ನಗರದಲ್ಲಿ ತಲೆದೋರಿದ ಕಸದ ಸಮಸ್ಯೆ?
Team Udayavani, May 31, 2020, 5:08 AM IST
ಬೆಂಗಳೂರು: ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮಿಟ್ಟಗಾನಹಳ್ಳಿಯ ಭೂಭರ್ತಿ ಮಾರ್ಗ ಕೆಸರು ಗದ್ದೆಯಾದ ಹಿನ್ನೆಲೆಯಲ್ಲಿ ಕಸ ತುಂಬಿರುವ ಲಾರಿಗಳು, ಕಾಂಪ್ಯಾಕ್ಟರ್ಗಳು ನಿಂತಲ್ಲೇ ನಿಂತಿದ್ದು, ನಗರದಲ್ಲಿ ಕಸ ಸಮಸ್ಯೆ ಎದುರಾಗುವ ಆತಂಕ ಎದುರಾಗಿದೆ.
ಈ ಸಂಬಂಧ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ಕುಮಾರ್ ಅವರು ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದ್ದು, ಮಿಟ್ಟಗಾನಹಳ್ಳಿಯ ಭೂಭರ್ತಿ ಮಾರ್ಗವನ್ನು ಸರಿಪಡಿಸಿ, ಶನಿವಾರ ರಾತ್ರಿಯಿಂದಲೇ ಕಸ ಸಾಗಾಣಿಕೆಗೆ ಅನುವು ಮಾಡಿಕೊಡುವಂತೆ ಹಾಗೂ ಭಾನುವಾರದ ಬೆಳಗ್ಗೆ ಎರಡನೇ ಪಾಳಿಯಲ್ಲಿ ನಗರದಲ್ಲಿ ಲಾರಿಗಳಲ್ಲಿ ತುಂಬಿ ನಿಂತಿರುವ ಕಸವನ್ನು ವಿಲೇವಾರಿ ಮಾಡುವುದಕ್ಕೆ ಸೂಚನೆ ನೀಡಿದ್ದಾರೆ.
ಇದಕ್ಕೆ ವಾರ್ಡ್ಗಳ ಎಂಜಿನಿಯರ್ ಹಾಗೂ ಸಹಾಯಕ ಎಂಜಿನಿಯರ್ಗಳು ಕಡ್ಡಾಯವಾಗಿ ಭಾನುವಾರ ಕೆಲಸಕ್ಕೆ ಹಾಜರಾಗುವಂತೆ ಆಯುಕ್ತರು ನಿರ್ದೇಶನ ನೀಡಿದ್ದಾರೆ. ಅದೇ ರೀತಿ ನಗರದಲ್ಲಿ ಬಿದ್ದಿರುವ ಮರ, ಮರದ ರಂಬೆ- ಕೊಂಬೆಗಳನ್ನು ಮುಂದಿನ 48 ಗಂಟೆಗಳ ಒಳಗಾಗಿ ಬಿಬಿಎಂಪಿ ಸಿಬ್ಬಂದಿ, ಅರಣ್ಯ ವಿಭಾಗದ ಅಧಿಕಾರಿಗಳು ಹಾಗೂ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಈ ಎರಡು ಸಮಸ್ಯೆಗಳನ್ನು ಕೂಡಲೇ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ ಕ್ರಮ ತೆಗೆದುಕೊಳ್ಳ ಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.