ಮಕ್ಕಳ ಖಿನ್ನತೆ ತಡೆಗೆ ಟೆಲಿ ಸಮಾಲೋಚನೆ
Team Udayavani, Jun 16, 2020, 6:08 AM IST
ಬೆಂಗಳೂರು: ರೋಗಿಗಳಿಗೆ ಟೆಲಿ ಮೆಡಿಸಿನ್ ಆಯ್ತು. ಈಗ ಕೋವಿಡ್ 19 ಹಿನ್ನೆಲೆ ಮಕ್ಕಳು ಖಿನ್ನತೆಗೆ ಒಳಗಾದ ಮಕ್ಕಳಿಗಾಗಿ “ಟೆಲಿ ಆಪ್ತ ಸಮಾಲೋಚನೆ’ ಅಸ್ತಿತ್ವಕ್ಕೆ ಬರಲಿದೆ. ಮಕ್ಕಳ ಮಾನಸಿಕ ಒತ್ತಡ ಕಡಿಮೆ ಮಾಡಲು ಸಮಗ್ರ ಮಕ್ಕಳ ರಕ್ಷಣಾ ಯೋಜನೆ (ಐಸಿಪಿಎಸ್) ನಿರ್ದೇಶನಾಲಯ ಇದೇ ಮೊದಲ ಬಾರಿಗೆ ಇಂತಹದ್ದೊಂದು ಕೇಂದ್ರವನ್ನು ತೆರೆಯಲು ಮುಂದಾಗಿದೆ.
ಈ ಸಮಾಲೋಚನೆಯು ದೂರವಾಣಿ ಮೂಲಕ ನಡೆಯಲಿದ್ದು, ಉಚಿತ ದೂರವಾಣಿ ಸಂಖ್ಯೆ ನೀಡುವ ಸಂಬಂಧ ಐಸಿಪಿಎಸ್ ನಿರ್ದೇ ಶನಾಲಯವು ಬಿಎಸ್ಎನ್ಎಲ್ ಜತೆ ಚರ್ಚೆ ನಡೆಸಿದೆ. ಮಾಸಾಂತ್ಯಕ್ಕೆ ಇದು ಆರಂಭವಾಗುವ ನಿರೀಕ್ಷೆ ಇದೆ. ಟೆಲಿ ಆಪ್ತ ಸಮಾಲೋಚನೆ ಆರಂಭಿಸಲು ಈಗಾಗಲೇ ಸರ್ಕಾರ ಅನುಮತಿ ನೀಡಿದ್ದು, ವಿಶ್ವ ಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ವಿವಿಧ ವೆಚ್ಚಗಳಿಗಾಗಿ ತಿಂಗಳಿಗೆ ಸುಮಾರು 17 ಸಾವಿರ ರೂ. ಅನುದಾನ ನೀಡಲು ಸಮ್ಮತಿ ನೀಡಿದೆ.
ಉಳಿದ ವೆಚ್ಚ ರಾಜ್ಯ ಸರ್ಕಾರ ಭರಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಾಲಾ-ಕಾಲೇಜು ಆರಂಭ ಸೇರಿದಂತೆ ಇನ್ನಿತರ ಗೊಂದಲಗಳಿಂದಾಗಿ ಮಕ್ಕಳು ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾಗುತ್ತಿದ್ದಾರೆ. ಕೋವಿಡ್ 19 ಹೆಚ್ಚಳ ಹಾಗೂ ಯುವಜನತೆ ಮೃತಪಡುತ್ತಿದ್ದು, ಇಂತಹ ಸಂದರ್ಭದಲ್ಲಿ ಪರೀಕ್ಷೆ ಬರೆಯುವುದು ಹೇಗೆ? ಸಾರಿಗೆ ಸಿಬ್ಬಂದಿಗೂ ಸೋಂಕು ತಗುಲಿದ್ದು, ಪರೀಕ್ಷೆ ಬರೆ ಯಲು ಕೇಂದ್ರಗಳಿಗೆ ಹೇಗೆ ಹೋಗಬೇಕು?
ಆನ್ಲೈನ್ ಮೂಲಕ ಪಾಠ ಮಾಡುತ್ತೇವೆ ಎಂದು ಕೆಲ ಶಿಕ್ಷಣ ಸಂಸ್ಥೆಗಳು ಹೇಳುತ್ತಿವೆ. ಕೆಲ ಪೋಷಕರ ಬಳಿ ಸ್ಮಾರ್ಟ್ಫೋನ್ ಇಲ್ಲ. ಇದ್ದರೂ, ನೆಟ್ವರ್ಕ್ ಸಮಸ್ಯೆ ಎಂಬ ಆತಂಕದಲ್ಲಿ ಮಕ್ಕಳು ಹಾಗೂ ಪೋಷಕರಿದ್ದಾರೆ. ಇದು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಆತಂಕ ನಿವಾರಣೆಗೆ ಹಾಗೂ ಮಕ್ಕಳ ರಕ್ಷಣೆಗಾಗಿ ಟೆಲಿ ಆಪ್ತ ಸಮಾಲೋಚನೆ ನಡೆಸಲು ಐಸಿಪಿಎಸ್ ನಿರ್ಧರಿಸಿದೆ.
ಉಚಿತ ದೂರವಾಣಿ ಸಂಖ್ಯೆಯನ್ನು ಐಸಿಪಿಎಸ್ ರಾಜ್ಯಾದ್ಯಂತ ಪ್ರಚುರಪಡಿಸಲಿದ್ದು, ಬಂದ ಕರೆಗಳನ್ನು ಸ್ವೀಕರಿಸಲು ಇಬ್ಬರು ಸಿಬ್ಬಂದಿ ನೇಮಕಗೊಳ್ಳಲಿದ್ದಾರೆ. ಕರೆ ಸ್ವೀಕರಿಸಿದ ಸಿಬ್ಬಂದಿಯು ಮಕ್ಕಳ ಮಾಹಿತಿ ಪಡೆದು ಆಪ್ತ ಸಮಾಲೋಚಕರಿಗೆ ಕರೆಯನ್ನು ರವಾನಿಸಲಿದ್ದಾರೆ. ಆದ್ದರಿಂದಾಗಿ ನಿಮಿಷಕ್ಕೆ ಎಷ್ಟೇ ಕರೆಗಳು ಬಂದರೂ, ತೊಂದರೆಯಾಗ ದಂತೆ ವ್ಯವಸ್ಥೆ ಮಾಡಲಾಗಿದೆ.
ಯೂಟ್ಯೂಬ್ ಆನ್ಲೈನ್ ತರಬೇತಿ: ಮಕ್ಕಳಲ್ಲಿರುವ ಗೊಂದಲ, ಆತಂಕ ಹಾಗೂ ಖಿನ್ನತೆ ನಿವಾರಿಸಲು ಇಲಾಖೆಯಲ್ಲಿ ಸುಮಾರು 120 ಆಪ್ತ ಸಮಾಲೋಚಕರಿದ್ದು, ಇವರಿಗೆ ನಿಮ್ಹಾನ್ಸ್ ವೈದ್ಯರು ತರಬೇತಿ ನೀಡಲಿದ್ದಾರೆ. ಕೋವಿಡ್ 19 ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊ ಳ್ಳುವ ಸಂಬಂಧ ಅಂದಾಜು 15 ದಿನಗಳ ತರಬೇತಿಯು ಯೂಟ್ಯೂಬ್ ಮೂಲಕ ನಡೆಯಲಿದೆ. ಫೋನ್ ಮೂಲಕ ಆಪ್ತ ಸಮಾಲೋಚನೆ ಮಾಡುವುದು ಸವಾಲಿನ ಕೆಲಸವಾಗಿದ್ದು, ಮಕ್ಕಳ ಧ್ವನಿಯನ್ನು ಗ್ರಹಿಸಿ ಮಾತನಾಡಲು ತರಬೇತಿ ನೀಡಲಿದ್ದಾರೆ ಎಂದು ಸಮಗ್ರ ಮಕ್ಕಳ ರಕ್ಷಣಾ ಯೋಜನೆ ನಿರ್ದೇಶಕಿ ಪಲ್ಲವಿ ಅಕುರಾತಿ ತಿಳಿಸಿದ್ದಾರೆ.
ಕೋವಿಡ್ 19 ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ಜತೆಗೆ ಮಕ್ಕಳಲ್ಲಿನ ಆತಂಕ, ಖಿನ್ನತೆ ನಿವಾ ರಿಸಲು ಟೆಲಿ ಆಪ್ತಸಮಾಲೋಚನೆ ಎಂಬ ವಿನೂತನ ಯೋಜನೆ ಹಾಕಿಕೊಳ್ಳಲಾಗಿದೆ. ಶೀಘ್ರವೇ ಆಪ್ತ ಸಮಾಲೋಚಕರಿಗೆ ತರಬೇತಿ ನೀಡಲಾಗುವುದು. ನಂತರ ಟೆಲಿ ಆಪ್ತ ಸಮಾಲೋಚನೆ ಆರಂಭಿಸಲಾಗುವುದು.
-ಪಲ್ಲವಿ ಅಕುರಾತಿ, ಸಮಗ್ರ ಮಕ್ಕಳ ರಕ್ಷಣಾ ಯೋಜನೆ ನಿರ್ದೇಶಕರು
ಕೋವಿಡ್ 19 ಹಿನ್ನೆಲೆ ಮಕ್ಕಳು ಮಾನಸಿಕ ಒತ್ತಡ, ಆತಂಕ, ಖಿನ್ನತೆಗೆ ಒಳಗಾಗಿದ್ದು, ಈ ಸಂದರ್ಭದಲ್ಲಿ ನೇರ ಸಂದರ್ಶನದ ಮೂಲಕ ಆಪ್ತ ಸಮಾಲೋಚನೆ ಅಸಾಧ್ಯ ವಾಗಿದೆ. ಪ್ರಸ್ತುತ ಟೆಲಿ ಕೌನ್ಸಲಿಂಗ್ ಉಪಯುಕ್ತ ವಾಗಿದ್ದು, ಮಕ್ಕಳ ಧ್ವನಿ ಗ್ರಹಿಸಿ ಸಮಾಲೋಚನೆ ನಡೆಸುವುದು ತಾತ್ಕಾಲಿಕ ಮಾರ್ಗೋಪಾಯ.
-ಡಾ. ಬಿ.ಎನ್.ಗಂಗಾಧರ್, ನಿಮ್ಹಾನ್ಸ್ನ ನಿರ್ದೇಶಕ
* ಮಂಜುನಾಥ ಗಂಗಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ