ಸುಳ್ಳು ಹೇಳಿದ್ದೇ ಮೋದಿ ಸಾಧನೆ: ಸಿದ್ದು
Team Udayavani, May 31, 2020, 5:11 AM IST
ಬೆಂಗಳೂರು: ಪ್ರಧಾನಿ ನರೇದ್ರ ಮೋದಿ ಎರಡನೇ ಅವಧಿಯಲ್ಲಿ ಒಂದು ವರ್ಷ ಸುಳ್ಳು ಹೇಳಿರುವುದೇ ಸಾಧನೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ದೇಶದ ಜನತೆಗೆ ಪತ್ರ ಬರೆದು 370 ನೇ ವಿಧಿ ರದ್ದು, ಅಯೋಧ್ಯೆರಾಮಮಂದಿರ ನಿರ್ಮಾಣಕ್ಕೆ ಒಪ್ಪಿಗೆ, ತ್ರಿವಳಿ ತಲಾಖ್ ರದ್ದು ಮಾಡಿರುವುದನ್ನೇ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿರೋದು ಅದರಲ್ಲಿ ಮೋದಿ ಸಾಧನೆ ಏನೂ ಇಲ್ಲ ಎಂದರು. ದೇಶದ ಜಿಡಿಪಿ ಶೇ.3.1ಕ್ಕೆ ಇಳಿದಿದೆ ಎಂದು ಆರೋಪಿಸಿದರು.
ಕೋವಿಡ್ 19 ನಿಯಂತ್ರಣ ವಿಫಲ: ಕೇಂದ್ರ ಸರ್ಕಾರ ಕೋವಿಡ್ 19 ಪರಿಹಾರಕ್ಕೆ 20 ಲಕ್ಷ ಕೋಟಿ ನೀಡಿದ್ದೇವೆ ಎನ್ನುವುದು ದೊಡ್ಡ ಜೋಕ್. ಕೋವಿಡ್ 19 ಸೋಂಕಿತರನ್ನು ನಿರೀಕ್ಷಿತ ತಪಾಸಣೆ ಮಾಡದೇ ನಮ್ಮ ದೇಶದಲ್ಲಿ ಕೇಸ್ ಕಡಿಮೆ ಇದೆ ಅಂತ ಬಿರುದು ಪಡೆದುಕೊಳ್ಳುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸಿದರು.