ಖರೀದಿ ಕೇಂದ್ರದಲ್ಲಿ ಕಡಲೆ ಮಾರಾಟ ಜೋರು
ನಿಗದಿತ ಸಮಯಕ್ಕೆ ಹಣವೂ ರೈತರ ಖಾತೆಗೆ ಜಮೆ ಆಗಲಿ ಎಂಬುದೇ ರೈತರ ಒತ್ತಾಸೆ.
Team Udayavani, Mar 18, 2022, 5:23 PM IST
ಧಾರವಾಡ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತೆರೆದಿರುವ ಕಡಲೆ ಖರೀದಿ ಕೇಂದ್ರಗಳಲ್ಲಿ ರೈತರ ನೋಂದಣಿ ಹಾಗೂ ಕಾಳು ಮಾರಾಟಕ್ಕೆ ಈ ವರ್ಷ ರೈತರಿಂದ ಉತ್ತಮ ಸ್ಪಂದನೆ ಲಭಿಸಿದೆ. ಕಳೆದ ವರ್ಷ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆಯಲ್ಲಿ ಉಂಟಾದ ವಿಳಂಬದ ಜತೆಗೆ ಹೊರಗಡೆಯೇ ಅಧಿಕ ಬೆಲೆ ಲಭಿಸಿದ ಕಾರಣ ರೈತರು ಬೆಂಬೆಲೆಯ ಕೇಂದ್ರಗಳಲ್ಲಿ ಕಾಳು ಮಾರಾಟಕ್ಕೆ ಹಿಂದೇಟು ಹಾಕಿದ್ದರು.
ಆದರೆ ಈ ವರ್ಷ ನಿಗದಿತ ಸಮಯಕ್ಕೆ ನೋಂದಣಿ ಪ್ರಕ್ರಿಯೆ ಆರಂಭದ ಜತೆ ಜತೆಗೆ ಖರೀದಿ ಪ್ರಕ್ರಿಯೆಗೂ ಚಾಲನೆ ಸಿಕ್ಕಿದ್ದು, ಇದಲ್ಲದೇ ಮಾರುಕಟ್ಟೆಯಲ್ಲಿ ಬೆಂಬೆಲೆಗಿಂತ ಕಡಿಮೆ ಬೆಲೆ ಕಾರಣ ಕಡಲೆ ಬೆಳೆದ ರೈತರು ಬೆಂಬೆಲೆ ಖರೀದಿ ಕೇಂದ್ರಗಳತ್ತ ಮುಖ ಮಾಡಿದ್ದಾರೆ.
2020ರಲ್ಲಿ ಬೆಂಬೆಲೆಯಡಿ ತೆರೆದಿದ್ದ ಖರೀದಿ ಕೇಂದ್ರಗಳಲ್ಲಿ 24 ಸಾವಿರಕ್ಕೂ ಹೆಚ್ಚು ರೈತರಿಂದ 2ಲಕ್ಷ 8ಸಾವಿರ ಕ್ವಿಂಟಲ್ನಷ್ಟು ಖರೀದಿಯಾಗಿತ್ತು. ಆದರೆ ಕಳೆದ ವರ್ಷ ಖರೀದಿಯ ವಿಳಂಬ ಪ್ರಕ್ರಿಯೆಯಿಂದ 16 ಕೇಂದ್ರಗಳಲ್ಲಿ 76, 148 ಕ್ವಿಂಟಲ್ನಷ್ಟು ಅಷ್ಟೇ ಖರೀದಿಯಾಗಿತ್ತು. ಇದೀಗ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ತೆರೆದಿರುವ 22 ಕೇಂದ್ರಗಳಲ್ಲಿ ಮಾ.15 ರ ಅಂತ್ಯಕ್ಕೆ ಜಿಲ್ಲೆಯಲ್ಲಿ 16,537ರೈತರು ಕಡಲೆ ಬೆಳೆ ಮಾರಾಟಕ್ಕೆ ಹೆಸರು ನೋಂದಣಿ ಮಾಡಿಸಿದ್ದು, ಈ ಪೈಕಿ ಈಗಾಗಲೇ 29,726.5 ಕ್ವಿಂಟಲ್ನಷ್ಟು ಖರೀದಿಯಾಗಿದೆ. ಹೀಗಾಗಿ ಸಹಜವಾಗಿ ಈ ಸಲ ನೋಂದಣಿ, ಖರೀದಿ ಪ್ರಮಾಣ ಮತ್ತೆ ಏರುಮುಖ ಮಾಡುವ ನಿರೀಕ್ಷೆ ಇದೆ.
ಖರೀದಿ ಕೇಂದ್ರಗಳ ಹೆಚ್ಚಳ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್ಎಕ್ಯೂ ಗುಣಮಟ್ಟದ ಕಡಲೆ ಕಾಳನ್ನು ಪ್ರತಿ ಕ್ವಿಂಟಲ್ಗೆ ಕೇಂದ್ರ ಸರ್ಕಾರವು ನಿಗದಿಪಡಿಸಿರುವ 5,230 ರೂ.ಗಳಂತೆ ಜಿಲ್ಲೆಯ ರೈತರಿಂದ ಮಾತ್ರ ಖರೀದಿಸಲು ಕೇಂದ್ರಗಳನ್ನು ತೆರೆಯಲಾಗಿದೆ. ಫೆ.14ರಿಂದ ಆರಂಭಗೊಂಡ ಈ ಕೇಂದ್ರಗಳಲ್ಲಿ ಮಾರ್ಚ್ ತಿಂಗಳಾಂತ್ಯದವರೆಗೆ ನೋಂದಣಿಗೆ ಅವಕಾಶ ನೀಡಲಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 15 ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು.
ಆದರೆ ಈ ವರ್ಷ ಆರಂಭದಲ್ಲಿ 19 ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು. ಆ ಬಳಿಕ ರೈತರ ಬೇಡಿಕೆ ಅನುಸಾರ ಇದೀಗ ಬರೋಬ್ಬರಿ 22 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರತಿ ರೈತರಿಂದ ಎಕರೆಗೆ 4 ಕ್ವಿಂಟಲ್ ಹಾಗೂ ಗರಿಷ್ಟ 15 (ಹದಿನೈದು) ಕ್ವಿಂಟಲ್ ಪ್ರಮಾಣದ ಎಫ್ಎಕ್ಯೂ ಗುಣಮಟ್ಟದ ಕಡಲೆಕಾಳು ಖರೀದಿಗೆ ಅವಕಾಶ ನೀಡಲಾಗಿದೆ.
ಬೆಂಬೆಲೆಯತ್ತ ರೈತರು: ಕಳೆದ ವರ್ಷದಲ್ಲಿ ಪ್ರತಿ ಎಕರೆಗೆ 5-6 ಕ್ವಿಂಟಲ್ನಷ್ಟು ಕಡಲೆ ಬೆಳೆಯ ಇಳುವರಿ ಸಿಕ್ಕಿತ್ತು. ಈ ವರ್ಷ ಮಳೆಯ ಹೊಡೆತಕ್ಕೆ ಕಡಲೆ ನಿರೀಕ್ಷೆಯನ್ನೇ ಕೈಬಿಟ್ಟಿದ್ದ ರೈತರಿಗೆ ಕಡಲೆ ಬಂಪರ್ ಬೆಳೆ ನೀಡಿದೆ. ಹೀಗಾಗಿ ಕಳೆದ ಬಾರಿಗಿಂತ ಹೆಚ್ಚು ಇಳುವರಿ ಸಿಕ್ಕಿದ್ದು, ಪ್ರತಿ ಎಕರೆಗೆ 8-9 ಕ್ವಿಂಟಲ್ ಇಳುವರಿ ಬಂದಿದೆ. ಬಂಪರ್ ಬೆಳೆ ಸಿಕ್ಕರೂ ಬಂಪರ್ ಬೆಲೆ ಇಲ್ಲದಾಗಿದೆ. ಕಳೆದ ಬಾರಿಗಿಂತ ಬೆಲೆ ಕಡಿಮೆ ಇದ್ದು, ಕ್ವಿಂಟಲ್ ಗೆ 4600-4700 ರೂ. ದಾಟದಂತಾಗಿದೆ.
ಹಣದ ಅಡಚಣೆ ಇದ್ದವರು ಈಗಾಗಲೇ ಬಂದಷ್ಟಕ್ಕೆ ಕಾಳು ಮಾರಾಟ ಮಾಡಿದ್ದರೆ, ಸ್ವಲ್ಪ ಅನುಕೂಲ ಉಳ್ಳವರು ಬೆಂಬೆಲೆಯ ಕೇಂದ್ರಗಳತ್ತ ಈ ಸಲ ರೈತರು ಮುಖ ಮಾಡಿದ್ದಾರೆ. ಕಳೆದ ಬಾರಿಗೆ ಬೆಂಬೆಲೆಯಡಿ ಮಾರಾಟ ಮಾಡಿದ ರೈತರಿಗೆ ಹಣ ಜಮೆ ಆಗಲು ತೊಂದರೆ ಉಂಟಾಗಿತ್ತು. ಈ ಸಲ ಈ ತೊಂದರೆ ಆಗದಂತೆ ನಿಗದಿತ ಸಮಯಕ್ಕೆ ಹಣವೂ ರೈತರ ಖಾತೆಗೆ ಜಮೆ ಆಗಲಿ ಎಂಬುದೇ ರೈತರ ಒತ್ತಾಸೆ.
ಜಿಲ್ಲೆಯಲ್ಲಿ ತೆರೆದಿರುವ 22 ಬೆಂಬೆಲೆಯ ಖರೀದಿ ಕೇಂದ್ರಗಳಲ್ಲಿಯೇ ಮಾ.15 ಅಂತ್ಯಕ್ಕೆ ಪಿಕೆಪಿಎಸ್ ಉಪ್ಪಿನಬೆಟಗೇರಿ ಕೇಂದ್ರದಲ್ಲಿಯೇ ಅತೀ ಹೆಚ್ಚು 1702 ರೈತರು ಹೆಸರು ನೋಂದಣಿ ಮಾಡಿಸಿದ್ದರೆ, ಪಿಕೆಪಿಎಸ್ ಯರೇಬೂದಿಹಾಳ ಕೇಂದ್ರದಲ್ಲಿ ಅತೀ ಕಡಿಮೆ 173 ರೈತರಿಂದ ಅಷ್ಟೇ ನೋದಣಿಯಾಗಿದೆ. ಇನ್ನು ಎಫ್ಪಿಒ ಅಣ್ಣಿಗೇರಿ ಕೇಂದ್ರದಲ್ಲಿ 3489 ಕ್ವಿಂಟಲ್ನಷ್ಟು ಅಧಿಕ ಕಡಲೆ ಖರೀದಿಯಾಗಿದ್ದರೆ ಪಿಕೆಪಿಎಸ್ ಹಾಳಕುಸುಗಲ್ ಕೇಂದ್ರಗಳಲ್ಲಿ ಅತಿ ಕಡಿಮೆ 12 ಕ್ವಿಂಟನಲ್ನಷ್ಟು ಖರೀದಿಯಾಗಿದೆ. ಇದಲ್ಲದೇ ಪಿಕೆಪಿಎಸ್ ಯರೇಬೂದಿಹಾಳ ಹಾಗೂ ಪಿಕೆಪಿಎಸ್ ಯಲಿವಾಳ ಕೇಂದ್ರಗಳಲ್ಲಿ ಈವರೆಗೂ ಖರೀದಿ ಪ್ರಕ್ರಿಯೆ ಆರಂಭಗೊಂಡಿಲ್ಲ.
ಜಿಲ್ಲೆಯಲ್ಲಿ ತೆರೆದಿರುವ 22 ಕೇಂದ್ರಗಳಲ್ಲಿ ಮಾ.30 ರ ವರೆಗೆ ಹೆಸರು ನೋಂದಣಿ ಮಾಡಲು ಅವಕಾಶವಿದ್ದು, ಮೇ 14 ರವರೆಗೆ ಖರೀದಿ ಪ್ರಕ್ರಿಯೆ ಇರಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ ರೈತರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಈಗಾಗಲೇ 29,726.5 ಕ್ವಿಂಟಲ್ನಷ್ಟು ಖರೀದಿ ಮಾಡಲಾಗಿದೆ. ಇನ್ನು ಕಳೆದ ಬಾರಿ ರೈತರಿಗೆ ಹಣ ಜಮೆ ಆಗಲು ವಿಳಂಬವಾಗಿತ್ತು. ಈ ಸಲ ಅಗತ್ಯ ಕ್ರಮ ಕೈಗೊಂಡಿದ್ದು, ಆದಷ್ಟು ಬೇಗ ರೈತರ ಖಾತೆಗಳಿಗೂ ಹಣ ಜಮೆ ಆಗಲಿದೆ.
ವಿನಯ್ ಪಾಟೀಲ,
ಹುಬ್ಬಳ್ಳಿ ಶಾಖಾ ವ್ಯವಸ್ಥಾಪಕ, ರಾಜ್ಯ ಸಹಕಾರ ಮಾರಾಟ ಮಹಾಮಂಡಳ
ಮಳೆಯ ಹೊಡೆತಕ್ಕೆ ಈ ವರ್ಷ ಇಳುವರಿಯ ನಿರೀಕ್ಷೆಯನ್ನೇ ಕೈಬಿಟ್ಟಿದ್ದೆವು. ಆದರೆ ಈ ವರ್ಷ ಕಳೆದ ಬಾರಿಗಿಂತ ಹೆಚ್ಚು ಇಳುವರಿ ಬಂದಿದ್ದು, ಬಂಪರ್ ಬೆಳೆ ಸಿಕ್ಕಿದೆ. ಆದರೆ ಕಳೆದ ಬಾರಿಗಿಂತ ಬೆಲೆ ಕಡಿಮೆ ಇದ್ದು, ಹೀಗಾಗಿ ಬೆಂಬೆಲೆಯ ಕೇಂದ್ರಗಳಲ್ಲಿ ಮಾರಾಟಕ್ಕೆ ಹೆಸರು ನೋಂದಣಿ ಮಾಡಿಸಿದ್ದೇನೆ. ಆದರೆ ಕಳೆದ ಬಾರಿ ಮಾಡಿದಂತೆ ಹಣಕ್ಕಾಗಿ ಕಾಯುವಂತೆ ಮಾಡದೇ ಆದಷ್ಟು ಬೇಗ ಹಣ ರೈತರ ಖಾತೆಗೆ ಜಮೆ ಮಾಡಬೇಕು.
ಬಿ.ಆರ್. ಮೃತ್ಯುಂಜಯ, ರೈತ
ಶಶಿಧರ್ ಬುದ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ
Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ
Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ