1 ದಿನದ ವೇತನ ಕಡಿತಕ್ಕೆ ಪೊಲೀಸರ ವಿರೋಧ
Team Udayavani, Apr 6, 2020, 11:13 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಕೋವಿಡ್ 19 ವೈರಸ್ ರಾಜ್ಯದ್ಯಂತ ಹರಡುತ್ತಿರುವ ಹಿನ್ನೆಲೆಯಲ್ಲಿ ಅದರ ನಿರ್ವಹಣೆಗಾಗಿ ನೌಕರರ ಒಂದು ದಿನದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘ ಘೋಷಿಸಿದ್ದು, ಅದಕ್ಕೆ ಪೊಲೀಸ್ ಇಲಾಖೆಯ ನೂರಾರು ಅಧಿಕಾರಿ ಹಾಗೂ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ಬಹಿರಂಗವಾಗಿ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪೊಲೀಸರ ವೇತನ ಪರಿಷ್ಕರಣೆ ಕುರಿತ ಔರಾದ್ಕರ್ ವರದಿ ಸಂಪೂರ್ಣವಾಗಿ ಜಾರಿಯಾಗದ ಹಿನ್ನೆಲೆ ಯಲ್ಲಿ ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ಸಿಎಆರ್, ಸಿವಿಲ್ ಸೇರಿ ನಾನಾ ವಿಭಾಗದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಒಂದು ದಿನದ ವೇತನ ಕಡಿತಗೊಳಿಸದಂತೆ ಆಯಜಿಲ್ಲಾ ವರಿಷ್ಠಾಧಿಕಾರಿಗಳು ಹಾಗೂ ವಿಭಾಗದ ಮುಖ್ಯಸ್ಥರಿಗೆ ಸಾಮೂಹಿಕ ಪತ್ರ ಬರೆದಿದ್ದು, ಯಾವುದೇ ಕಾರಣಕ್ಕೂ ನಮ್ಮ ವೇತನದಲ್ಲಿ ಕಡಿತ ಬೇಡ. ನಮಗೆ ಬರುವ ಸಂಬಳದಲ್ಲಿ ಸಂಸಾರ ನಿರ್ವಹಣೆ ಮಾಡೋದು ಕಷ್ಟವಾಗಿದೆ. ಹೀಗಾಗಿ ಮಾರ್ಚ್ 2020ರ ವೇತನದಲ್ಲಿ ಕಡಿತ ಮಾಡ ಬಾರದು ಎಂದು ಪತ್ರದಲ್ಲಿ ಉಲ್ಲೇಖೀಸಿದ್ದಾರೆ.
ಆದರೂ ಕೋವಿಡ್-19 ಮಹಾಮಾರಿ ವಿರುದ್ಧ ಪ್ರಾಮಾಣಿಕವಾಗಿ ಹೋರಾಟ ನಡೆಸಲು ಸಿದ್ಧವಾಗಿದ್ದೇವೆ ಎಂದು ಸುಮಾರು ಐವತ್ತು ಅಧಿಕ ಅಧಿಕಾರಿ ಮತ್ತು ಸಿಬ್ಬಂದಿ ಸಹಿ ಮಾಡಿರುವ ಪತ್ರ ಉದಯವಾಣಿಗೆ ಲಭ್ಯವಾಗಿದೆ.
ಸಂಘದಲ್ಲಿ ಸಕ್ರಿಯವಾಗಿಲ್ಲ : ಒಂದು ದಿನದ ವೇತನ ಕಡಿತಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ತೀರ್ಮಾನಿಸರಬಹುದು. ಆದರೆ, ಇಲಾಖೆಯ ನೌಕರನಾಗಿದ್ದು, ಈ ಸಂಘದಲ್ಲಿ ಪೊಲೀಸರು ಸಕ್ರಿಯ ಸಮನ್ವಯ ಮತ್ತು ಪಾಲುದಾರಿಕೆ ಇಲ್ಲ. ಪೊಲೀಸರನ್ನು ಸಂಘಕಡೆಗಣಿಸಿದೆ. ಹೀಗಾಗಿ ವೇತನ ಕಡಿತಗೊಳಿಸ ಬಾರದು ಎಂದು ಸಿಎಆರ್ನ ಅಧಿಕಾರಿ ತಿಳಿಸಿದ್ದಾರೆ.
ತೆಲಂಗಾಣ ಮಾದರಿ ಪ್ರೋತ್ಸಾಹ ಧನ ನೀಡಿ : ಕೋವಿಡ್ ಹೋರಾಟ ನಡೆಸುತ್ತಿರುವ ವೈದ್ಯಕೀಯ, ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರಿಗೆ ತೆಲಂಗಾಣ ಸರ್ಕಾರ, ಮಾರ್ಚ್ ತಿಂಗಳ ವೇತನ ಜತಗೆ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ. ಅದೇ ಮಾದರಿಯಲ್ಲಿ ರಾಜ್ಯಸರ್ಕಾರ ಕೊಡಬೇಕು ಎಂದು ಹೆಸರೆಳಲಿಚ್ಚಸದ ಅಧಿಕಾರಿ ಒತ್ತಾಯಿಸಿದರು.