ಕಾರ್ಕಳ ತಾ: 6,342 ಹೆಕ್ಟೇರ್ ಗದ್ದೆಯಲ್ಲಿ ಭತ್ತ ಬೆಳೆಯುವ ಗುರಿ
Team Udayavani, Jun 27, 2019, 5:23 AM IST
ಅಜೆಕಾರು: ವಿರಳ ಮುಂಗಾರುವಿನ ನಡುವೆಯೂ ಕಾರ್ಕಳ ತಾಲೂಕಿನಲ್ಲಿ ಈ ಬಾರಿ 6,342 ಹೆಕ್ಟೇರ್ ಭೂಮಿಯಲ್ಲಿ ಭತ್ತ ಬೆಳೆಯುವ ಗುರಿಯನ್ನು ಕಾರ್ಕಳ ಕೃಷಿ ಇಲಾಖೆ ಹೊಂದಿದೆ.
ಜೂನ್ ತಿಂಗಳಿನಲ್ಲಿ ನಾಟಿ ಕಾರ್ಯ ಪ್ರಾರಂಭ ವಾಗಬೇಕಿತ್ತಾದರೂ ಮಳೆ ಬಂದಿಲ್ಲ. ಸದ್ಯ ಒಂದು ವಾರ ಗಳಿಂದ ಅಲ್ಪ ಪ್ರಮಾಣದಲ್ಲಿ ಮಳೆ ಬೀಳುತ್ತಿದ್ದು ಕೃಷಿ ಚಟುವಟಿಕೆಗೆ ರೈತರು ಮುಂದಾಗಿದ್ದಾರೆ.
2019-20ನೇ ಸಾಲಿನಲ್ಲಿ ಕಾರ್ಕಳ ಹೋಬಳಿಯಲ್ಲಿ 4,294 ಹೆಕ್ಟೇರ್ ಕೃಷಿ ಭೂಮಿ ಹಾಗೂ ಅಜೆಕಾರು ಹೋಬಳಿಯಲ್ಲಿ 2,048 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಸಲು ಕೃಷಿ ಇಲಾಖೆ ಗುರಿ ಹಾಕಿಕೊಂಡಿದೆ.
ತಾಲೂಕಿನಲ್ಲಿ ನೀರಿನಾಶ್ರಯವಿರುವ 20 ಹೆಕ್ಟೇರ್ ಪ್ರದೇಶದಲ್ಲಿ ನೇರ ಬಿತ್ತನೆ ಕಾರ್ಯವನ್ನು ಆರಂಭ ಮಾಡಲಾಗಿದ್ದು ಉಳಿದ ರೈತರು ನೇಜಿ ತಯಾರಿಗೆ ಮುಂದಾಗಿದ್ದಾರೆ. 2018-19ನೇ ಸಾಲಿನಲ್ಲಿ ತಾಲೂಕಿನಾ ದ್ಯಂತ ಒಟ್ಟು 7,600 ಹೆಕ್ಟೇರ್ ಭೂ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹಾಕಲಾಗಿತ್ತಾದರೂ 6,340 ಹೆಕ್ಟೇರ್ ಭೂಮಿಯಲ್ಲಿ ಮಾತ್ರ ಬೆಳೆಯಲಾಗಿತ್ತು.
ಭತ್ತದ ಬೀಜ
ಅಜೆಕಾರು ಹಾಗೂ ಕಾರ್ಕಳ ರೈತ ಸಂಪರ್ಕ ಕೇಂದ್ರದಲ್ಲಿ ಎಂಒ4 ಭತ್ತದ ತಳಿ ರೈತರಿಗೆ ಲಭ್ಯವಿದ್ದು ಸಹಾಯಧನದಲ್ಲಿ ಲಭಿಸುತ್ತಿದೆ. ಒಂದು ವಾರದಲ್ಲಿ ಜ್ಯೋತಿ ಭತ್ತದ ತಳಿಯು ಲಭ್ಯವಿರಲಿದೆ ಎಂದು ಕೃಷಿ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಗದ್ದೆಗೆ ಉಪಯೋಗಿಸುವ ಸುಣ್ಣ, ಜಿಂಕ್ ಸಲ್ಫೇಟ್, ಟ್ರೈಕೋಡರ್ಮಾಗಳು ಶೇ. 50ರ ಸಹಾಯಧನದಲ್ಲಿ ಎರಡೂ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿವೆೆ.
ಸಂಪರ್ಕ ಸಂಖ್ಯೆ
ರೈತರು ಬಿತ್ತನೆ ಬೀಜ ಹಾಗೂ ಇತರ ಮಾಹಿತಿಗಾಗಿ ಕಾರ್ಕಳ ರೈತ ಸಂಪರ್ಕ ಕೇಂದ್ರದ ದೂರವಾಣಿ: 08258-230260 ಹಾಗೂ ಅಜೆಕಾರು ರೈತ ಸಂಪರ್ಕ ಕೇಂದ್ರದ ದೂ: 8277932527ಸಂಪರ್ಕಿಸಬಹುದಾಗಿದೆ.