ಕುಗ್ರಾಮದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಲ್ಲಿ ಸೀಟ್ ಇಲ್ಲ
ಬೆಳಗ್ಗೆ 6ಕ್ಕೆ ಮನೆಯಿಂದ ಹೊರಟರೆ ಮನೆ ತಲುಪುವಾಗ ರಾತ್ರಿ 8 ಗಂಟೆ
Team Udayavani, Aug 12, 2022, 3:29 PM IST
ಬೈಂದೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸೂಕ್ತ ಪ್ರೋತ್ಸಾಹ ದೊರೆಯಬೇಕು ಎನ್ನುವ ಆಶಯದಲ್ಲಿ ಸರಕಾರ, ಶಿಕ್ಷಣ ಇಲಾಖೆ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಆದರೆ ಕುಗ್ರಾಮದಲ್ಲಿ ಬೆಳೆದು ಪರಿಶ್ರಮದಿಂದ ಅತ್ಯುತ್ತಮ ಅಂಕ ಪಡೆದರೂ ಹಾಸ್ಟೆಲ್ನಲ್ಲಿ ಸೀಟ್ ಸಿಗದೆ ನಿತ್ಯ ನೂರಾರು ಕಿ.ಮೀ. ಅಲೆಯಬೇಕಾಗಿರುವ ಸಂಕಷ್ಟ ಬೈಂದೂರು ತಾಲೂಕಿನ ತಗ್ಗರ್ಸೆ, ಎಳಜಿತ್, ಗೋಳಿಹೊಳೆ, ವಸ್ರೆ, ಅರೆಶಿರೂರು ಮುಂತಾದ ಭಾಗದಲ್ಲಿ ಕಂಡು ಬರುತ್ತಿದೆ. ಮಾತ್ರವಲ್ಲದೆ ಶಿಕ್ಷಣಕ್ಕಾಗಿ ಇಲ್ಲಿನ ವಿದ್ಯಾರ್ಥಿಗಳು ಪಡುವ ಕಷ್ಟ ಸರಕಾರದ ಧೋರಣೆಯನ್ನು ಅಣಕಿಸುವಂತಿದೆ.
ಹಾಸ್ಟೆಲ್ನಲ್ಲಿ ಸೀಟಿಲ್ಲ
ಬಹಳ ವರ್ಷದಿಂದ ಕಾಲ್ತೋಡು, ಗೋಳಿಹೊಳೆ, ಸುತ್ತಮುತ್ತಲಿನ ವಿದ್ಯಾರ್ಥಿಗಳು ಪ್ರೌಢಶಿಕ್ಷಣ ಮುಗಿದ ಬಳಿಕ ಕುಂದಾಪುರದ ಸರಕಾರಿ ಕಾಲೇಜಿನಲ್ಲಿ ಪ್ರವೇಶ ಪಡೆದು ಹಾಸ್ಟೆಲ್ನಲ್ಲಿ ಉಳಿದು ಪಿ.ಯು.ಸಿ. ಹಾಗೂ ಪದವಿ ಶಿಕ್ಷಣ ಪೂರೈಸಿದ್ದರು. ಕಾರಣವೆಂದರೆ ಈ ವಿದ್ಯಾರ್ಥಿಗಳು ಕಾಡುದಾರಿಯಲ್ಲಿ ನಿತ್ಯ ಹತ್ತಾರು ಕಿ.ಮೀ . ನಡೆದು ಬರಬೇಕು. ಮಾತ್ರವಲ್ಲದೆ ಎರಡೆರಡು ಬಸ್ ಬದಲಾಯಿಸಿ ಕಾಲೇಜಿಗೆ ಬರಬೇಕು. ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೊರಬಂದರೆ ಸಂಜೆ 8 ಗಂಟೆಯಾದರೂ ಮನೆ ತಲುಪುವುದು ಕಷ್ಟ. ಹೀಗಾಗಿ ಪಾಲಕರು ಕುಂದಾಪುರದ ಹಿಂದುಳಿದ ವರ್ಗದ ಹಾಸ್ಟೆಲ್ಗಳಲ್ಲಿ ಶಿಕ್ಷಣ ನೀಡುತ್ತಾರೆ. ಕುಂದಾಪುರ ವ್ಯಾಪ್ತಿಯಲ್ಲಿ ಪಟ್ಟಣ ಪಂಚಾಯತ್ ಹೊರತುಪಡಿಸಿ ಆರು ಹಾಸ್ಟೆಲ್ಗಳಿವೆ. ಆನ್ಲೈನ್ನಲ್ಲಿ ಅರ್ಜಿ ಭರ್ತಿ ಮಾಡಿ ಅಂಕಗಳ ಆಧಾರದಲ್ಲಿ ಆಯ್ಕೆ ಪ್ರಕ್ರಿಯೆ ಇದೆ. ಆದರೆ ಶೇ. 96 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ನಲ್ಲಿ ಸ್ಥಾನ ದೊರೆತಿಲ್ಲ. ರಾಜಕೀಯ ಮತ್ತು ಇತರ ಪ್ರಭಾವಗಳಿಂದ ಕಡಿಮೆ ಅಂಕ ಪಡೆದವರಿಗೆ ಸೀಟು ದೊರೆತಿದೆ. ಇಂತಹ ಅತಂತ್ರ ವ್ಯವಸ್ಥೆಯಿಂದ ನೂರಾರು ಮಕ್ಕಳ ಭವಿಷ್ಯ ಡೋಲಾಯಮಾನವಾಗಿದೆ. ಗೋಳಿಹೊಳೆ-ತಗ್ಗರ್ಸೆ ಭಾಗದಿಂದ ಸುಮಾರು 30 ರಿಂದ 35 ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಸ್ಥಾನ ಸಿಗದೆ ನಿತ್ಯ ಕುಗ್ರಾಮದಿಂದ ಕುಂದಾಪುರ ಕಾಲೇಜಿಗೆ ಹೋಗಿ ಬರಬೇಕಾಗಿದೆ.
ಕಾಡು ದಾರಿಯಲ್ಲಿ ಅಪಾಯ
ಬೈಂದೂರು ತಾಲೂಕಿನ ಗುಡ್ಡಗಾಡು ಪ್ರದೇಶದಲ್ಲಿ ಮನೆಗಳ ಸಂಖ್ಯೆ ವಿರಳ. ಹತ್ತಾರು ಕಿ.ಮೀ. ಕಾಡು ದಾರಿಯಲ್ಲಿ ಸಾಗಬೇಕು.
ಮಳೆಗಾಲದಲ್ಲಿ ನದಿ ತೊರೆಗಳು ತುಂಬಿ ಹರಿಯುತ್ತದೆ. ವಿದ್ಯಾರ್ಥಿನಿಯರಿಗೆ ನಿತ್ಯ ಕಾಲೇಜಿಗೆ ಹೋಗಿ ಬರಲು ಕಾಡು ದಾರಿ ಅತ್ಯಂತ ಅಪಾಯಕಾರಿ. ಹೀಗಾಗಿ ಪಾಲಕರು ಕೂಲಿ ಕೆಲಸ ಬಿಟ್ಟು ಮಕ್ಕಳ ಬರುವಿಕೆಯನ್ನು ಕಾಯಬೇಕು. ಕೆಲವು ಕಡೆ ಪ್ರತೀ ದಿನ 150 ರೂ. ರಿಕ್ಷಾ ಬಾಡಿಗೆ ಕೊಟ್ಟು ಮನೆ ಸೇರಬೇಕು. ಬಡ ಕುಟುಂಬಗಳಿಗೆ ಈ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಪಾಲಕರ ಗೋಳಾಗಿದೆ.
ಇಂತಹ ನೂರಾರು ವಿದ್ಯಾರ್ಥಿಗಳು ಯಾವುದೇ ಖಾಸಗಿ ಕಾಲೇಜಿನಲ್ಲಿ ಓದುತ್ತಿಲ್ಲ. ಬದಲಾಗಿ ಕುಂದಾಪುರ ಸರಕಾರಿ ಕಾಲೇಜಿನಲ್ಲಿ ಪಿ.ಯು.ಸಿ. ಓದುತ್ತಿದ್ದಾರೆ. ಅಪರಾಧ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂದರ್ಭ ನಿತ್ಯ ಕುಗ್ರಾಮದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪಡುವ ಗೋಳು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡುತ್ತಿದೆ. ಹೀಗಾಗಿ ಬೈಂದೂರು ಸೇರಿದಂತೆ ತಾ|ನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಿತ್ಯ ನೂರಾರು ಕಿ.ಮೀ. ಶಿಕ್ಷಣಕ್ಕಾಗಿ ಅಲೆಯತ್ತಿರುವುದನ್ನು ಮನಗಂಡು ಇಲಾಖೆ, ಸಚಿವರು ತತ್ಕ್ಷಣ ಇಂತಹ ವಿದ್ಯಾರ್ಥಿಗಳ ಮಾಹಿತಿ ಪಡೆದು ಹಾಸ್ಟೆಲ್ ಸೀಟ್ ಒದಗಿಸಬೇಕಾಗಿದೆ.
ಹಾಸ್ಟೆಲ್ ಸಮಸ್ಯೆಗೆ ಕಾರಣಗಳೇನು?
ಕೊವಿಡ್ಗಿಂತ ಮೊದಲು ಈ ಸಮಸ್ಯೆಗಳಿರಲಿಲ್ಲ. ಕೊವಿಡ್ ಬಳಿಕ ಪದವಿ ವೇಳಾಪಟ್ಟಿ ಬದಲಾಗಿದೆ. ಜತೆಗೆ ಸಮಾಜ ಕಲ್ಯಾಣ ಇಲಾಖೆ ಅವೈಜ್ಞಾನಿಕ ನಿಯಮ ಜಾರಿಗೆ ತಂದಿದೆ. ಇದರ ಪ್ರಕಾರ ಜಾತಿವಾರು ಶೇ.35ರಷ್ಟು ಮೀಸಲಾತಿ ನಿಯಮ ಜಾರಿಗೆ ತಂದಿದೆ.ಇದರಿಂದಾಗಿ ಪ್ರಭಾವ ಇದ್ದವರು ಸ್ಥಾನ ಗಳಿಸಿಕೊಂಡರೆ ಪ್ರತಿಭಾವಂತ ವಿದ್ಯಾರ್ಥಿಗಳು ಸೀಟು ವಂಚಿತರಾಗುವಂತೆ ಮಾಡಿದೆ. ಒಟ್ಟು 267ಕ್ಕೂ ಅಧಿಕ ಅರ್ಜಿಗಳು ಬಾಕಿ ಉಳಿದಿದೆ. ಇಷ್ಟೆಲ್ಲ ಅಭಿವೃದ್ಧಿ ಸಾಧನೆ ಬಿಂಬಿಸು ತ್ತಿರುವ ಇಲಾಖೆ ಕನಿಷ್ಠ ಪಕ್ಷ ಕುಗ್ರಾಮದ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ನಲ್ಲಿ ಸೀಟು ನೀಡಲು ಸಾಧ್ಯವಾಗದಿರುವುದು ಇಲಾಖೆಯ ನಿರ್ಲಕ್ಷ್ಯವನ್ನು ಬಿಂಬಿಸುತ್ತದೆ.
ಸೀಟು ಸಿಗದೆ ಸಮಸ್ಯೆ: ಹಾಸ್ಟೆಲ್ ಸೀಟು ಸಿಗುತ್ತದೆ ಎಂದು ಬಡವರಾದ ನಾವು ಕುಂದಾಪುರ ಸರಕಾರಿ ಕಾಲೇಜಿಗೆ ಮಕ್ಕಳನ್ನು ಪಿ.ಯು.ಸಿ. ತರಗತಿಗೆ ಸೇರಿಸಿದ್ದೇವೆ. ಆದರೆ ಹಾಸ್ಟೆಲ್ ಸೀಟು ಸಿಗದೆ ನಿತ್ಯ ನೂರಾರು ಕಿ.ಮೀ. ಅಲೆಯಬೇಕಾಗಿದೆ. ಕಾಡು ದಾರಿಯಲ್ಲಿ ಮಕ್ಕಳು ಬರುವವರೆಗೆ ಆತಂಕ ಉಂಟಾಗುತ್ತದೆ. ಅತ್ಯಧಿಕ ಅಂಕ ಪಡೆದರೂ ನಮ್ಮ ಮಕ್ಕಳಿಗೆ ಸರಕಾರ ಸೀಟ್ ನೀಡಿಲ್ಲ. ಬದಲಾಗಿ ರಾಜಕೀಯ ಪ್ರಭಾವಿತರಿಗೆ ಕಡಿಮೆ ಅಂಕ ಇದ್ದರೂ ಹಾಸ್ಟೆಲ್ ದೊರೆತಿದೆ. ಸಚಿವರು ಇದನ್ನು ಖುದ್ದು ಪರಿಶೀಲಿಸಬೇಕಾಗಿದೆ. – ಚಿಕ್ಕಯ್ಯ ಪೂಜಾರಿ ಅರೆಶಿರೂರು, ವಿದ್ಯಾರ್ಥಿಗಳ ಪಾಲಕರು
ಸೀಟು ಕಲ್ಪಿಸಲು ಪ್ರಯತ್ನ: ಈಗಾಗಲೇ 267 ಅರ್ಜಿಗಳು ಬಾಕಿ ಇವೆ. ಕುಗ್ರಾಮದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಿಗದಿರುವುದು ಮತ್ತು ಆ ವಿದ್ಯಾರ್ಥಿಗಳು ನಿತ್ಯ ಪಡುತ್ತಿರುವ ಕಷ್ಟ ನಮ್ಮ ಗಮನಕ್ಕೂ ಬಂದಿದೆ. ಜಿಲ್ಲಾಧಿಕಾರಿಯ ಗಮನಕ್ಕೆ ಈ ವಿಷಯ ತಂದಿದ್ದು ಜಾತಿವಾರು ಮೀಸಲಾತಿಯಿಂದ ಈ ಸಮಸ್ಯೆ ಉಂಟಾಗಿದೆ. ಮೇಲಧಿಕಾರಿಗಳ ಮಾರ್ಗದರ್ಶನದಂತೆ ಶೀಘ್ರ ವಿದ್ಯಾರ್ಥಿಗಳಿಗೆ ಅವಕಾಶ ದೊರಕಿಸುವ ಪ್ರಯತ್ನ ಮಾಡುತ್ತೇನೆ. – ಶಶಿಕಲಾ, ಪ್ರಭಾರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ