12ನೇ ಮಹಾ ಕದನ: ನೆನಪುಗಳೇ ನಿಮ್ಮನ್ನು ಮರೆಯಲಾದೀತೇ


Team Udayavani, Jul 15, 2019, 11:00 AM IST

morgan-world-cup

ವಿಶ್ವಕಪ್‌ ಮುಗಿದಿದೆ. ಈ ಹೊತ್ತಿನಲ್ಲಿ ನೆನಪು ಬಿಚ್ಚಿಕೊಂಡಿದೆ. ಇಲ್ಲಿ ನಲಿವಿದೆ, ನೋವಿದೆ, ವಿದಾಯವಿದೆ. ಅವೆಲ್ಲ ಒಂದು ಗುಚ್ಛವಾಗಿ ನಿಮ್ಮೆದುರು ಈಗ ಸ್ಪುಟಗೊಂಡಿದೆ. ಓದಿಕೊಳ್ಳಿ.

ವಿವಾದಗಳ ಸರಮಾಲೆ
ರಾಯುಡು ದಿಢೀರ್‌ ನಿವೃತ್ತಿ: ಸಿಟ್ಟಾದ ಅಭಿಮಾನಿಗಳು
ರಾಯುಡು ಭಾರತದ ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಮೀಸಲು ಆಟಗಾರರಾಗಿದ್ದರು. ಯಾರಾದರೂ ಗಾಯಗೊಂಡರೆ ಅವರೇ ಮೊದಲ ಆಯ್ಕೆಯಾಗಬೇಕಿತ್ತು. ಆದರೆ ಶಿಖರ್‌ ಧವನ್‌ ಹಾಗೂ ವಿಜಯ್‌ ಶಂಕರ್‌ ಗಾಯಗೊಂಡಾಗಲೂ ರಾಯುಡುಗೆ ಕರೆ ಹೋಗಲಿಲ್ಲ. ಅವರ ಬದಲು ರಿಷಭ್‌ ಪಂತ್‌ ಹಾಗೂ ಮಾಯಾಂಕ್‌ ಅಗರ್ವಾಲ್‌ ಸ್ಥಾನ ಪಡೆದರು. ಇದರಿಂದ ಬೇಸತ್ತ ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಪ್ರಕಟಿಸಿದರು. ಅವರ ದಿಢೀರ್‌ ವಿದಾಯ ಭಾರತೀಯ ಕ್ರಿಕೆಟ್‌ ವಲಯದಲ್ಲಿ ಭಾರೀ ವಿವಾದ ಸೃಷ್ಟಿಸಿದೆ. 55 ಏಕದಿನ ಆಡಿರುವ 1694 ರನ್‌ ಬಾರಿಸಿದ್ದಾರೆ.

ಪಾಕಿಸ್ಥಾನ-ಅಫ್ಘಾನಿಸ್ಥಾನ  ಅಭಿಮಾನಿಗಳ ಹೊಡೆದಾಟ
ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನದ ನಡುವೆ ಲೀಗ್‌ ಹಂತದ ವಿಶ್ವಕಪ್‌ ಪಂದ್ಯ ನಡೆಯುತ್ತಿದ್ದಾಗ, ಮೈದಾನಕ್ಕೆ ಅತಿ ಸಮೀಪವಾಗಿ ಎರಡು ವಿಮಾನಗಳು ಹಾರಿದವು. ಅದರಲ್ಲಿ ಪಾಕ್‌ ವ್ಯಾಪ್ತಿಯಲ್ಲಿ ಬರುವ ಬಲೂಚಿಸ್ಥಾನಕ್ಕೆ ನ್ಯಾಯ ಕೊಡಿ ಎಂಬ ಫ‌ಲಕಗಳು ಹಾರಾಡಿದವು. ಅದನ್ನು ನೋಡಿದ್ದೇ ತಡ ಪಾಕಿಸ್ಥಾನ-ಅಫ್ಘಾನಿಸ್ಥಾನ ಅಭಿಮಾನಿಗಳು ಹೊಡೆದಾಡತೊಡಗಿದರು. ಕಡೆಗೆ ಆ ಅಭಿಮಾನಿಗಳನ್ನು ಹೊರಹಾಕಲಾಯಿತು. ಅಲ್ಲೂ ಹೊಡೆದಾಟ ಮುಂದುವರಿಯಿತು. ತಮಗೆ ಕಿಂಚಿತ್ತೂ ಸಂಬಂಧಪಡದ ಬಲೂಚಿಸ್ಥಾನ ಫ‌ಲಕ ನೋಡಿ ಅಫ್ಘಾನ್‌ ಅಭಿಮಾನಿಗಳು ಗಲಾಟೆ ಮಾಡಿದ್ದು ಏಕೆ ಎನ್ನುವುದು ಇನ್ನೂ ನಿಗೂಢವಾಗಿದೆ.

ಮಳೆಗೆ ಪಂದ್ಯಗಳು ರದ್ದು: ಕೂಟ ನೀರಸ
ಇಡೀ ವಿಶ್ವಕಪ್‌ಗೆ ದೊಡ್ಡ ಪ್ರಮಾಣದಲ್ಲಿ ಕಾಡಿದ ಸಮಸ್ಯೆಯೆಂದರೆ ಮಳೆ. ವಿಶ್ವಕಪ್‌ ಅರ್ಧ ಮುಗಿದ ಹಂತದಲ್ಲಿ ಭಾರತ-ನ್ಯೂಜಿಲೆಂಡ್‌ ಪಂದ್ಯವೂ ಸೇರಿದಂತೆ 4 ಪಂದ್ಯಗಳು ರದ್ದಾಗಿದ್ದವು. ಇನ್ನೆರೆಡು ಪಂದ್ಯಗಳು ಡಕ್‌ವರ್ಥ್ ಲೂಯಿಸ್‌ ನಿಯಮದಡಿ ಫ‌ಲಿತಾಂಶ ಬಂದಿತ್ತು. ಇದರಿಂದ ವಿಶ್ವಾದ್ಯಂತ ಅಭಿಮಾನಿಗಳು ಬೇಸತ್ತಿದ್ದರು. ಅಂತರ್ಜಾಲದಲ್ಲಿ ನೂರಾರು ವಿಧವಿಧದ ಜೋಕುಗಳು ಹರಿದಾಡಿದ್ದವು. ಕೂಟ ತನ್ನ ಕುತೂಹಲವನ್ನೇ ಕಳೆದುಕೊಂಡಿತ್ತು.

ಅಂಪಾಯರ್‌ ಜೊತೆ ಕೊಹ್ಲಿ ಗಲಾಟೆ, ನಿಷೇಧ ಭೀತಿ
ವಿಶ್ವಕಪ್‌ನ ಲೀಗ್‌ ಹಂತದ ಕೆಲವು ಪಂದ್ಯಗಳಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅಂಪಾಯರ್‌ಗೆ ವಿಪರೀತ ಮನವಿ ಮಾಡಿದ್ದಾರೆಂದು ಹೇಳಲಾಗಿತ್ತು. ಅದರ ಪರಿಣಾಮ ಸೆಮಿಫೈನಲ್‌ಗ‌ೂ ಮುನ್ನವೇ ಅವರು ಒಂದು ಪಂದ್ಯಕ್ಕೆ ನಿಷೇಧಗೊಳ್ಳಲಿದ್ದಾರೆಂಬ ಸುದ್ದಿ ಹಬ್ಬಿದ್ದರಿಂದ ಅಭಿಮಾನಿಗಳು ಆತಂಕಗೊಂಡಿದ್ದರು.

ದ.ಆಫ್ರಿಕಾ ಸೋಲಲು ಐಪಿಎಲ್‌ ಕಾರಣ!
ದ.ಆಫ್ರಿಕಾ ಇಡೀ ಕೂಟದಲ್ಲಿ ಕಳಪೆಯಾಟವಾಡಿ ಲೀಗ್‌ ಹಂತದಲ್ಲೇ ಸೋತು ಹೊರಬಿದ್ದಿತು. ತಮ್ಮ ತಂಡದ ಸೋಲಿಗೆ ಭಾರತದ ಐಪಿಎಲ್‌ ಕಾರಣ ಎಂದು ದ.ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್‌ ದೂರಿದರು. ಮುಖ್ಯ ಬೌಲರ್‌ಗಳು ಐಪಿಎಲ್‌ನಲ್ಲಿ ಆಡುವುದು ಬೇಡ ಎಂದು ನಾನು ಬಯಸಿದ್ದೆ. ಆದರೂ ಕ್ಯಾಗಿಸೊ ರಬಾಡ ಆಡಿದರು. ರಬಾಡ ಗಾಯಗೊಂಡು ವಿಶ್ವಕಪ್‌ನ ಆರಂಭದ ಒಂದೆರಡು ಪಂದ್ಯದಿಂದ ಹೊರಗುಳಿದರು. ಮುಂದೆ ಅವರು ತಂಡಕ್ಕೆ ಬಂದರೂ ಅವರ ಪ್ರದರ್ಶನ ಮುಂಚಿನಂತಿರಲಿಲ್ಲ ಎಂದು ಪ್ಲೆಸಿಸ್‌ ಹೇಳಿದರು. ಸ್ವತಃ ತಾವೇ ಚೆನ್ನೈ ಕಿಂಗ್ಸ್‌ ಪರ ಆಡಿರುವ ಪ್ಲೆಸಿಸ್‌ ಈ ಮಾತು ಆಡಿದ್ದು ಹಲವರ ಆಕ್ರೋಶಕ್ಕೆ ಕಾರಣವಾಯಿತು. ಇದರ ನಡುವೆ ದ.ಆಫ್ರಿಕಾ ತಂಡದ ಪ್ರಮುಖ ಬೌಲರ್‌ ಡೇಲ್‌ಸ್ಟೇನ್‌ ಒಂದು ಪಂದ್ಯವಾಡದೇ ಇಡೀ ಕೂಟದಿಂದಲೇ ಹೊರಬಿದ್ದರು. ಅದು ಆ ತಂಡಕ್ಕೆ ತೀವ್ರ ಹೊಡೆತ ನೀಡಿತು.

ಕಾಶ್ಮೀರಕ್ಕೆ ನ್ಯಾಯ ಕೊಡಿ ಫ‌ಲಕ: ಬಿಸಿಸಿಐ ರೋಷ
ವಿಶ್ವಕಪ್‌ ಲೀಗ್‌ ಹಂತದ ಕಡೆಯ ದಿನ ಭಾರತ-ಶ್ರೀಲಂಕಾ ಎದುರಾಗಿದ್ದವು. ಪಂದ್ಯ ಲೀಡ್ಸ್‌ನಲ್ಲಿ ನಡೆದಿತ್ತು. ಆ ವೇಳೆ ಮತ್ತೆ ಮೈದಾನದ ಮೇಲೆ ವಿಮಾನವೊಂದು ಹಾರಿಹೋಯಿತು. ಅದರಲ್ಲಿ ಕಾಶ್ಮೀರಕ್ಕೆ ಮುಕ್ತಿ ಕೊಡಿ, ಭಾರತ ನಡೆಸುತ್ತಿರುವ ಜನಾಂಗೀಯ ಹತ್ಯೆ ನಿಲ್ಲಲಿ ಎಂದು ಬರೆದಿತ್ತು. ಈ ಪ್ರಕರಣ ನಡೆದ ಕೂಡಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ ತನ್ನ ಟ್ವಿಟರ್‌ ಖಾತೆಯ ಮೂಲಕ ಕ್ಷಮೆಯಾಚಿಸಿತು. ಇಂತಹ ರಾಜಕೀಯ ಬೆಳವಣಿಗೆಗಳು ನಡೆಯಬಾರದಿತ್ತು, ತನಗೆ ಕ್ರೀಡೆಯಲ್ಲಿ ರಾಜಕೀಯ ಬೆರೆಯುವುದು ಇಷ್ಟವಿಲ್ಲ. ಇದಕ್ಕೆ ತಾನು ಕ್ಷಮೆಯಾಚಿಸುತ್ತೇನೆ ಎಂದು ಪ್ರಕಟಿಸಿತು. ಆದರೂ ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ಸುಮ್ಮನಾಗಲಿಲ್ಲ. ಮರುದಿನವೇ ಐಸಿಸಿಗೆ ಖಾರವಾದ ಪತ್ರ ಬರೆದು ಪ್ರತಿಭಟಿಸಿತು.

ಇಂಗ್ಲೆಂಡ್‌ ವಿರುದ್ಧ ಬೇಕಂತಲೇ ಸೋತಿದ್ದಾ ಮಾರೆ‹?!
ಪ್ರಸ್ತುತ ವಿಶ್ವಕಪ್‌ನಲ್ಲಿ ಪಾಕಿಸ್ಥಾನಕ್ಕೆ ಸೆಮಿಫೈನಲ್‌ಗೆ ಹೋಗುವ ದೂರದ ಅವಕಾಶವೊಂದಿತ್ತು. ಆದರೆ ಲೀಗ್‌ ಹಂತದಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ ಗೆಲ್ಲಬೇಕಿತ್ತು. ಆದ್ದರಿಂದ ಇಡೀ ಪಾಕಿಸ್ಥಾನ ಭಾರತ ಗೆಲ್ಲಲಿ ಎಂದು ಹಾರೈಸಿತ್ತು. ಮತ್ತೂಂದು ಕಡೆ ಪಾಕಿಸ್ಥಾನವನ್ನು ಸೆಮಿಫೈನಲ್‌ನಿಂದ ದೂರವಿಡಲು, ಭಾರತ ಪಂದ್ಯ ಬಿಟ್ಟುಕೊಡಬಹುದು ಎಂಬ ಅನುಮಾನವನ್ನೂ ವ್ಯಕ್ತಪಡಿಸಲಾಗಿತ್ತು. ಇದೆಲ್ಲದರ ಮಧ್ಯೆ ಭಾರತ ಸೋತು ಹೋಯಿತು. ಪಾಕಿಸ್ಥಾನದ ಅಭಿಮಾನಿಗಳು ಭಾರತದ ಸೋಲು ಉದ್ದೇಶಪೂರ್ವಕ ಎಂದು ಆರೋಪಿಸಿದರು. ಒಂದು ವೇಳೆ ಭಾರತ ಗೆದ್ದಿದ್ದರೂ ಪಾಕ್‌ ಸೆಮಿಫೈನಲ್‌ಗೇರುವುದು ಕಷ್ಟವೇ ಇತ್ತು. ರನ್‌ದರ ಆಧಾರದ ಮೇಲೆ ಕಡೆಗೂ ಅದು ಹೊರಬೀಳುವ ಸಾಧ್ಯತೆ ಶೇ.99ರಷ್ಟಿತ್ತು. ಈ ವಿಚಾರವನ್ನು ಮರೆತ ಪಾಕ್‌ ಅಭಿಮಾನಿಗಳು ಭಾರತ ತಂಡದ ಮೇಲೆ ನಿರಂತರ ವಾಗ್ಧಾಳಿ ನಡೆಸಿದರು. ಪಂದ್ಯ ಮುಗಿದ ಮೇಲೂ ಇದು ಉದ್ದೇಶಪೂರ್ವಕ ಸೋಲೇ ಎಂಬ ಪ್ರಶ್ನೆ ಹಲವರಲ್ಲಿ ಇದೆ.

ಸಂತಸಧಾರೆ
ಭಾರತ-ಬಾಂಗ್ಲಾ ನಡುವೆ ಲೀಗ್‌ ಹಂತದ ಪಂದ್ಯ ಎಜ್‌ಬಾಸ್ಟನ್‌ ನಲ್ಲಿ ನಡೆದಿದ್ದಾಗ 87 ವರ್ಷದ ಅಜ್ಜಿ ಚಾರುಲತಾ ಪಟೇಲ್‌, ಜೋರಾಗಿ ಪೀಪಿ ಊದುತ್ತಾ ಭಾರತವನ್ನು ಪ್ರೋತ್ಸಾಹಿಸುತ್ತಿದ್ದರು. ಆ ಪಂದ್ಯ ಮುಗಿದ ಮೇಲೆ ಶತಕಧಾರಿ ರೋಹಿತ್‌ ಶರ್ಮ, ನಾಯಕ ವಿರಾಟ್‌ ಕೊಹ್ಲಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ವಿಶೇಷವೆಂದರೆ ಕೊಹ್ಲಿ ತಾವೇ ಸ್ವತಃ ಮುತುವರ್ಜಿವಹಿಸಿ, ಆ ಅಜ್ಜಿಗೆ ಮುಂದಿನ ಪಂದ್ಯಗಳ ಟಿಕೆಟ್‌ ಕೊಡಿಸಿ, ಮೈದಾನಕ್ಕೆ ಹಾಜರಾಗಲು ನೆರವಾದರು.

ಅಫ್ಘಾನಿಸ್ಥಾನ -ಬಾಂಗ್ಲಾ ದೇಶ
ತಂಡಗಳ ನಿರೀಕ್ಷೆ ಮೀರಿದ ಆಟ ವಿಶ್ವಕಪ್‌ ಆರಂಭಕ್ಕೆ ಮುನ್ನ ಬಾಂಗ್ಲಾವನ್ನು ಬಹಳ ಗಂಭೀರವಾಗಿ ಯಾರೂ ಪರಿಗಣಿಸಿರಲಿಲ್ಲ. ಹೋಗುತ್ತ ಹೋಗುತ್ತ ಬಾಂಗ್ಲಾ ಆಟ ನೋಡಿ ಇತರೆ ತಂಡಗಳು ಬೆಚ್ಚಿಬಿದ್ದವು. ಪ್ರಮುಖ ತಂಡಗಳಿಗೆ ಸರಿಸಾಟಿಯಾಗಿ ಅದು ಬ್ಯಾಟಿಂಗ್‌ ಮಾಡಿ ತಾನು ಈಗಲೂ ಹಸುಳೆಯಲ್ಲ ಎಂದು ಸಾಬೀತುಪಡಿಸಿತು. ದುರದೃಷ್ಟವಶಾತ್‌ ಅದಕ್ಕೆ ನಿರೀಕ್ಷೆಯಷ್ಟು ಜಯ ಸಿಗಲಿಲ್ಲ. ಮತ್ತೂಂದು ಅಫ್ಘಾನಿಸ್ಥಾನ ತಂಡ. ಅದನ್ನಂತೂ ಹೀನಾಯವಾಗಿ ಸೋಲಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಪ್ರತೀ ಪಂದ್ಯದಲ್ಲಿ ಗೌರವಾರ್ಹ ಆಟವನ್ನೇ ಆಡಿ, ಮುಂದಿನ ದಿನಗಳಲ್ಲಿ ಪ್ರಬಲ ತಂಡವಾಗುವ ಸುಳಿವು ನೀಡಿದೆ.

ಮೊಹಮ್ಮದ್‌ ಶಮಿ ಅಮೋಘ ದಾಳಿ
ವಿಶ್ವಕಪ್‌ನ ಲೀಗ್‌ ಹಂತದ ಆರಂಭಿಕ ಪಂದ್ಯಗಳಲ್ಲಿ ಭಾರತ ತಂಡದಿಂದ ವೇಗಿ ಮೊಹಮ್ಮದ್‌ ಶಮಿ ಹೊರಗಿದ್ದರು. ಭುವನೇಶ್ವರ್‌ ಗಾಯಗೊಂಡಿದ್ದರಿಂದ ಅಫ್ಘಾನಿಸ್ಥಾನ ವಿರುದ್ಧ ಶಮಿಗೆ ಜಾಗ ಸಿಕ್ಕಿತು. ಆ ಪಂದ್ಯದಲ್ಲಿ ಭಾರತ ಸೋಲುವ ಆತಂಕಕ್ಕೆ ಸಿಲುಕಿತ್ತು. ಆ ಹಂತದಲ್ಲಿ ಕೊನೆಯ ಓವರ್‌ನಲ್ಲಿ ದಾಳಿಗಿಳಿದ ಶಮಿ ಹ್ಯಾಟ್ರಿಕ್‌ ವಿಕೆಟ್‌ ಪಡೆದು ಭಾರತವನ್ನು ಗೆಲ್ಲಿಸಿದರು. ಮುಂದಿನೆರಡು ಪಂದ್ಯದಲ್ಲೂ ಶಮಿ ಅಮೋಘ ದಾಳಿ ಸಂಘಟಿಸಿ, ತಮ್ಮ ವೈವಾಹಿಕ ಜೀವನದ ನೋವನ್ನೂ ಮರೆತರು.

ಗಾಯದ ನಡುವೆಯೂ ಹೋರಾಟ
ಈ ವಿಶ್ವಕಪ್‌ ಕೂಟದಲ್ಲಿ ಗಾಯಾಳುಗಳಾದ ಆಟಗಾರರ ದೊಡ್ಡ ಪಟ್ಟಿಯೇ ಇದೆ. ಆದರೆ ಈ ಪೈಕಿ ಆಸ್ಟ್ರೇಲಿಯದ ಅಲೆಕ್ಸ್‌ ಕ್ಯಾರಿ ಮತ್ತು ಭಾರತದ ಮಹೇಂದ್ರ ಸಿಂಗ್‌ ಧೋನಿ ಮೆರೆದ ಕ್ರೀಡಾಸ್ಪೂರ್ತಿ ಅನನ್ಯವಾದುದು. ಇಂಗ್ಲೆಂಡ್‌ ವಿರುದ್ಧ ಆಡಿದ ಸೆಮಿಫೈನಲ್‌ ಪಂದ್ಯದಲ್ಲಿ ಚೆಂಡು ಬಡಿದು ಕ್ಯಾರಿಯ ಹೆಲ್ಮೆಟ್‌ನ ರೈಲಿಂಗ್‌ ಕಿತ್ತು ಹೋಗಿ ದವಡೆಗೆ ಏಟಾಗಿತ್ತು. ರಕ್ತ ಸುರಿಯುತ್ತಿದ್ದ ದವಡೆಗೆ ಬ್ಯಾಂಡೇಜ್‌ ಬಿಗಿದುಕೊಂದು ಪೂರ್ತಿ ಇನ್ನಿಂಗ್ಸ್‌ ಆಡಿದರು. ಇಂಗ್ಲೆಂಡ್‌ ವಿರುದ್ಧದ ಲೀಗ್‌ ಪಂದ್ಯದಲ್ಲಿ ಧೋನಿಯ ಹೆಬ್ಬೆರಳಿಗೆ ಗಾಯವಾಯಿತು.ಮೈದಾನದಲ್ಲೇ ಹೆಬ್ಬೆರಳಿನ ಗಾಯದ ರಕ್ತವನ್ನು ಚೀಪಿ ಉಗುಳಿದ ಧೋನಿ ಫೊಟೊ ವೈರಲ್‌ ಆಗಿತ್ತು.

ಮಂಜ್ರೆಕರ್ ಗೆ ಈ ಕಿರಿಕ್‌ ಬೇಕಾ?
ಭಾರತ ಕ್ರಿಕೆಟ್‌ನ ಮಾಜಿ ಆಟಗಾರ ಸಂಜಯ್‌ ಮಾಂಜ್ರೆಕರ್‌ ಈಗ ವೀಕ್ಷಕ ವಿವರಣೆಯಲ್ಲಿ ಮಗ್ನರಾಗಿದ್ದಾರೆ. ಅದರ ಮಧ್ಯೆ ಆಗಾಗ ಯಾರ ಮೇಲಾದರೂ ಏನಾದರೂ ಹೇಳಿ ವಿವಾದ ಸೃಷ್ಟಿಸುತ್ತಾರೆ. ಹಿಂದೊಮ್ಮೆ ಸಾನಿಯಾ ಮಿರ್ಜಾಗೆ ಅಪಹಾಸ್ಯ ಮಾಡಿ, ಚೆನ್ನಾಗಿ ಬೈಸಿಕೊಂಡಿದ್ದರು. ಈ ವಿಶ್ವಕಪ್‌ನಲ್ಲೂ ಅವರಿಗೆ ತಮ್ಮ ಅಭ್ಯಾಸ ಬಲವನ್ನೂ ಬಿಡಲಾಗಲಿಲ್ಲ . ಇಂಗ್ಲೆಂಡ್‌ ವಿರುದ್ಧ ಭಾರತ ಸೋತು ಹೋಯಿತು. ಆ ಪಂದ್ಯದ ನಂತರ ಅದುವರೆಗೆ ಕುರ್ಚಿ ಬಿಸಿ ಮಾಡಿದ್ದ ರವೀಂದ್ರ ಜಡೇಜಗೆ ಅವಕಾಶ ನೀಡಬಹುದು ಎಂಬ ಸುದ್ದಿ ಹಬ್ಬಿತು. ಕೂಡಲೇ ಮಾಂಜ್ರೆಕರ್‌ ಪ್ರತಿಕ್ರಿಯಿಸಿ, ಜಡೇಜರಂತಹ ತುಣುಕುಗಳನ್ನು ಆಡಿಸುವುದರ ಬಗ್ಗೆ ನನಗೆ ಗೌರವವೇ ಇಲ್ಲ. ಆತ ಟೆಸ್ಟ್‌ನಲ್ಲಾದರೆ ಪೂರ್ಣಕಾಲೀನ ಬೌಲರ್‌, ಏಕದಿನದಲ್ಲಿ ಇತ್ತಕಡೆ ಬೌಲರೂ ಅಲ್ಲ, ಅತ್ತಕಡೆ ಬ್ಯಾಟ್ಸ್‌ಮನ್ನೂ ಅಲ್ಲ ಎಂದು ಹೀಗಳೆದರು. ಇದರಿಂದ ರೊಚ್ಚಿಗೆದ್ದ ಜಡೇಜ, ನಾನಾಡಿದ ಅರ್ಧದಷ್ಟು ಪಂದ್ಯವನ್ನೂ ನೀವಾಡಿಲ್ಲ. ನಾನು ಈಗಲೂ ಆಡುತ್ತಿದ್ದೇನೆ. ನಿಮ್ಮ ಮಾತಿನ ವಾಂತಿ ಅತಿಯಾಯಿತು ಎಂದು ಉಗಿದರು. ಮಾಂಜ್ರೆಕರ್‌ ತಣ್ಣಗಾದರು.

ಸಚಿನ್‌ಗೆ ಚಳಿ ಬಿಡಿಸಿದ ಧೋನಿ ಅಭಿಮಾನಿಗಳು
ಭಾರತ ರತ್ನ, ಕ್ರಿಕೆಟ್‌ ದೇವರು ಎಂದು ಕರೆಸಿಕೊಳ್ಳುವ ಸಚಿನ್‌ ತೆಂಡುಲ್ಕರ್‌ಗೂ ಈ ಬಾರಿ ಅಭಿಮಾನಿಗಳು ಚಳಿ ಬಿಡಿಸಿದ್ದಾರೆ. ವಿಶ್ವಕಪ್‌ ಲೀಗ್‌ ಹಂತದ ಕೆಲ ಪಂದ್ಯಗಳಲ್ಲಿ ಧೋನಿ ಬಹಳ ನಿಧಾನವಾಗಿ ಬ್ಯಾಟಿಂಗ್‌ ಮಾಡಿದ್ದರು. ಅದು ಸಹಜವಾಗಿ ಹಿರಿಯ ಕ್ರಿಕೆಟಿಗರನ್ನು ಕೆರಳಿಸಿತು. ಹಿರಿಯ ಕ್ರಿಕೆಟಿಗನಾಗಿ ಧೋನಿ ಆಟಕ್ಕೆ ಬೇಕಾದ ತೀವ್ರತೆ ತೋರಿಸಲಿಲ್ಲ ಎಂದು ಸಚಿನ್‌ ಹೇಳಿದರು. ಇದರಿಂದ ಧೋನಿ ಅಭಿಮಾನಿಗಳು ಸಿಟ್ಟಾದರು. ನೀವು ಹಾಗೆ ಎಷ್ಟು ಪಂದ್ಯದಲ್ಲಿ ಆಡಲಿಲ್ಲ? ಶತಕ ಹತ್ತಿರ ಬರುತ್ತಿದ್ದಂತೆ ನೀವು ಹಾಳು ಮಾಡುತ್ತಿದ್ದ ಎಸೆತಗಳು ಒಂದೆರಡಾ ಎಂದು ಸಚಿನ್‌ರನ್ನು ಕೆಣಕಿದರು. ಮುಂದಿನ ಪಂದ್ಯದಲ್ಲಿ ಸಚಿನ್‌, ಧೋನಿಯನ್ನು ಸಮರ್ಥಿಸಿಕೊಂಡರು!

ನಿವೃತ್ತಿಯಾದವರು ಜಿನ್‌ಪಾಲ್‌ ಡುಮಿನಿ
35 ವರ್ಷದ ಜಿನ್‌ ಪಾಲ್‌ ಡುಮಿನಿ ಪ್ರಸ್ತುತ ವಿಶ್ವಕಪ್‌ನಲ್ಲಿ ದ.ಆಫ್ರಿಕಾ ಅಂತಿಮ ಪಂದ್ಯ ಆಡಿದ ಕೂಡಲೇ ಮೊದಲೇ ಹೇಳಿದಂತೆ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅವರು 199 ಏಕದಿನ ಪಂದ್ಯಗಳಿಂದ 5117 ರನ್‌ ಗಳಿಸಿದ್ದಾರೆ. 69 ವಿಕೆಟ್‌ ಕೂಡ ಪಡೆದಿದ್ದಾರೆ.

ಶೋಯಿಬ್‌ ಮಲಿಕ್‌
ಪ್ರಸ್ತುತ ವಿಶ್ವಕಪ್‌ ಅರ್ಧದಲ್ಲೇ ಪಾಕ್‌ ತಂಡದಲ್ಲಿ ಸ್ಥಾನ ಕಳೆದುಕೊಂಡ ಮಾಜಿ ನಾಯಕ ಶೋಯಿಬ್‌ ಮಲಿಕ್‌, ತಂಡದ ಹೋರಾಟ ಮುಗಿಯುತ್ತಿದ್ದಂತೆ ಏಕದಿನದಿಂದ ನಿವೃತ್ತರಾದರು. 37 ವರ್ಷದ ಶೋಯಿಬ್‌, 287 ಪಂದ್ಯಗಳಿಂದ 7534 ರನ್‌, 158 ವಿಕೆಟ್‌ ಗಳಿಸಿದ್ದಾರೆ.

ಲಸಿತ್ ಮಾಲಿಂಗ
35 ವರ್ಷದ ಶ್ರೀಲಂಕಾ ವೇಗಿ ಬಹಳ ಮುಂಚೆಯೇ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ಪ್ರಸ್ತುತ ವಿಶ್ವಕಪ್‌ನಲ್ಲಿ ಲಂಕಾಕ್ಕೆದುರಾದ
ಅನುಭವದ ಕೊರತೆಯಿಂದ ತಂಡಕ್ಕೆ ಮರಳಿದರು. 225 ಏಕದಿನ ಆಡಿರುವ ಅವರು 335 ವಿಕೆಟ್‌ ಪಡೆದಿದ್ದಾರೆ. ಇವರ ನಿವೃತ್ತಿ ನಿರೀಕ್ಷಿತವಾಗಿದೆ.

ಮುಶ್ರಫೆ ಮೊರ್ತಜ
ಬಾಂಗ್ಲಾ ತಂಡದ ನಾಯಕ ಮಶ್ರಫೆ ಮೊರ್ತಜ (35)ಗೆ ಇದೇ ಕೊನೆಯ ವಿಶ್ವಕಪ್‌ ಎನ್ನಲಾಗಿದೆ. ಆದರೆ ಅವರಿನ್ನೂ ಅಧಿಕೃತವಾಗಿ ನಿವೃತ್ತಿ ಘೋಷಿಸಿಲ್ಲ. 217 ಏಕದಿನ ಪಂದ್ಯವಾಡಿರುವ ಅವರು 266 ವಿಕೆಟ್‌ ಪಡೆದಿದ್ದಾರೆ. ಬಾಂಗ್ಲಾ ಸಂಸದರೂ ಆಗಿರುವ ಅವರು, ತಂಡದ ಅತಿ ಯಶಸ್ವಿ
ನಾಯಕನೆಂಬ ಹೆಗ್ಗಳಿಕೆ ಹೊಂದಿದ್ದಾರೆ.

ಇಮ್ರಾನ್ ತಾಹಿರ್‌
ವಿಶ್ವಕಪ್‌ ಆರಂಭದಲ್ಲೇ ತಾಹಿರ್‌ ಪ್ರಕಟಿಸಿದ್ದಂತೆ, ದಆಫ್ರಿಕಾ ದ ಆಟ ಲೀಗ್‌ ಹಂತಕ್ಕೆ ಅಂತ್ಯವಾಗುತ್ತಿದ್ದಂತೆ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾದರು. 40 ವರ್ಷದ ಅವರು 107 ಪಂದ್ಯಗಳಿಂದ 173
ವಿಕೆಟ್‌ಗಳನ್ನು ಪಡೆದಿದ್ದಾರೆ. 45ಕ್ಕೆ 7
ವಿಕೆಟ್‌ ಅವರ ಶ್ರೇಷ್ಠ ಬೌಲಿಂಗ್‌.

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.