ಗೆಲ್ಲು ಕಡಿಯುವಾಗ ವಿದ್ಯುತ್ ಪ್ರವಹಿಸಿ ಯುವಕ ಸಾವು
Team Udayavani, Nov 24, 2022, 5:05 PM IST
ಗಂಗೊಳ್ಳಿ: ಮರದ ಗೆಲ್ಲು ಕಡಿಯುವಾಗ ವಿದ್ಯುತ್ ಪ್ರವಹಿಸಿ ಯುವಕನೊಬ್ಬ ಮೃತಪಟ್ಟ ಘಟನೆ ಗುಜ್ಜಾಡಿ ಗ್ರಾಮದ ನಾಯಕವಾಡಿ ಚೆಕ್ಪೋಸ್ಟ್ ಬಳಿ ಬುಧವಾರ ಸಂಜೆ ಸಂಭವಿಸಿದೆ.
ಗುಜ್ಜಾಡಿ ಗ್ರಾಮದ ನಿವಾಸಿ ನರಸಿಂಹ ನಾಯಕವಾಡಿ ಅವರ ಪುತ್ರ ಸುಜಯ (20) ಮೃತಪಟ್ಟ ಯುವಕ.
ಊರ ದೇಗುಲದ ಕಾರ್ತಿಕ ದೀಪೋತ್ಸವದ ಕಟ್ಟೆಪೂಜೆಯ ಸಿದ್ಧತೆ ಮಾಡುತ್ತಾ ಮಾವಿನ ತೋರಣ ಕಟ್ಟಲು ಕಟ್ಟೆಯ ಬಳಿ ಇರುವ ಮಾವಿನ ಮರದ ಕೊಂಬೆಯನ್ನು ಕಡಿಯಲು ಮರ ಹತ್ತಿ, ಮರದ ಕೊಬೆಯನ್ನು ಕಡಿಯುವಾಗ, ಮರದ ಕೊಂಬೆಯು ಸಮೀಪದಲ್ಲಿ ಹಾದು ಹೋದ 33 ಸಾವಿರ ಕೆವಿ ಸಾಮರ್ಥ್ಯದ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಪ್ರವಹಿಸಿ ಸುಜಯ್ ಅವರಿಗೆ ತಗಲಿದ್ದು, ತತ್ಕ್ಷಣ ಅವರನ್ನು ಸ್ಥಳೀಯರ ಸಹಕಾರದಲ್ಲಿ ಆಂಬುಲೆನ್ಸ್ ಮೂಲಕ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಯುವಕನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಸುಜಯ್ ಪ್ರತಿಭಾನ್ವಿತನಾಗಿದ್ದು, ಐಟಿಐ ವಿದ್ಯಾಭ್ಯಾಸವನ್ನು ಪೂರೈಸಿದ್ದರು. ಊರಲ್ಲಿ ಎಲ್ಲರ ಪ್ರೀತಿ ಪಾತ್ರರಾಗಿದ್ದ. ತಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ತಾಯಿ, ಅಣ್ಣ, ತಂಗಿಯೊಂದಿಗೆ ಅಜ್ಜಿ ಮನೆಯಲ್ಲಿ ನೆಲೆಸಿದ್ದರು.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.