ಗಗನಕುಸುಮವಾದ ಮಂತ್ರಿಗಿರಿ
Team Udayavani, Aug 5, 2021, 6:13 PM IST
ರಾ. ರವಿಬಾಬು
ದಾವಣಗೆರೆ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲಿ ಸ್ಥಾನ ದೊರೆಯುತ್ತದೆ ಎಂಬ ನಿರೀಕ್ಷೆ ಕೊನೆ ಗಳಿಗೆಯಲ್ಲಿ ಹುಸಿಯಾದ ಪರಿಣಾಮ ಈ ಬಾರಿಯೂ ದಾವಣಗೆರೆ ಜಿಲ್ಲೆಗೆ ಪ್ರಾತಿನಿಧ್ಯ ಇಲ್ಲದಂತಾಗಿದೆ. ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಬಿಜೆಪಿಯ ಭದ್ರ ಕೋಟೆ. ಹಾಲಿ ಇರುವ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ದಾವಣಗೆರೆ ದಕ್ಷಿಣ, ಹರಿಹರ ಹೊರತುಪಡಿಸಿದರೆ ದಾವಣಗೆರೆ ಉತ್ತರ, ಜಗಳೂರು, ಹೊನ್ನಾಳಿ, ಮಾಯಕೊಂಡ, ಚನ್ನಗಿರಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ.
ಬಿಜೆಪಿ ಪಕ್ಷ ಒಂದೇ ಅಲ್ಲ, ಸರ್ಕಾರದ ರಚನೆಗೆ ಬಲ ನೀಡಿರುವ ದಾವಣಗೆರೆ ಜಿಲ್ಲೆಗೆ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಚಿವ ಸ್ಥಾನ ದಕ್ಕಿರಲಿಲ್ಲ. ನಾಯಕತ್ವ ಬದಲಾವಣೆ ಪರಿಣಾಮ ಅಸ್ತಿತ್ವಕ್ಕೆ ಬಂದಿರುವ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ಭಾರೀ ಭರವಸೆ ಇತ್ತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೃಪಾಕಟಾಕ್ಷ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಇಲ್ಲವೇ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮೇಲಿದೆ.
ಯಾವುದೇ ಕಾರಣಕ್ಕೂ ಸಚಿವ ಸ್ಥಾನ ತಪ್ಪುವುದೇ ಇಲ್ಲ ಭರ್ಜರಿ ವಿಶ್ವಾಸ ಕಮಲ ಪಾಳೆಯದಲ್ಲಿತ್ತು. ಆದರೆ ಕೊನೆ ಗಳಿಗೆಯಲ್ಲಿ ನಿರೀಕ್ಷೆ ಕಮರಿ ಹೋಯಿತು. ಹಾಗಾಗಿ ಕಳೆದ ಬಾರಿಯಂತೆ ಸಚಿವ ಸ್ಥಾನದಿಂದ ಬಿಜೆಪಿ ಶಾಸಕರು ವಂಚಿತರಾಗಬೇಕಾಯಿತು. 1997ರಲ್ಲಿ ಉದಯಗೊಂಡಿರುವ ದಾವಣಗೆರೆ ಜಿಲ್ಲೆ 25 ಹರೆಯದ ಸಂಭ್ರಮದಲ್ಲಿರುವ ಸಂದರ್ಭದಲ್ಲೇ ಜಿಲ್ಲೆಗೆ ಸಚಿವ ಸ್ಥಾನವೇ ಇಲ್ಲದಂತಾಗಿರುವುದು ಬಿಜೆಪಿ ಮುಖಂಡರು, ಕಟ್ಟಾ ಅಭಿಮಾನಿಗಳು, ಕಾರ್ಯಕರ್ತರ ನಿರಾಸೆಗೆ ಕಾರಣವಾಗಿದೆ. ಆದರೆ ಪಕ್ಷದ, ವರಿಷ್ಠರ ಅಂತಿಮ ತೀರ್ಮಾನಕ್ಕೆ ಬದ್ಧವಾಗಿರಬೇಕಾದ ಅನಿವಾರ್ಯತೆಯಲ್ಲಿ ಕಮಲ ಪಕ್ಷದ ನಾಯಕರಿದ್ದಾರೆ.
ಒಗ್ಗಟ್ಟಿನ ಮನವಿಗೆ ಸಿಗಲಿಲ್ಲ ಸ್ಪಂದನೆ: ಜಿಲ್ಲೆಯಲ್ಲಿ ಬಿಜೆಪಿಯ ಐವರು ಶಾಸಕರಿದ್ದರೂ ಒಂದೇ ಧ್ವನಿ ಎತ್ತಿದ್ದು ಬಹಳ ಅಪರೂಪ. ಇದೇ ಪ್ರಥಮ ಬಾರಿಗೆ ಸಂಸದ ಜಿ.ಎಂ. ಸಿದ್ದೇಶ್ವ ರ ನೇತೃತ್ವದಲ್ಲಿ ಐವರು ಶಾಸಕರು ಒಗ್ಗಟ್ಟಾಗಿ ಐವರು ಶಾಸಕರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದರು.
ಆದರೂ ಮುಖ್ಯಮಂತ್ರಿಗಳು, ಹೈಕಮಾಂಡ್ ಜಿಲ್ಲೆಯ ಶಾಸಕರ ಒಗ್ಗಟ್ಟಿನ ಮನವಿಗೆ ಸ್ಪಂದಿಸಲೇ ಇಲ್ಲ. ನೂತನ ಮುಖ್ಯಮಂತ್ರಿಗಳ ನೇತೃತ್ವದ ಸಂಪುಟದ ಭರ್ತಿ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆಯೇ ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಯಾವುದೇ ಖಾತೆ ನೀಡಿದರೂ ನಿರ್ವಹಿಸಲು ಸಿದ್ಧ ಎನ್ನುವ ಮೂಲಕ ಮಂತ್ರಿ ಸ್ಥಾನಕ್ಕೆ ದಾಳ ಉರುಳಿಸಿದ್ದರು. ಚನ್ನಗಿರಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ ಅವರು ತಮ್ಮ ನೆಚ್ಚಿನ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೂಲಕ ಸಚಿವರಾಗುವ ಪ್ರಯತ್ನ ನಡೆಸಿದರು.
ಯಡಿಯೂರಪ್ಪ ಅವರ ಪರಮಾಪ್ತ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಸಿರು ನಿಶಾನೆ ದೊರೆತೇ ದೊರೆಯುತ್ತದೆ ಎಂಬ ವಿಶ್ವಾಸದಲಿದ್ದರು. ಆದರೆ ಈ ಬಾರಿಯೂ ನಿರಾಸೆ ಅನುಭವಿಸುವಂತಾಯಿತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಆಗಿದ್ದ “ಮಾನಸ ಪುತ್ರ’ ಎಂದೇ ಗುರುತಿಸಿಕೊಂಡಿರುವ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಎರಡನೇ ಬಾರಿ ಸಚಿವರಾಗುವ ಕನಸು ಕಂಡಿದ್ದರು. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಲೇ ತಮ್ಮದೇ ಆದ ರಾಜಕೀಯ ದಾಳ ಉರುಳಿಸುತ್ತಾ ಮಂತ್ರಿಗಿರಿಯತ್ತ ಚಿತ್ತ ನೆಟ್ಟಿದ್ದರು.
ಸಚಿವ ಸಂಪುಟ ರಚನೆಯ ಕೊನೆ ಕ್ಷಣದವರೆಗೆ ರೇಣುಕಾಚಾರ್ಯರ ಹೆಸರು ಮುಂಚೂಣಿಯಲ್ಲೇ ಇತ್ತು. ಜಿಲ್ಲೆಗೆ ಮಂತ್ರಿ ಸ್ಥಾನ ದೊರೆಯುತ್ತದೆ ಎನ್ನುವ ವಾತಾವರಣವೂ ನಿರ್ಮಾಣವಾಗಿತ್ತು. ಆದರೆ ಕಡೇ ಕ್ಷಣದಲ್ಲಿ ರೇಣುಕಾಚಾರ್ಯರಿಗೆ ಮಾತ್ರವಲ್ಲ, ದಾವಣಗೆರೆ ಜಿಲ್ಲೆಗೂ ಪ್ರಾತಿನಿಧ್ಯ ದೊರೆಯಲಿಲ್ಲ. ಜಗಳೂರು ಶಾಸಕ, ವಾಲೀ¾ಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ವಿ. ರಾಮಚಂದ್ರ ಸಹ ಒಂದು ಕೈ ನೋಡಿಯೇ ಬಿಡೋಣ ಎನ್ನುವಂತೆ ಮಂತ್ರಿ ಸ್ಥಾನದತ್ತ ಗಮನ ಹರಿಸಿದ್ದರು.
ವಾಲ್ಮೀಕಿ ನಾಯಕ ಸಮಾಜ ಕೂಡ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯವನ್ನೂ ಮಾಡಿತ್ತು. ಅವರಿಗೂ ಸಚಿವ ಸ್ಥಾನ ದಕ್ಕಲೇ ಇಲ್ಲ. ಒಟ್ಟಾರೆ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಾವಣಗೆರೆ ಜಿಲ್ಲೆಗೆ ಈ ಬಾರಿ ಕೂಡ ಸಚಿವ ಸ್ಥಾನ ದೊರೆಯದೇ ಇರುವುದು ಬೇಸರದ ಸಂಗತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Panchamasali ಎಂಬ ಕಾರಣಕ್ಕೆ ಯತ್ನಾಳ್ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!