ಬಿಡಿಎ ಆಸ್ತಿ ಮಾರಾಟಕ್ಕೆ ಇದು ಸಕಾಲವೇ?
Team Udayavani, Jun 4, 2020, 6:26 AM IST
ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್ಡೌನ್ ಜಾರಿಯಿಂದಾಗಿ ತೆರಿಗೆ ಆದಾಯ ಖೋತಾ ಆಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ರಾಜಧಾನಿಯಲ್ಲಿನ ಬೆಲೆಬಾಳುವ ಸರ್ಕಾರಿ ಭೂಮಿಯನ್ನು ಮಾರಾಟ ಮಾಡಿ ಸಂಪನ್ಮೂಲ ಕ್ರೋಡೀಕರಣಕ್ಕೆ ಮುಂದಾಗಿದೆ. ಆದರೆ ಸರ್ಕಾರ ಮಾತ್ರವಲ್ಲದೇ ಇತರೆ ವಲಯಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಾಗ ನಿರೀಕ್ಷಿಸಿದ ಬೆಲೆಯಲ್ಲಿ ಆಸ್ತಿ ಮಾರಾಟವಾಗುವುದೇ ಹಾಗೂ ಭವಿಷ್ಯದಲ್ಲಿ ಆಸ್ತಿ ಗಳಿಕೆ ಸಾಧ್ಯವೇ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಸರ್ಕಾರವೇ ಬೆಲೆಬಾಳುವ ಆಸ್ತಿಗಳ ಮಾರಾಟಕ್ಕೆ ಮುಂದಾಗುವುದು ಸದ್ಯದ ಸಂದರ್ಭದಲ್ಲಿ ಸೂಕ್ತವೆನಿಸದು. ಇಂತಹ ಪ್ರಯತ್ನಗಳು ಸರ್ಕಾರದ ಅಂತಿಮ ಹಾಗೂ ಅನಿವಾರ್ಯ ಆಯ್ಕೆಯಾಗಬೇಕೆ ಹೊರತು ಆದ್ಯತೆಯ ಆಯ್ಕೆಯಾಗಬಾರದು. ಏಕೆಂದರೆ ಬಹಳಷ್ಟು ಸರ್ಕಾರಿ ಕಚೇರಿಗಳೇ ಖಾಸಗಿ ಕಟ್ಟಡದಲ್ಲಿರುವುದು, ಅಭಿವೃದ್ಧಿ- ಸೇವಾ ಕಾರ್ಯಕ್ರಮಗಳಿಗೆ ಸೂಕ್ತ ನಿವೇಶನ, ಭೂಮಿ ಲಭ್ಯವಾಗದೆ ಪರದಾಡುವ ಸ್ಥಿತಿಯಿರುವಾಗ ಸರ್ಕಾರಿ ಭೂಮಿ ಮಾರಾಟ ಸರಿ ಎನಿಸದು ಎಂಬುದು ನಿವೃತ್ತ ಅಧಿಕಾರಿಗಳ ಅಭಿಮತ. ಬೆಲೆ ಬಾಳುವ ಆಸ್ತಿಯನ್ನು ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಿದರೆ ಮತ್ತೆ ನಗರದಲ್ಲಿ ಅಂತಹ ಆಸ್ತಿಗಳನ್ನು ಖರೀದಿಸುವುದು ಕಷ್ಟಸಾಧ್ಯ.
ಅಲ್ಲದೇ ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ ಹರಾಜು ಪ್ರಕ್ರಿಯೆಯಲ್ಲೂ ಪೈಪೋಟಿ ಏರ್ಪಟ್ಟು ಸ್ಪರ್ಧಾತ್ಮಕ ಬೆಲೆಗೆ ಆಸ್ತಿಗಳು ಮಾರಾಟವಾಗುವ ನಿರೀಕ್ಷೆಯೂ ಇಲ್ಲ. ಬಿಡಿಎ ಆಸ್ತಿಗಳ ಬದಲಿಗೆ ಸಂಪನ್ಮೂಲ ಕ್ರೋಡೀಕರಣಕ್ಕೆ ಪರ್ಯಾಯ ಮಾರ್ಗಗಳ ಬಗ್ಗೆ ಚಿಂತಿಸುವುದು ಸೂಕ್ತ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಆರ್ಥಿಕ ಸಂಕಷ್ಟದಿಂದ ಪಾರಾಗಲು ಸರ್ಕಾರ ಬಿಡಿಎ ಆಸ್ತಿಗಳ ಮಾರಾಟದ ಬದಲು ಸಂಪನ್ಮೂಲ ಕ್ರೋಡೀಕರಣಕ್ಕೆ ಪರ್ಯಾಯ ಮಾರ್ಗಗಳಿದ್ದು, ಆ ಬಗ್ಗೆ ಯೋಚಿಸಬೇಕಿತ್ತು. ಈ ಸಂದರ್ಭದಲ್ಲಿ ಬೆಲೆ ಬಾಳುವ ಆಸ್ತಿ ಮಾರಾಟ ಕ್ರಮವು ಆರ್ಥಿಕ ತೊಂದರೆಗೆ ಪರಿಣಾಮಕಾರಿ ಪರಿಹಾರದಂತೆ ಕಾಣುವುದಿಲ್ಲ.
ಶಾಶ್ವತ ನಷ್ಟಕ್ಕೆ ಒಳಗಾಗುವ ಸಾಧ್ಯತೆಗಳು ಇರುತ್ತವೆ ಎಂದು ಹೆಸರು ಹೇಳಲಿಚ್ಛಿಸದ ಬಿಡಿಎ ಮಾಜಿ ಆಯುಕ್ತರೊಬ್ಬರು ತಿಳಿಸಿದರು. ನಾಡಪ್ರಭು ಕೆಂಪೇಗೌಡ ಬಡಾವಣೆ, ಬನಶಂಕರಿ 6ನೇ ಹಂತದ ಬಡಾವಣೆಗಳು ಯೋಜಿತ ರೀತಿಯಲ್ಲಿ ಮುಂದುವರಿಸಿದರೆ ಬಿಡಿಎಗೆ ಒಂದಿಷ್ಟು ಆರ್ಥಿಕವಾಗಿ ಸಹಕಾರಿಯಾಗಲಿದೆ. ಹೊಸ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವುದಲ್ಲದೇ ಅಪಾರ್ಟ್ಮೆಂಟ್ ನಿರ್ಮಾಣದತ್ತಲೂ ಗಮನ ಕೊಡಬಹುದು. ಅಕ್ರಮ- ಸಕ್ರಮ, ಮೂಲೆ ನಿವೇಶನ ಹಂಚಿಕೆಯಿಂದ ಬಿಡಿಎಗೆ ಆಸ್ತಿ ಇಲ್ಲದಂತಾಗುತ್ತದೆ. ಇಂತಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿದರೆ ಪ್ರಾಧಿಕಾರ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ.
ಇಲ್ಲದಿದ್ದರೆ ಇನ್ನಷ್ಟು ಆರ್ಥಿಕ ಸಂಕಷ್ಟ ಎದುರಿಸಬೇಕಾಗಬಹುದು ಎಂದು ಮಾಜಿ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ತಿಳಿಸಿದ್ದಾರೆ. ತರಾತುರಿಯಲ್ಲಿ ಮೂಲೆ ನಿವೇಶನ ಮಾರಾಟ ಮಾಡಿದರೆ ಸ್ಪರ್ಧಾತ್ಮಕ ಬೆಲೆ ಸಿಗುವುದಿಲ್ಲ. ಸೋಂಕು ರಿಯಲ್ ಎಸ್ಟೇಟ್ ಉದ್ಯಮಕ್ಕೂ ಭಾರೀ ಹೊಡೆತ ನೀಡಿದೆ. ಹಾಗಾಗಿ ಆಸ್ತಿಗಳ ಮಾರಾಟಕ್ಕೆ ಇದು ಸಕಾಲವಲ್ಲ. ಇದು ಸರ್ಕಾರದ ಆಸ್ತಿಯಲ್ಲ, ಬಿಡಿಎ ಆಸ್ತಿಯಾಗಿದೆ. ಬೇರೆ ಸರ್ಕಾರಿ ಸಂಸ್ಥೆಗಳ ಆಸ್ತಿ ಮಾರಾಟ ಮಾಡಿದರೆ ಬಿಡಿಎ ಆಸ್ತಿ ಶಾಶ್ವತವಾಗಿ ಉಳಿಯುತ್ತಿತ್ತು ಎಂದು ಮಾಜಿ ಬಿಡಿಎ ಆಯುಕ್ತರೊಬ್ಬರು ತಿಳಿಸಿದ್ದಾರೆ.
11,000 ಎಕರೆಯಲ್ಲಿ ಅನಧಿಕೃತ ಮಳಿಗೆಗಳು: ಬಿಡಿಎ ನಿರ್ಮಿಸಿರುವ 64 ಬಡಾವಣೆಗಳಿಗೆ ಒಟ್ಟು 38,021 ಎಕರೆ ಜಮೀನಿಗೆ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಈ ಪೈಕಿ 22,763 ಎಕರೆ ಜಮೀನನ್ನು ಬಡಾವಣೆ ರಚನೆಗೆ ಎಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಉಳಿದ ಜಮೀನು ಈವರೆಗೂ ಸ್ವಾಧೀನಕ್ಕೆ ಪಡೆದಿಲ್ಲ. ಇದರಲ್ಲಿ 11,000 ಎಕರೆಯಲ್ಲಿ ಅನಧಿಕೃತ ಮಳಿಗೆಗಳು ತಲೆಎತ್ತಿದ್ದು, 681 ಎಕರೆ ಸಿ.ಎ. ನಿವೇಶನ, 803 ಎಕರೆ ಉದ್ಯಾನಕ್ಕೆ ಮೀಸಲಿಡಲಾಗಿದೆ. ಇದೀಗ ಸರ್ಕಾರ 12,000 ಮೂಲೆ ನಿವೇಶನಗಳ ಹರಾಜು, ಬಿಡಿಎ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳನ್ನು ಸಕ್ರಮಗೊಳಿಸಲು ಅಧಿಸೂಚನೆ ಹೊರಡಿಸಿದ್ದು, ಇದರಿಂದ ಪ್ರಾಧಿಕಾರಕ್ಕೆ ಆಸ್ತಿ ಇಲ್ಲದಂತಾಗುತ್ತದೆ.
703 ನಿವೇಶನ ಹರಾಜಿಗೆ ಸಿದ್ಧತೆ: ಸರ್ಕಾರದ ಆದಾಯ ಹೆಚ್ಚಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಮೂಲೆ ನಿವೇಶನ ಹರಾಜು ಪ್ರಕ್ರಿಯೆಗೆ ನಿರ್ಧರಿಸಿದ್ದು, ಪ್ರಾಥಮಿಕ ಹಂತವಾಗಿ 703 ನಿವೇಶನಗಳ ಹರಾಜಿಗೆ ಮುಂದಾಗಿದೆ. ಬೆಂಗಳೂರಿನಲ್ಲಿ ಸಾವಿರಾರು ಮೂಲೆ ನಿವೇಶನ ಗುರುತಿಸಲಾ ಗಿದ್ದು, ಹಂತ ಹಂತವಾಗಿ ಸೈಟ್ ಹರಾಜು ಮಾಡಲಿದೆ. ಈಗಾಗಲೇ 1244 ಮೂಲೆ ನಿವೇಶನಗಳನ್ನು ಗುರುತಿಸಿದ್ದು, ಪ್ರಾಥಮಿಕ ಹಂತದಲ್ಲಿ 703, ಎರಡನೇ ಹಂತದಲ್ಲಿ 541 ನಿವೇಶನ ಹರಾಜು ಮಾಡಲಿದೆ. 2019ರಲ್ಲಿ ಬಿಡಿಎ ಮೂಲೆ ನಿವೇಶನಗಳ ಮಾರಾಟಕ್ಕೆ ಪ್ರಯತ್ನ ನಡೆದಿತ್ತು.
165 ನಿವೇಶನಗಳ ಮಾರಾಟ ಸಂದರ್ಭದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ. ಶೇ 60ರಷ್ಟು ನಿವೇಶನಗಳನ್ನಷ್ಟೇ ಹರಾಜು ಮಾಡಲಾಗಿತ್ತು. ಪ್ರಸ್ತುತ ಸಾವಿರಾರು ನಿವೇಶನಗಳ ಹರಾಜಿಗೆ ಸಿದ್ಧತೆ ನಡೆಸಲಾಗಿದೆ. 54 ಬಡಾವಣೆಗಳಲ್ಲಿರುವ ನಿವೇಶನ: ಬೆಂಗಳೂರಿನಲ್ಲಿ ಸುಮಾರು 64 ಹೊಸ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಈಗ ಸುಮಾರು 54 ಬಡಾವಣೆಗಳಲ್ಲಿರುವ 8,500 ನಿವೇಶನಗಳನ್ನು ಹರಾಜು ಮಾಡಿ 7,000 ಕೋಟಿ ರೂ. ಆಧಾರ ಸಂಗ್ರಹ ನಿರೀಕ್ಷೆಯಲ್ಲಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಡಾವಣೆ ನಿರ್ಮಿಸಿ ನಿವೇಶನ ಹಂಚಿಕೆ ಮಾಡುವುದಕ್ಕಿಂತ ಅಪಾರ್ಟ್ ಮೆಂಟ್ಗಳನ್ನು ನಿರ್ಮಿಸಲು ಒತ್ತು ನೀಡಬೇಕು. ಇದರಿಂದ ಕಡಿಮೆ ಜಾಗದಲ್ಲಿ ಹೆಚ್ಚು ಜನ ವಾಸಿಸಬಹುದು. ಜತೆಗೆ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳು ಕಡಿಮೆಯಾಗಲಿವೆ. ಮುಂಬೈ, ಇಂದೋರ್, ಕೊಚ್ಚಿಯಲ್ಲಿ ಅಪಾರ್ಟ್ ಮೆಂಟ್ ನಿರ್ಮಾಣದಿಂದ ಅಲ್ಲಿನ ಪ್ರಾಧಿಕಾರ ಅಭಿವೃದ್ಧಿಯಾಗಿವೆ.
-ಎಂ.ಕೆ. ಶಂಕರಲಿಂಗೇಗೌಡ, ಬಿಡಿಎ ಮಾಜಿ ಆಯುಕ್ತ
* ಮಂಜುನಾಥ ಗಂಗಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ