ಕಂಪ್ಲೀಟ್ ಲಾಕ್ಡೌನ್
Team Udayavani, Jul 6, 2020, 11:41 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ದಾವಣಗೆರೆ: ಊರು, ಬಡಾವಣೆ, ಕಾಲೋನಿ, ಓಣಿ ನಂತರ ಮನೆಯ ಬಾಗಿಲಲ್ಲೇ ಹೊಂಚು ಹಾಕುತ್ತಿರುವ ಮಹಾಮಾರಿ ಕೋವಿಡ್ ವೈರಸ್ ಹಾವಳಿ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮತ್ತೆ ಘೋಷಿಸಿರುವ ಭಾನುವಾರದ ಲಾಕ್ಡೌನ್ಗೆ ದಾವಣಗೆರೆಯಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಯಿತು.
ಮಾ.22 ರ ಭಾನುವಾರ ಜನರಿಂದ ಜನರಿಗೋಸ್ಕರ ಜನರೇ ಹೇರುಕೊಳ್ಳುವ ಸ್ಪಯಂ ಜನತಾ ಕರ್ಫ್ಯೂ ಸಂದರ್ಭದಲ್ಲಿ ವ್ಯಕ್ತವಾದ ಸ್ಪಂದನೆಯಂತೆ ಪ್ರಥಮ ಭಾನುವಾರದ ಲಾಕ್ಡೌನ್ಗೆ ದಾವಣಗೆರೆ ಜನರಿಂದ ಉತ್ತಮ ಸ್ಪಂದನೆ ದೊರೆಯಿತು. ಸಾರ್ವಜನಿಕರು, ವ್ಯಾಪಾರಿಗಳು, ಹೋಟೆಲ್ ಮಾಲಿಕರು, ಆಟೋರಿಕ್ಷಾ, ಖಾಸಗಿ ನಗರ ಸಾರಿಗೆ ಬಸ್ ಮಾಲಿಕರು, ಸಿಬ್ಬಂದಿ ಸ್ವಯಂ ಪ್ರೇರಣೆಯಿಂದ ಅಂಗಡಿ, ಹೋಟೆಲ್, ಆಟೋರಿಕ್ಷಾ, ಬಸ್ ಸಂಚಾರ ನಿಲ್ಲಿಸುವ ಮೂಲಕ ಸರ್ಕಾರದ ಪ್ರಯತ್ನಕ್ಕೆ ಸಹಕಾರ ನೀಡಿದರು. ಹಲವಾರು ದಿನಗಳಿಂದಲೂ ಜನರು ಭಾನುವಾರದ ಲಾಕ್ಡೌನ್ ಬಗ್ಗೆಯೇ ಚರ್ಚೆ ನಡೆಸುತ್ತಿದ್ದರು. ಸರ್ಕಾರ ಲಾಕ್ಡೌನ್ ಮಾಡುತ್ತಿರುವುದು ಸೂಕ್ತ ಎಂಬ ಸಾರ್ವತ್ರಿಕ ಅಭಿಪ್ರಾಯದಂತೆ ಎಲ್ಲಾ ಕಡೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು.
ಸಂಪೂರ್ಣ ಲಾಕ್ಡೌನ್ ಹಿನ್ನೆಲೆಯಲ್ಲಿ ಬೆಳಗ್ಗೆ 7 ರಿಂದಲೇ ಪ್ರತಿಕ್ರಿಯೆ ವ್ಯಕ್ತವಾಗತೊಡಗಿತು. ಹಳೆಯ ಜಿಲ್ಲಾಧಿಕಾರಿ ಪಕ್ಕದ ಮಾರ್ಕೆಟ್, ಕೆ.ಆರ್. ಮಾರ್ಕೆಟ್ ಇತರೆ ಭಾಗದಲ್ಲಿ ಕೆಲ ತರಕಾರಿ, ಹೂವು- ಹಣ್ಣು ವ್ಯಾಪಾರಕ್ಕೆ ಅವಕಾಶ ನೀಡಲಾಗಿತ್ತು. ನಂತರ ಎಲ್ಲವನ್ನೂ ನಿಲ್ಲಿಸಲಾಯಿತು. ಹಾಗಾಗಿ ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಮಾರುಕಟ್ಟೆ ಬಿಕೋ ಎನ್ನುತ್ತಿದ್ದವು. ರಸ್ತೆ ಬದಿಯಲ್ಲಿ ತೆಂಗಿನಕಾಯಿ, ತರಕಾರಿ ಮಾರುತ್ತಿದ್ದವರಿಗೆ ಸ್ಥಳಾಂತರ ಮಾಡಿಸಲಾಯಿತು. ಕೆಲವು ಕಡೆ ಅವಕಾಶವನ್ನೂ ನೀಡಲಿಲ್ಲ.
ಭಾನುವಾರದ ಲಾಕ್ಡೌನ್ನಿಂದ ಹಾಲಿಗೆ ವಿನಾಯತಿ ನೀಡಲಾಗಿತ್ತು. ಜನ ಹಾಲಿಗೆ ಮುಗಿ ಬಿದ್ದು ಕೊಂಡೊಯ್ದರು. ಪ್ರತಿ ನಿತ್ಯ ಮಾಮೂಲಿನಂತೆ ತಡಮಾಡಿ ಹಾಲಿಗೆ ಹೋದವರು ಬಂದ ದಾರಿಗೆ ಸುಂಕ ಇಲ್ಲ… ಎನ್ನುವಂತೆ ಬರಿ ಕೈಯಲ್ಲಿ ವಾಪಾಸ್ಸಾದರು. ಲಾಕ್ಡೌನ್ನಿಂದ ಕಿರಾಣಿ, ತರಕಾರಿ ಅಂಗಡಿ, ಔಷಧಿ ಅಂಗಡಿ ತೆರೆಯಲಿಕ್ಕೆ ಅವಕಾಶ ಇತ್ತು. ಆದರೆ, ಜನರು ಹೊರ ಬರದಂತಾದ ಕಾರಣ ವ್ಯಾಪಾರ-ವಹಿವಾಟು ತೀರಾ ಕಡಿಮೆ ಇತ್ತು.
ಹೋಟೆಲ್ಗಳ ಪ್ರಾರಂಭಕ್ಕೆ ಅವಕಾಶ ಇತ್ತು. ಆದರೆ, ಪಾರ್ಸೆಲ್ ಮಾತ್ರ ನೀಡಬೇಕು ಎಂದು ಕಟ್ಟಪ್ಪಣೆ ಹಿನ್ನೆಲೆಯಲ್ಲಿ ಹೋಟೆಲ್ಗಳು ಸಹ ಖಾಲಿ ಖಾಲಿಯಾಗಿದ್ದವು. ಕೆಲವು ಕಡೆ ಹೋಟೆಲ್ ಒಳಗೆ ಕುಳಿತು ತಿಂಡಿ ತಿನ್ನುವುದನ್ನ ಕಂಡಂತಹ ಪೊಲೀಸರು ಎಲ್ಲರನ್ನೂ ವಾಪಸ್ ಕಳಿಸಿ, ಮಾಲೀಕರಿಗೆ ಒಳಗೆ ಆವಕಾಶ ಮಾಡಿಕೊಡದಂತೆ ಎಚ್ಚರಿಸಿದರು. ಆಟೋರಿಕ್ಷಾಗಳ ಸಂಚಾರ ತೀರಾ ವಿರಳವಾಗಿತ್ತು. ಲಾಕ್ಡೌನ್ ನಡುವೆಯೂ ಅಲ್ಲಲ್ಲಿ ಆಟೋಗಳ ಸಂಚಾರ ಕಂಡು ಬಂದಿತು. ಪೊಲೀಸರು ತಡೆದು ಎಚ್ಚರಿಕೆ ನೀಡಿ ಕಳಿಸುವುದು ಸಾಮಾನ್ಯವಾಗಿತ್ತು.
ಲಾಕ್ಡೌನ್ ಉಲ್ಲಂಘಿಸಿ, ಮಾಸ್ಕ್ ಇಲ್ಲದೆ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದರು. ಕೆಲವರಿಗೆ ಬುದ್ಧಿ ಹೇಳಿ ವಾಪಸ್ ಕಳಿಸಿದರು. ಮಾಸ್ಕ್ ಧರಿಸುವಂತೆ ಸೂಚಿಸಿದರು. ಲಾಕ್ಡೌನ್ ಹಿನ್ನೆಲೆಯಲ್ಲಿ ಸದಾ ಜನರಿಂದ ತುಂಬಿ ತುಳುಕಿರುತ್ತಿದ್ದ ಅಶೋಕ ರಸ್ತೆ, ಹಳೆ ಪಿಬಿ ರಸ್ತೆ, ಮಹಾನಗರ ಪಾಲಿಕೆ ರಸ್ತೆ, ಹದಡಿ ರಸ್ತೆ, ಜಿಲ್ಲಾ ಆಸ್ಪತ್ರೆ, ವಿದ್ಯಾನಗರ ಮುಖ್ಯ ರಸ್ತೆ, ಶಾಮನೂರು ರಸ್ತೆ, ಕೆ.ಆರ್. ರಸ್ತೆ, ಮಂಡಿಪೇಟೆ, ಬಂಬೂಬಜಾರ್, ಹೊಂಡದ ವೃತ್ತ, ಕೊಂಡಜ್ಜಿ ರಸ್ತೆ… ಹೀಗೆ ಹಲವಾರು ರಸ್ತೆ, ಪ್ರಮುಖ ವೃತ್ತದಲ್ಲಿ ಅಕ್ಷರಶಃ ನಿಶ್ಯಬ್ದ. ಜನರೇ ಇಲ್ಲವೇ… ಎನ್ನುವಂತಹ ವಾತಾವರಣ ಇತ್ತು.
ಕೆಎಸ್ಸಾರ್ಟಿಸಿ ಘಟಕ ಎಲ್ಲಾ ಬಸ್ ಸಂಚಾರ ನಿಲ್ಲಿಸಿದ್ದರ ಪರಿಣಾಮ ಸಾರಿಗೆ ಬಸ್ ನಿಲ್ದಾಣದಲ್ಲಿ ಸಿಬ್ಬಂದಿ, ಅಧಿಕಾರಿಗಳು ಹೊರತುಪಡಿಸಿ ಬೇರೆ ಯಾರೂ ಕಾಣಸಿಗಲಿಲ್ಲ. ದಾವಣಗೆರೆಗೆ ಇತರೆ ಕಡೆಯಿಂದ ಬಂದು, ಹೋಗುವ ಬಸ್ ಬರಲಿಲ್ಲ. ದಾವಣಗೆರೆ ಘಟಕದಿಂದ ಯಾವುದೇ ಬಸ್ ಹೊರ ಬರಲಿಲ್ಲ. ನಗರ ಸಾರಿಗೆ ಸಹ ನಿಲ್ಲಿಸಲಾಗಿತ್ತು. ಲಾಕ್ಡೌನ್ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯಿಂದಲೇ ಸಾರಿಗೆ ಬಸ್ಗಳ ಸಂಚಾರ ನಿಲ್ಲಿಸಲಾಗಿತ್ತು. ದಾವಣಗೆರೆ- ಹರಿಹರ ಡಿಪೋಗಳ 360 ಬಸ್ಗಳಲ್ಲಿ 180 ಬಸ್ಗಳು ಮಾತ್ರ ಸಂಚರಿಸುತ್ತಿದ್ದು, ಆ ಎಲ್ಲಾ ಬಸ್ಗಳು ರಸ್ತೆಗೆ ಇಳಿಯಲಿಲ್ಲ. ಲಾಕ್ಡೌನ್, ಕೊರೊನಾ ಹಾವಳಿಯಿಂದ ಜಿಲ್ಲೆಯಲ್ಲಿ ಶೇ.40 ರಷ್ಟು ಬಸ್ ಮಾತ್ರ ಸಂಚರಿಸುತ್ತಿವೆ.
ಮಾ. 22 ರಿಂದ ಖಾಸಗಿ ಬಸ್ ಸಂಚಾರ ಜಿಲ್ಲೆಯಲ್ಲಿ ಇಲ್ಲವೇ ಇಲ್ಲದಂತಾಗಿದೆ. ಭಾನುವಾರ ಸಂತೆ ರದ್ದುಗೊಳಿಸಿದ್ದರ ಪರಿಣಾಮ ಸಂತೆಗೆ ಎಂದಿನಂತೆ ಬರುವ ವ್ಯಾಪಾರಸ್ಥರು ತೊಂದರೆ ಅನುಭವಿಸುವಂತಾಯಿತು. ಸಂಜೆ ಆಗುತ್ತಿದ್ದಂತೆ ಜನರ ಸಂಚಾರ ತೀರಾ ವಿರಳವಾಗಿತ್ತು. ಒಟ್ಟಾರೆ ಪ್ರಥಮ ಭಾನುವಾರದ ಲಾಕ್ಡೌನ್ಗೆ ದಾವಣಗೆರೆಯಲ್ಲಿ ನಿರೀಕ್ಷೆಗೂ ಮೀರಿದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Panchamasali ಎಂಬ ಕಾರಣಕ್ಕೆ ಯತ್ನಾಳ್ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ