ಬಿಎಸ್ವೈ ರಾಜೀನಾಮೆ: ಕಲ್ಯಾಣದಲ್ಲಿ ಸಂಚಲನ
ಸಚಿವ ಸಂಪುಟದ ಸಭೆಗಳು ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ನೇತೃತ್ವದಲ್ಲಿ ನಡೆದಿದ್ದವು.
Team Udayavani, Jul 27, 2021, 6:45 PM IST
ಕಲಬುರಗಿ: ಮೊದಲ ಸಲ ಮುಖ್ಯಮಂತ್ರಿಯಾಗಿದ್ದ ಮೂರು ವರ್ಷದ ವೇಳೆಯಲ್ಲಿ 40ಕ್ಕೂ ಅಧಿಕ ಸಲ ಭೇಟಿ ನೀಡಿದ್ದಲ್ಲದೇ ಮೂರು ಸಲ ಸಚಿವ ಸಂಪುಟ ಸಭೆ ನಡೆಸುವ ಮೂಲಕ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದ, ಕಲಬುರಗಿ ಹಾಗೂ ಕಲ್ಯಾಣ ಕರ್ನಾಟಕದ ಮೇಲೆ ಅಪಾರ ಪ್ರೀತಿ-ಕಾಳಜಿ ಹೊಂದಿದ್ದ ಬಿ.ಎಸ್. ಯಡಿಯೂರಪ್ಪನವರು ಪದತ್ಯಾಗ ಮಾಡಿರುವುದು ಕಲ್ಯಾಣ ಕರ್ನಾಟಕದಲ್ಲಿ ಹೊಸ ಸಂಚಲನ ಮೂಡಿಸಿದೆ.
2019ರ ಜುಲೈ 26ರಂದು ಮುಖ್ಯಮಂತ್ರಿಯಾದ ನಂತರ ಸೆಪ್ಟೆಂಬರ್ 17ರಂದು ಕಲಬುರಗಿಗೆ ಬಂದು ಮೊದಲು ಮಾಡಿದ್ದೇ ಈ ಭಾಗವನ್ನು ಕಲ್ಯಾಣ ಕರ್ನಾಟಕ ನಾಮಾಂಕಿತದ ಘೋಷಣೆ. ಒಂದರ್ಥದಲ್ಲಿ ಕಲ್ಯಾಣ ಕರ್ನಾಟಕ ನಾಮಾಂಕಿತದ ರೂವಾರಿ ಆಗಿದ್ದರು. ಕಲ್ಯಾಣ ಕರ್ನಾಟಕ ನಾಮಾಂಕಿತ ಘೋಷಣೆ ಸಂದರ್ಭದಲ್ಲಿ ಈ ಭಾಗದ ಸರ್ವತೋಮುಖ ಅಭಿವೃದ್ಧಿ ದೃಷ್ಟಿ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ಹೇಳಿದ್ದರು. ಆದರೆ ಕಾರ್ಯರೂಪಕ್ಕೆ ತರುವ ಮುನ್ನವೇ ಕೆಳಗಿಳಿದಿರುವುದು ಸ್ವಲ್ಪ ಅಸಮಾಧಾನಕ್ಕೆ ಕಾರಣವಾಗುತ್ತಿದೆ.
ಇತ್ತೀಚಿಗೆ ಕಳೆದ ಜುಲೈ 10ರಂದು ಯಡಿಯೂರಪ್ಪ ಅವರು ಸಿಎಂ ಆಗಿ ಕಲಬುಗಿಗೆ ನೀಡಿರುವ ಕೊನೆ ಭೇಟಿಯಾಗಿದೆ. ವಿವಿಧ ಅಭಿವೃದ್ಧಿ ಕಾರ್ಯ ನೆರವೇರಿಸಿ ಮತ್ತೆ ಕಲಬುರಗಿಗೆ ಬರುವುದಾಗಿ ಹೇಳಿ ಹೋಗಿದ್ದವರು ಇಷ್ಟು ಬೇಗ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆಂದು ತಾವು ಊಹಿಸಿರಲಿಲ್ಲ ಎಂದು ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಏನೇ ಆಗಿರಲಿ ಯಡಿಯೂರಪ್ಪನವರು ಕಲ್ಯಾಣ ಕರ್ನಾಟಕ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು.
ಇದೇ ಕಾರಣಕ್ಕೆ ಬಸವಕಲ್ಯಾಣದಲ್ಲಿ ಅನುಭವ ಮಂಟಪಕ್ಕೆ ಅಡಿಗಲ್ಲು ನೆರವೇರಿಸಿ ಚಾಲನೆ ನೀಡಿದ್ದಲ್ಲದೇ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ-ಸಾಂಸ್ಕೃತಿಕ ಸಂಘ ರಚಿಸಿ 500 ಕೋ.ರೂ. ನೀಡಿರುವುದೇ ಇದಕ್ಕೆ ಸಾಕ್ಷಿ ಎನ್ನಲಾಗುತ್ತಿದೆ.
ಸಚಿವ ಸಂಪುಟ ರೂವಾರಿ: ರಾಜಧಾನಿ ಬಿಟ್ಟು ಹೊರಗಡೆ ಸಚಿವ ಸಂಪುಟ ನಡೆಸಿರುವ ಹೆಚ್ಚಿನ ಕೀರ್ತಿ ಬಿ.ಎಸ್ .ಯಡಿಯೂರಪ್ಪರಿಗೆ ಸಲ್ಲುತ್ತದೆ. ಬಿಎಸ್ವೈ ಸಿಎಂ ಆಗಿ ಕಲಬುರಗಿಯಲ್ಲಿ ಮೂರು ಸಂಪುಟ ಸಭೆ ನಡೆಸಿದ್ದಾರೆ. ಕಲಬುರಗಿಯಲ್ಲಿ ಸತತ ಮೂರು ವರ್ಷಗಳ ಕಾಲ ಅಂದರೆ 2008ರ ಸೆಪ್ಟೆಂಬರ್ 26ರಂದು, 2009ರ ಆಗಸ್ಟ್ 27ರಂದು ಮತ್ತು 2010ರ ಅಕ್ಟೋಬರ್ 4ರಂದು ಕ್ರಮವಾಗಿ ಸಚಿವ ಸಂಪುಟದ ಸಭೆಗಳು ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ನೇತೃತ್ವದಲ್ಲಿ ನಡೆದಿದ್ದವು.
ಮೊದಲ ಸಂಪುಟ ಸಭೆ: 2008ರ ಸೆಪ್ಟೆಂಬರ್ 26ರಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಮೊದಲ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ 14 ಪ್ರಮುಖ ನಿರ್ಣಯ ಕೈಗೊಳ್ಳಲಾಯಿತು. ಯಾದಗಿರಿಗೆ ಹೊಸ ಜಿಲ್ಲೆ, ಡಾ|ಡಿ.ಎಂ.ನಂಜುಂಡಪ್ಪ ಸಮಿತಿ ಶಿಫಾರಸ್ಸುಗಳ ಜಾರಿಗೆ ಉನ್ನತಾ ಧಿಕಾರ ಸಮಿತಿ ರಚನೆ, ಭಕ್ತ ಕನಕದಾಸರ ಜಯಂತಿ ಸರ್ಕಾರದಿಂದ ಆಚರಣೆ, ಕಲಬುರ್ಗಿಯಲ್ಲಿ ವಿಶ್ವವಿದ್ಯಾಲಯದಲ್ಲಿ ಡಾ| ಅಂಬೇಡ್ಕರ್ ಅಧ್ಯಯನ ಕೇಂದ್ರಕ್ಕೆ 4 ಕೋಟಿ ರೂ. ಗಳ ನೆರವು, ನೂತನ ಜವಳಿ ನೀತಿ, ಹುಬ್ಬಳ್ಳಿ- ಧಾರವಾಡದಲ್ಲಿ ಕಾನೂನು ವಿಶ್ವವಿದ್ಯಾಲಯ ಸ್ಥಾಪನೆ, ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆ, ಶಾಲೆಗಳಲ್ಲಿ ಮೂಲಸೌಲಭ್ಯಗಳಿಗಾಗಿ ಪಂಚ ಸೌಲಭ್ಯ ಯೋಜನೆ, ರಾಯಚೂರಿನಲ್ಲಿ ಕೃಷಿ ವಿಶ್ವವಿದ್ಯಾಲಯ, ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗುಂದಿ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ, ಬಳ್ಳಾರಿ ಹೊಸ ವಿಮಾನ ನಿಲ್ದಾಣ, ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯಕ್ಕೆ ವಿಶೇಷ ಸ್ಥಾನಮಾನ, ಬಾಲವಿಕಾಸ ಅಕಾಡೆಮಿ ಸ್ಥಾಪನೆ ಮುಂತಾದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತಲ್ಲದೇ ತದನಂತರ ಈ ಎಲ್ಲ ಬಹುತೇಕ ನಿರ್ಣಯಗಳು ಜಾರಿಗೆ ಬಂದಿರುವುದನ್ನು ನಾವು ಪ್ರಮುಖವಾಗಿ ಗಮನಿಸಬಹುದಾಗಿದೆ.
2ನೇ ಸಂಪುಟ ಸಭೆಃ 2ನೇ ಸಚಿವ ಸಂಪುಟ ಸಭೆಯು 2009ರ ಆಗಸ್ಟ್ 27ರಂದು ಜರುಗಿತು. ಸಭೆಯಲ್ಲಿ ಬರ ಪರಿಹಾರಕ್ಕಾಗಿ 30 ಕೋಟಿ ರೂ.ಗಳ ಹೆಚ್ಚುವರಿ ಅನುದಾನ, ಬರ ಗ್ರಾಮಗಳಿಗೆ ತಕ್ಷಣ ಕುಡಿಯುವ ನೀರಿನ ವ್ಯವಸ್ಥೆ, ಹೆಚ್ಕೆಡಿಬಿಗೆ ಹೆಚ್ಚುವರಿ ಅನುದಾನ, ಕಲಬುರಗಿ ವಿಭಾಗದ ಬೆಣ್ಣೆತೊರಾ, ಕೆಳದಂಡೆ ಮುಲ್ಲಾಮಾರಿ,ಅಮರ್ಜಾ ನೀರಾವರಿ ಯೋಜನೆಗಳಿಗೆ ತಲಾ 10 ಕೋಟಿ ರೂ. 140 ಕಿ.ಮೀ. ಫೀಡರ್ ಲೈನ್,ಮಲ್ಲಾಬಾದ್ ಏತ ನೀರಾವರಿ ಯೋಜನೆ, ಬೀದರ್
ಜಿಲ್ಲೆ ಔರಾದ್ ತಾಲೂಕಿನ ಆಲೂರು-ಬೇಲೂರಿನಲ್ಲಿ ಸಣ್ಣ ಕೆರೆ ನಿರ್ಮಾಣ, ಗಂಡೋರಿ ನಾಲಾ ಜಲಾಶಯಕ್ಕೆ ದಿ| ಚಂದ್ರಶೇಖರ್ ಪಾಟೀಲ್ ಮಹಾಗಾಂವ್ ಅವರ ನಾಮಕರಣ, 200 ಹೆಚ್ಚುವರಿ ಸುವರ್ಣ ಗ್ರಾಮಗಳು, ಜುರಾಲಾ ಯೋಜನೆಯಿಂದ ಬಾಧಿತ ಗ್ರಾಮಗಳಿಗೆ ಸೇತುವೆ, ಕಲಬುರ್ಗಿ ವಿಭಾಗಕ್ಕೆ 1000 ಅಂಗನವಾಡಿ ಕಟ್ಟಡಗಳು, ಬತ್ತಿ ಹೋದ ಬಾವಿಗಳಿಗೆ ಮರುಜೀವ, ಕಲಬುರಗಿ ವಿಭಾಗದ 242 ಗ್ರಾಮಗಳಿಗೆ ವಿಶೇಷ ಕುಡಿಯುವ ನೀರು, ಹೆಚ್ಚುವರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ವಿಭಾಗದ 128 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ, ಬೀದರ್ ಪಾಲಿಟೆಕ್ನಿಕ್ಗೆ 10 ಕೋಟಿ ರೂ.ಗಳು, ಕಾಲೇಜುಗಳಲ್ಲಿ ವಿಜ್ಞಾನ-ಮೂಲಸೌಕರ್ಯ ಅಭಿವೃದ್ಧಿ, ಮರ್ತೂರಿನಲ್ಲಿ ಸರ್ಕಾರಿ ಕಾನೂನು ಕಾಲೇಜು, ಕಲಬುರ್ಗಿಯಲ್ಲಿ ಸುವರ್ಣ ವಸ್ತ್ರನೀತಿ ಪ್ರಕಾರ ಆಪೆರಲ್ ಪಾರ್ಕ್, ಬೆಂಗಳೂರು ಒನ್ ಮಾದರಿ ಕೇಂದ್ರದ ಮಾದರಿಯನ್ನು ವಿಭಾಗದ ನಗರಗಳಿಗೆ ಹಂತ ಹಂತವಾಗಿ ವಿಸ್ತರಿಸುವುದು, ಕಲಬುರ್ಗಿಯಲ್ಲಿ ಬಾಬು ಜಗಜೀವನರಾಂ, ಅಂಬಿಗರ ಚೌಡಯ್ಯ ಸ್ಮಾರಕ, ಸುರಪುರದಲ್ಲಿ ಶಿವಶರಣ ದೇವರ ದಾಸಿಮಯ್ಯ ಸ್ಮಾರಕ, ಕಲಬುರ್ಗಿಯಲ್ಲಿ ಅನುಭವ ಮಂಟಪಕ್ಕೆ 1 ಕೋಟಿ ರೂ., ದೇವಲ್ ಗಾಣಗಾಪುರ ಅಭಿವೃದ್ಧಿಗೆ 3 ಕೋಟಿ ರೂ., ರಬಕವಿ, ಬನಹಟ್ಟಿಯಲ್ಲಿ ಸೈಜಿಂಗ್ ಘಟಕ, ಬಳ್ಳಾರಿ ವಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿ ಒಟ್ಟು 23 ನಿರ್ಣಯ ತೆಗೆದುಕೊಳ್ಳಲಾಗಿತ್ತು.
ತದನಂತರ 3ನೇ ಸಚಿವ ಸಂಪುಟ ಸಭೆ 2010ರ ಅಕ್ಟೋಬರ್ 4ರಂದು ಜರುಗಿತು. ಸಭೆಯಲ್ಲಿ ಒಟ್ಟು 55 ವಿಷಯಗಳ ನಿರ್ಣಯವಾಗಿ 4632.80 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ತೀರ್ಮಾನಿಸಲಾಗಿತ್ತಲ್ಲದೇ ಸರ್ಕಾರದ ವತಿಯಿಂದಲೇ ವಾಲ್ಮೀಕಿ ಜಯಂತಿ ಆಚರಣೆ ಸೇರಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತು.
*ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ