ಕಿರುತೆರೆ ನಟಿ ಚೇತನಾ ಸಾವು!: ಬೊಜ್ಜು ತೆಗೆಯುವ ಶಸ್ತ್ರಚಿಕಿತ್ಸೆ ಮುಳುವಾಯಿತೇ ?
ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದ ನಟಿಯ ಪೋಷಕರು
Team Udayavani, May 17, 2022, 4:19 PM IST
ಬೆಂಗಳೂರು: ಕಿರುತೆರೆಯ ಯುವ ನಟಿ ನಟಿ ಚೇತನಾ ರಾಜ್ ವಿಧಿ ವಶವಾಗಿದ್ದಾರೆ. ಕೊಬ್ಬು ತೆಗೆಯುವ ಶಸ್ತ್ರ ಚಿಕಿತ್ಸೆ ವೇಳೆ ಮೇ 17, ಮಂಗಳವಾರ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಶಸ್ತ್ರಚಿಕಿತ್ಸೆ ವೇಳೆ 22 ರ ಹರೆಯದ ಚೇತನಾ ಸಾವನ್ನಪ್ಪಿದ್ದು, ಶಸ್ತ್ರಚಿಕಿತ್ಸಕರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ. ಸೂಕ್ತ ಸಲಕರಣೆಗಳಿಲ್ಲದೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದೂ ಹೇಳುತ್ತಿದ್ದಾರೆ.ಪೊಲೀಸರ ಪ್ರಕಾರ, ಆಕೆಯ ಪೋಷಕರಿಗೆ ತಿಳಿಯದಂತೆ ಮೇ 16 ರಂದು ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿತ್ತು ಎಂದು ವರದಿಯಾಗಿದೆ.
ಬೆಂಗಳೂರಿನ ಅಬ್ಬಿಗೆರೆ ನಿವಾಸಿಯಾಗಿದ್ದ ಚೇತನಾ ರಾಜ್ ಶಸ್ತ್ರ ಚಿಕಿತ್ಸೆ ವೇಳೆ ಶ್ವಾಸಕೋಶದಲ್ಲಿ ನೀರು ಸೇರಿಕೊಂಡಿದ್ದರಿಂದ ಸಾವು ಸಂಭವಿಸಿದೆ ಎಂದು ಆಸ್ಪತ್ರೆ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಐಸಿಯು ವ್ಯವಸ್ಥೆಯೂ ಇರಲಿಲ್ಲ ಎಂದು ಆರೋಪಿಸಲಾಗಿದೆ.
ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೋಷಕರು ವೈದ್ಯರ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ವಗ್ರಾಮ ದೊಡ್ಡಬಳ್ಳಾಪುರದ ಬೀರಯ್ಯನ ಪಾಳ್ಯದತ್ತ ಮೃತದೇಹವನ್ನು ಕೋಡಯ್ಯಲಾಗುತ್ತಿದ್ದು, ಅಲ್ಲೇ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.
ಚೇತನಾ ರಾಜ್ ಅವರು ‘ಗೀತಾ’, ‘ದೊರೆಸಾನಿ’, ‘ಒಲವಿನ ನಿಲ್ದಾಣ ’ ಎಂಬ ಜನಪ್ರಿಯ ಧಾರಾವಾಹಿಗಳಲ್ಲಿ, ಕನ್ನಡ ಸಿನಿಮಾದಲ್ಲೂ ನಟಿಸಿದ್ದರು.
ಯುವ ನಟಿಯ ಸಾವಿನ ವಿಚಾರ ಕಿರುತೆರೆ ಮತ್ತು ಹಿರಿತೆರೆಯಲ್ಲೂ ಸಾಕಷ್ಟು ಚರ್ಚೆಗೆ ಒಳಗಾಗುತ್ತಿದ್ದು, ಸೂಕ್ತ ಮಾರ್ಗದರ್ಶನ ಮತ್ತು ಜಾಗ್ರತೆ ಮಾಡದೆ ಶಸ್ತ್ರ ಚಿಕಿತ್ಸೆಗೆ ಒಳಗಾಗುವುದು ಸರಿಯಲ್ಲ ಎಂದು ಹಲವರು ಹೇಳಿದ್ದಾರೆ.