯವಸ್ಥೆ ಕಲ್ಪಿಸುವುದು, ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಜತೆಗೆ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗುವಂತೆ ಮಾಡುವುದು ಇದರ ಉದ್ದೇಶ. ಶಾಲಾಭಿವೃದ್ಧಿ ಸಮಿತಿ, ಪೋಷಕರು, ದಾನಿಗಳ ನೆರವಿನಿಂದ ಹಣ ಹೊಂದಿಸಬೇಕಿದೆ. ಈಗಾಗಲೇ ಖಾಸಗಿ ಶಾಲೆಗಳು ಆನ್ಲೈನ್ ಶಿಕ್ಷಣ ಆರಂಭಿಸಿದ್ದರೆ ಸರಕಾರಿ ಶಾಲೆಗಳಿಗೆ ಶೇ.70ರಷ್ಟು ಪುಸ್ತಕ ವಿತರಿಸಲಾಗಿದೆ.
ಎಲ್ಲ ಶಾಲೆಗಳ ದತ್ತು
ಕ್ಷೇತ್ರ ವ್ಯಾಪ್ತಿಯ 432 ಶಾಲೆಗಳಲ್ಲೂ ಮೂಲ ಸೌಕರ್ಯಕ್ಕೆ ಕೊರತೆಯಾಗದಂತೆ ಆದ್ಯತೆಯಲ್ಲಿ ನೋಡಿಕೊಳ್ಳಲಾಗುವುದು. ಒಂದೆರಡು ಶಾಲೆಗೆ ಮಾತ್ರ ಸೀಮಿತ ಶಾಸಕ ನಾನಲ್ಲ. ಎಲ್ಲ ಶಾಲೆಗಳ ಸಮಸ್ಯೆಗಳಿಗೂ ಸ್ಪಂದಿಸುತ್ತೇನೆ.
-ಹಾಲಾಡಿ ಶ್ರೀನಿವಾಸ ಶೆಟ್ಟಿ, , ಕುಂದಾಪುರ ಶಾಸಕರು
ಮೂರು ಶಾಲೆ ದತ್ತು
ಕ್ಷೇತ್ರ ವ್ಯಾಪ್ತಿಯ ನೆಂಪು, ಸಿದ್ದಾಪುರ, ಉಪ್ಪುಂದ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲಾಗುವುದು. ಶೈಕ್ಷಣಿಕ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುವುದು. ಪ್ರತಿ ಮಗುವಿಗೂ ಶಿಕ್ಷಣ ದೊರೆಯುವಂತಾಗಬೇಕು ಎನ್ನುವುದು ನಮ್ಮ ಆಶಯ.
-ಬಿ.ಎಂ. ಸುಕುಮಾರ ಶೆಟ್ಟಿ, ಬೈಂದೂರು ಶಾಸಕರು