ಬೆಂಗಳೂರಿನಲ್ಲಿ ಬಿಹಾರ ಮೂಲದ ನವದಂಪತಿ ಆತ್ಮಹತ್ಯೆ
Team Udayavani, May 2, 2020, 12:32 AM IST
ಬೆಂಗಳೂರು: ಬಿಹಾರ ಮೂಲದ ನವ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಶ್ರೀರಾಮಪುರದ ದಯಾನಂದ ರಸ್ತೆಯಲ್ಲಿ ಶುಕ್ರವಾರ ನಡೆದಿದೆ.
ಹೀಗೆ ಮೃತಪಟ್ಟವರನ್ನು ರಾಹುಲ್ (30) ಮತ್ತು ಆತನ ಪತ್ನಿ ರಾಣಿ (23) ಎಂದು ಗುರುತಿಸಲಾಗಿದೆ.
ಈ ದಂಪತಿ ನಾಲ್ಕು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು ಮತ್ತು ಚಿಕ್ಕಪೇಟೆಯ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು.
ಶ್ರೀರಾಮಪುರದ ದಯಾನಂದ ರಸ್ತೆಯಲ್ಲಿರುವ ಕಟ್ಟಡದಲ್ಲಿ ಎರಡನೇ ಮಹಡಿಯ ಬಾಡಿಗೆ ಮನೆಯಲ್ಲಿ ಇವರು ವಾಸವಾಗಿದ್ದರು. ಶುಕ್ರವಾರ ಸಂಜೆ ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಬಿಲ್ ಕೊಡಲು ಇವರ ಮನೆಗೆ ಹೋಗಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ.
ರಾಣಿ ಮೃತ ದೇಹ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದು, ರಾಹುಲ್ ವಿಷ ಸೇವಿಸಿ ಮೃತ ಪಟ್ಟಿರುವ ಸಾಧ್ಯತೆ ಇದೆ. ಕೌಟುಂಬಿಕ ಕಲಹಕ್ಕೆ ಘಟನೆ ನಡೆದಿದೆ ಎಂಬುದು ಗೊತ್ತಾಗಿದೆ.
ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲವಾದರೂ ಹಿಂದಿಯಲ್ಲಿ ಬರೆದಿರುವ ಡೈರಿ ಸಿಕ್ಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.