ನಗರ ಪೊಲೀಸರಿಗೆ ಎಡಬಿಡದೆ ಕಾಡುತ್ತಿದೆ ಸೋಂಕು
Team Udayavani, Jun 22, 2020, 6:03 AM IST
ಬೆಂಗಳೂರು: ನಗರದಲ್ಲಿ ಭಾನುವಾರ ಮತ್ತೆ 17 ಮಂದಿ ಪೊಲೀಸರಲ್ಲಿ ಕೋವಿಡ್ 19 ಕಾಣಿಸಿಕೊಂಡಿದ್ದು, ಇನ್ನೊಬ್ಬ ಎಎಸ್ಐ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆಯಾ ಗಿದ್ದು, ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಕಲಾಸಿಪಾಳ್ಯ ಠಾಣೆಯ ಪಿಎಸ್ಐ ಸೇರಿ 14, ಬಂಡೇಪಾಳ್ಯ 1, ಕೋರಮಂಗಲ 1 ಹಾಗೂ ಅಗ್ನಿಶಾಮಕ ದಳದ ನಿಯಂತ್ರಣ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರಲ್ಲಿ ಕಾಣಿಸಿಕೊಂಡಿದೆ.
ಈ ಮಧ್ಯೆ ಸೋಂಕಿನಿಂದ ಬಳಲುತ್ತಿದ್ದ ವಿಲ್ಸನ್ಗಾರ್ಡನ್ ಸಂಚಾರ ಠಾಣೆಯ 59 ವರ್ಷದ ಎಎಸ್ಐ ಮೃತಪಟ್ಟಿದ್ದಾರೆ. ಮೃತ ಎಎಸ್ಐ ಅವರಿಗೆ ಜೂನ್ 18ರಂದು ಸೋಂಕು ಇರುವುದು ಧೃಡಪಟ್ಟಿತ್ತು. ಅಂದಿನಿಂದ ಅವರು ಕ್ವಾರಂಟೈನ್ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಶನಿವಾರ ತಡರಾತ್ರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ನಗರದ ಕಲಾಸಿಪಾಳ್ಯ ಠಾಣೆ ಕೆಲವು ಸಿಬ್ಬಂದಿ ಜತೆ ಮೃತರು ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಅವರನ್ನು ಕ್ವಾರಂಟೈನ್ ಒಳಪಡಿಸಲು ಕ್ರಮ ವಹಿಸಲಾಗಿದೆ. ಅಷ್ಟೇ ಅಲ್ಲ, ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ವಿಲ್ಸನ್ ಗಾರ್ಡನ್ ಠಾಣೆಯ ಕೆಲವು ಸಿಬ್ಬಂದಿಯನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಠಾಣೆ ಸೀಲ್ಡೌನ್ ಬಗ್ಗೆ ಬಿಬಿಎಂಪಿ ಹಾಗೂ ಹಿರಿಯ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಸ್ಯಾನಿಟೈಸೇಷನ್! : ಅಗ್ನಿಶಾಮಕ ದಳದ ಕಂಟ್ರೋಲ್ ರೂಂ ಸಿಬ್ಬಂದಿಗೆ ಸೋಂಕು ಧೃಡವಾದ ಹಿನ್ನೆಲೆಯಲ್ಲಿ ಸ್ಯಾನಿಟೈಸೇಷನ್ ಮಾಡಲಾಗಿದೆ. ಜತೆಗೆ, ಅವರ ಜತೆ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಜತೆಗೆ ಬಂಡೇಪಾಳ್ಯ ಮತ್ತು ಕೋರಮಂಗಲ ಠಾಣೆಯ 21 ಮಂದಿ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದ್ದು, ಕಲಾಸಿಪಾಳ್ಯ ಸೇರಿ ಈ ಮೂರು ಠಾಣೆಗಳನ್ನು ಸೀಲ್ಡೌನ್ ಮಾಡುವ ಪ್ರಕ್ರಿಯೆ ನಡೆದಿದೆ ಎಂದು ಅಧಿಕಾರಿ ಹೇಳಿದರು.