ವಿಚ್ಛೇದನ ಕೊಡದ ಪತ್ನಿ: ಇರಿದು ಕೊಂದ ಪತಿ
Team Udayavani, Jul 2, 2020, 5:39 AM IST
ಬೆಂಗಳೂರು: ರಾಜಗೋಪಾಲನಗರದಲ್ಲಿ ಮಂಗಳವಾರ ರಾತ್ರಿ ನಡೆದ ಕೊಲೆಗೆ ಅಕ್ರಮ ಸಂಬಂಧ ಹಾಗೂ ಪತ್ನಿ ವಿಚ್ಛೇಧನ ಕೊಡದಿರುವುದೇ ಕಾರಣ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿ ಮಂಜುನಾಥ್ ಟೆಂಪೋ ಟ್ರಾವೆಲ್ಲರ್ ಚಾಲಕ ನಾಗಿದ್ದು, ಪತ್ನಿ ಹೇಮಾ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದರು. ಆದರೆ, ಆರೋಪಿ ಪರಸ್ತ್ರೀ ಜತೆ ಅಕ್ರಮ ಸಂಬಂಧ ಹೊಂದಿದ್ದ. ಅದೇ ವಿಚಾರಕ್ಕೆ ದಂಪತಿ ನಡುವೆ ಗಲಾಟೆಯಾಗುತ್ತಿತ್ತು.
ಜತೆಗೆ ವಿಚ್ಛೇದನ ನೀಡುವಂತೆ ಪತ್ನಿಗೆ ಹತ್ತಾರು ಬಾರಿ ಒತ್ತಾಯಿಸಿದ್ದಾನೆ. ಆದರೆ, ಆಕೆ ನಿರಾಕರಿಸಿದ್ದಳು. ಮಂಗಳವಾರ ಸಂಜೆಯೂ ಅದೇ ವಿಚಾರಕ್ಕೆ ಗಲಾಟೆಯಾಗಿದ್ದು, ಸಹೋದರ ನನ್ನು ಕರೆಸಿಕೊಂಡು ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಳು. ಆದರೆ, ಜಗಳ ತಾರಕಕ್ಕೇರಿದ್ದು, ಮನೆಯ ಬಾಗಿಲು ಹಾಕಿ ಕೊಂಡು ಪೊಲೀಸ್ ಠಾಣೆಗೆ ಹೋಗುತ್ತಿದ್ದಳು. ಹಿಂಬಾಲಿಸಿದ ಪತಿ ಆಕೆ ರಕ್ಷಣೆಗಾಗಿ ಮನೆಯೊಂದರ ಕಾಂಪೌಂಡ್ ಒಳಗೆ ನುಗ್ಗಿದರೂ ಬಿಡದ ಆರೋಪಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ಹೇಳಿದರು.
ಹಾಸನ ಮೂಲದ ಮಂಜುನಾಥ್, ತುಮಕೂರು ಜಿಲ್ಲೆಯ ಹೇಮಾರನ್ನು 12 ವರ್ಷಗಳ ಹಿಂದೆ ವಿವಾಹವಾಗಿದ್ದು, ಒಂದು ಗಂಡು ಹಾಗೂ ಹೆಣ್ಣು ಮಗುವಿದೆ. ದಂಪತಿ ನಡುವೆ ಕೌಟುಂಬಿಕ ಕಲಹವಿದ್ದು, ಈ ಹಿಂದೆಯೂ ರಾಜಗೋಪಾಲನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಿರಿಯರ ರಾಜಿಯಿಂದ ದಂಪತಿ ಒಟ್ಟಿಗೆ ಜೀವನ ನಡೆಸುತ್ತಿದ್ದರು. ಘಟನೆ ಬಳಿಕ ಆರೋಪಿ ತಾನೇ ಠಾಣೆಗೆ ಬಂದು ಶರಣಾಗಿದ್ದಾನೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.