ಶಾನಾಡಿ:ಚಿರತೆ ದಾಳಿಗೆ ಕರು ಬಲಿ
Team Udayavani, Jan 26, 2018, 12:10 PM IST
ತೆಕ್ಕಟ್ಟೆ: ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾನಾಡಿ ಯಲ್ಲಿ ಜ.25 ರಂದು ನಸುಕಿನ ವೇಳೆ ಚಿರತೆ ದಾಳಿ ನಡೆಸಿ ಕರುವನ್ನು ಕೊಂದು ಹಾಕಿದೆ.
ಸಾವಯವ ಕೃಷಿಕ ಶಾನಾಡಿ ರಾಮಚಂದ್ರ ಭಟ್ ಮುಂಜಾನೆ ಗಂಟೆೆ 5.30ರ ಸುಮಾರಿಗೆ ಕೊಟ್ಟಿಗೆ ಯಲ್ಲಿರುವ ಹಸುಗಳಿಗೆ ಮೇವು ಹಾಕಲೆಂದು ತೆರಳಿದಾಗ ಅಲ್ಲಿ ಕಟ್ಟಿ ಹಾಕಲಾಗಿದ್ದ ನಾಲ್ಕು ತಿಂಗಳ ಕರು ನಾಪತ್ತೆಯಾಗಿತ್ತು. ಚಿರತೆ ದಾಳಿ ನಡೆಸಿದ ಬಗ್ಗೆ ಅನುಮಾನಗೊಂಡ ಭಟ್ ಅವರು ಪರಿಸರದಲ್ಲಿ ಹುಡು ಕಾಡಿದಾಗ ಸಮೀಪದ ಹಾಡಿಯಲ್ಲಿ ಕರುವಿನ ಅರ್ಧ ದೇಹ ಪತ್ತೆಯಾಗಿದೆ.
ಗ್ರಾಮೀಣ ಭಾಗದಲ್ಲಿ ಭೀತಿ
ಗ್ರಾಮೀಣ ಭಾಗಗಳಾದ ಕೊರ್ಗಿ, ಚಾರುಕೊಟ್ಟಿಗೆ ಪರಿಸರದಲ್ಲಿ ಒಂದು ವಾರದಿಂದ ಚಿರತೆ ಭೀತಿ ಜನರನ್ನು ಕಾಡುತ್ತಿದೆ. ಈಗಾಗಲೇ ಪರಿಸರದ ಎರಡು ನಾಯಿ ಹಾಗೂ ಎರಡು ಕರುಗಳ ಮೇಲೆ ದಾಳಿ ನಡೆಸಿದ್ದು, ಈ ಬಗ್ಗೆ ಇಲಾಖೆಯ ಗಮನಕ್ಕೆ ತರಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೆದೂರು ಪಶು ಸಂಗೋಪನಾ ಕೇಂದ್ರ ಡಾ| ನಿರಂಜನ್ ಮೂರ್ತಿ ಹಾಗೂ ಕುಂದಾಪುರದ ಅರಣ್ಯ ಇಲಾಖೆ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.