ರಾಜಧಾನಿಯಲ್ಲಿ 173 ಮಂದಿಗೆ ಸೋಂಕು
Team Udayavani, Jun 25, 2020, 5:20 AM IST
ಬೆಂಗಳೂರು: ಆರೋಗ್ಯ ಸಿಬ್ಬಂದಿ, ಪಾಲಿಕೆ ಅಧಿಕಾರಿಗಳು, ಪೊಲೀಸರು ಸೇರಿದಂತೆ ಬುಧವಾರ 173 ಮಂದಿಗೆ ಸೋಂಕು ದೃಢಪಟ್ಟಿದ್ದು, 5 ಸೋಂಕಿತರು ಮೃತಪಟ್ಟಿದ್ದಾರೆ. ನಗರದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಬುಧವಾರ ಅಂತ್ಯಕ್ಕೆ 1,124 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ.
ವಿಷಮ ಶೀತ ಜ್ವರದಿಂದ ಬಳಲುತ್ತಿದ್ದ 70, ಸೋಂಕಿತರ ಸಂಪರ್ಕ 24, ತೀವ್ರ ಉಸಿರಾಟದ ತೊಂದರೆ 2, ಪತ್ತೆಯಾಗದ ಸಂಪರ್ಕ 60, ಅನ್ಯರಾಜ್ಯದಿಂದ ನಾಲ್ವರಿಗೆ ಸೋಂಕು ದೃಢಪಟ್ಟಿದೆ. ಕೋವಿಡ್ 19 ಸೋಂಕಿತರನ್ನು ಆಸ್ಪತ್ರೆಗೆ ಕೊಂಡೊಯ್ಯುವಲ್ಲಿ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ಆರೋಪ ಕೇಳಿಬರುತ್ತಿದೆ. ಮಂಗಳವಾರ ಜ್ಞಾನಭಾರತಿ ಆವರಣ ಗೇಟ್ ಬಳಿ ವಾಸವಿದ್ದ ಸೋಂಕಿತ ವ್ಯಕ್ತಿಯನ್ನು ಕರೆದೊಯ್ಯಲು ನಿರ್ಲಕ್ಷ್ಯ ತೋರಿದ್ದು,
ಬುಧವಾರ ಕೂಡ ಆ್ಯಂಬುಲನ್ಸ್ ಕಳುಹಿಸದ ಹಿನ್ನೆಲೆ ಸೋಂಕು ಕಾಣಿಸಿಕೊಂಡ ಯಶವಂತಪುರದ ದಂಪತಿ ಖಾಸಗಿ ವಾಹನ ಮೂಲಕ ಆಸ್ಪತ್ರೆಗೆ ತೆರಳಿದರು. ಇನ್ನೊಂದೆಡೆ ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿ ಇಲ್ಲ ಎಂದು ಪಾಲಿಕೆ ಆರೋಗ್ಯಾಧಿಕಾರಿಗಳು ಗಿರಿನಗರದ ಸೋಂಕಿತ ವ್ಯಕ್ತಿಗೆ ತಿಳಿಸಿದ್ದು, ಸೋಂಕಿತನು ಮನೆಯಲ್ಲಿಯೇ ಉಳಿದರು. ಮನೆ ಸೀಲ್ಡೌನ್ ಮಾಡಲಾಗಿದೆ.
ಜ್ವರದಿಂದ ಬಳಲುತ್ತಿದ್ದವರೇ ಮೃತ: ಬುಧವಾರ ಮೃತಪಟ್ಟ ಐವರು ಸೋಂಕಿತರು ವಿಷಮ ಶೀತ ಜ್ವರದ ಲಕ್ಷಣ ಹಾಗೂ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದವರಾಗಿದ್ದಾರೆ. ಅದರಲ್ಲೂ ಎಲ್ಲರೂ ಮಹಿಳೆಯರೇ ಮೃತಪಟ್ಟಿದ್ದಾರೆ. ಬೆಂಗಳೂರಿನ 59 ವರ್ಷದ ಮಹಿಳೆ, 54 ವರ್ಷದ ಮಹಿಳೆ, 68 ವರ್ಷದ ವೃದ್ಧೆ, 50 ವರ್ಷದ ಮಹಿಳೆ ಹಾಗೂ 70 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 63 ಮಂದಿ ಸೋಂಕಿತರಿದ್ದಾರೆ.
ಮೂರು ದಿನಗಳಲ್ಲಿ 231 ಕಂಟೈನ್ಮೆಂಟ್ ವಲಯಗಳು ಹೆಚ್ಚಾಗಿದ್ದು, ಒಟ್ಟಾರೆ 477ಕ್ಕೆ ಏರಿಕೆಯಾಗಿದೆ. ಬೊಮ್ಮನಹಳ್ಳಿಯಲ್ಲಿ 62, ದಾಸರಹಳ್ಳಿ 10, ಬೆಂಗಳೂರು ಪೂರ್ವ 76, ಮಹದೇವಪುರ 49, ರಾಜರಾಜೇಶ್ವರಿ ನಗರ 41, ಬೆಂಗಳೂರು ದಕ್ಷಿಣ 118, ಪಶ್ಚಿಮ 97, ಯಲಹಂಕದಲ್ಲಿ 24 ವಲಯಗಳನ್ನು ಪಾಲಿಕೆ ಗುರುತಿಸಿದೆ. ಕೋವಿಡ್ 19 ಸೋಂಕಿತರನ್ನು ಆಸ್ಪತ್ರೆಗೆ ಕೊಂಡೊಯ್ಯುವಲ್ಲಿ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ದೂರುಗಳು ಹೆಚ್ಚಾಗಿವೆ.
ಮಂಗಳವಾರ ಜ್ಞಾನಭಾರತಿ ಆವರಣ ಗೇಟ್ ಬಳಿ ವಾಸವಿದ್ದ ಸೋಂಕಿತ ವ್ಯಕ್ತಿಯನ್ನು ಕರೆದೊಯ್ಯಲು ನಿರ್ಲಕ್ಷ್ಯ ತೋರಿದ್ದು, ಬುಧವಾರ ಕೂಡ ಆ್ಯಂಬುಲನ್ಸ್ ಕಳುಹಿಸದ ಹಿನ್ನೆಲೆ ಸೋಂಕು ಕಾಣಿಸಿಕೊಂಡ ಯಶವಂತಪುರದ ದಂಪತಿ ಖಾಸಗಿ ವಾಹನ ಮೂಲಕ ಆಸ್ಪತ್ರೆಗೆ ತೆರಳಿರುವ ಪ್ರಸಂಗ ನಡೆಯಿತು. ಇನ್ನೊಂದೆಡೆ ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿ ಇಲ್ಲ ಎಂದು ಪಾಲಿಕೆ ಆರೋಗ್ಯಾಧಿಕಾರಿಗಳು ಗಿರಿನಗರದ ಸೋಂಕಿತ ವ್ಯಕ್ತಿಗೆ ತಿಳಿಸಿದ್ದು, ಆತ ಮನೆಯಲ್ಲಿಯೇ ಉಳಿಯು ವಂತಾಗಿದ್ದು, ಮನೆ ಸೀಲ್ಡೌನ್ ಮಾಡಲಾಗಿದೆ.
ಪರಾರಿಯಾದ ಸೋಂಕಿತ ಸೆರೆ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊಲೆಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದ 30 ವರ್ಷದ ಸೋಂಕಿತನು ವಿಕ್ಟೋರಿಯಾ ಆಸ್ಪತ್ರೆಯಿಂದ ಬುಧವಾರ ಬೆಳಗ್ಗೆ ಕಾಂಪೌಂಡ್ ಜಿಗಿದು ಪರಾರಿಯಾಗಿದ್ದ. ಸಂಜೆ 6 ಗಂಟೆಗೆ ಡಿ.ಜೆ. ಹಳ್ಳಿ ಸಮೀಪದ ಪುಷ್ಪಾಂಜಲಿ ಚಿತ್ರಮಂದಿರದ ಬಳಿ ಓಡಾಡುತ್ತಿದ್ದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಪೊಲೀಸರು ಸೋಂಕಿತನನ್ನು ಸೆರೆಹಿಡಿದು ಮತ್ತೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೆ ಸೋಂಕಿತ ವ್ಯಕ್ತಿಯು ಎಲ್ಲೆಲ್ಲಿ ಓಡಾಟ ನಡೆಸಿದ್ದಾರೆ ಎಂಬ ಬಗ್ಗೆ ಪಾಲಿಕೆ ಅಧಿಕಾರಿ ಮಾಹಿತಿ ಕಲೆ ಹಾಕುತ್ತಿದ್ದಾರೆ.