ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ
ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ನಿರ್ಮಿತಿ ಕೇಂದ್ರ ಅಧಿಕಾರಿಗಳಿಗೆ ಸಚಿವ ಮುನೇನಕೊಪ್ಪ ತಾಕೀತು
Team Udayavani, Jul 21, 2022, 6:11 PM IST
ಹುಬ್ಬಳ್ಳಿ: ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸದ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಮಾಹಿತಿ ನೀಡುವಂತೆ ತಾಕೀತು ಮಾಡಿದರು.
ಇಲ್ಲಿನ ಮಿನಿವಿಧಾನಸೌಧದ ತಾಪಂ ಸಭಾಭವನದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ತ್ತೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈಗಾಗಲೇ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಲವಾರು ಕಟ್ಟಡಗಳ ಕಾಮಗಾರಿ ಅರ್ಧಕ್ಕೆ ಮಾಡಲಾಗಿದೆ ಎಂದರಲ್ಲದೆ, ಕಾಮಗಾರಿಗಳ ಕುರಿತು ಮಾಹಿತಿ ನೀಡುವಂತೆ ಅಧಿಕಾರಿಗೆ ಸೂಚಿಸಿದರು.
ಒಟ್ಟು 55 ಕಾಮಗಾರಿಯಲ್ಲಿ 44 ಕಾಮಗಾರಿಗಳು ಮುಕ್ತಾಯಗೊಂಡಿದ್ದು, ಇನ್ನುಳಿದವುಗಳನ್ನು ಬೇಗ ಮುಕ್ತಾಯಗೊಳಿಸುತ್ತೇವೆಂದು ಅಧಿಕಾರಿ ಹೇಳುತ್ತಿದ್ದಂತೆಯೇ ಆಕ್ರೋಶಗೊಂಡ ಸಚಿವರು, ಇಲಾಖೆ ನೀಡಿರುವ ಕಾಲಮಿತಿ ಎಷ್ಟೆಂದು ಮಾಹಿತಿ ಕೇಳಿದಾಗ ಅದಕ್ಕುತ್ತರಿಸಲು ತಡವರಿಸಿದ ಅಧಿಕಾರಿ ಬೇಗನೆ ಮುಗಿಸುತ್ತೇವೆ, ಬೇಗನೆ ಮುಗಿಸಿಕೊಡುತ್ತೇವೆ ಎಂದು ಹೇಳಲು ಮುಂದಾದರು. ಗ್ರಾಮೀಣ ಬಿಇಒ ಅಶೋಕಕುಮಾರ ಸಿಂದಗಿ ಅವರು ಕಾಮಗಾರಿ ಪೂರ್ಣಗೊಳಿಸಲು 8 ತಿಂಗಳಗೂ ಹೆಚ್ಚು ಕಾಲಾವಕಾಶ ನೀಡಲಾಗಿದೆ ಎಂದರು. ಕೆಡಿಪಿ ಸದಸ್ಯ ಮಾತನಾಡಿ, ನಿರ್ಮಿತಿ ಕೇಂದ್ರದ ಕಾಮಗಾರಿಯಲ್ಲಿ ಗುಣಮಟ್ಟ ಸರಿಯಾಗಿಲ್ಲ. ಶಾಲೆಗಳಿಗೆ ಅಳವಡಿಸಿರುವ ಬಾಗಿಲುಗಳು ತುಂಬಾ ಕಳಪೆ ಮಟ್ಟದ್ದಾಗಿವೆ ಎಂದರು.
ಇದರಿಂದ ಇನ್ನಷ್ಟು ಆಕ್ರೋಶಗೊಂಡ ಸಚಿವರು, ಇನ್ಮುಂದೆ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ನೀಡದಂತೆ ಸೂಚನೆ ನೀಡುತ್ತೇನೆ, ಈಗಿರುವ ಕಾಮಗಾರಿ ಕೂಡಲೇ ಮುಕ್ತಾಯಗೊಳಿಸಿ ಕೊಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡ ಕಾಮಗಾರಿಗಳನ್ನು ಈಗಾಗಲೇ ಮಾಡಲಾಗುತ್ತಿದ್ದು, ಇನ್ನುಳಿದವುಗಳನ್ನು ಮಳೆ ನೋಡಿಕೊಂಡು ಮಾಡಲಾಗುವುದು ಎಂದರು.
ವಿನಾಕಾರಣ ಕಾಲಹರಣ ಮಾಡಬಾರದು. ಗುಣಮಟ್ಟದ ಕಾಮಗಾರಿ ಕೈಗೊಂಡಿರುವ ಬಗ್ಗೆ ಶಿಕ್ಷಣ ಇಲಾಖೆ ಹಾಗೂ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದರು. ಜಲ ಜೀವನ ಮಿಷನ್ ಯೋಜನೆಯಡಿಯಲ್ಲಿ ಮನೆ, ಅಂಗನವಾಡಿ, ಶಾಲಾ-ಕಾಲೇಜು ಮತ್ತು ಸಮುದಾಯ ಭವನಗಳಿಗೆ ಶುದ್ಧ ಕುಡಿಯುವ ನೀರು ಸಂಪರ್ಕ ನೀಡಬೇಕು.ಮಕ್ಕಳಿಗೆ ಅನುಕೂಲವಿರುವ ಸ್ಥಳದಲ್ಲಿ ನಲ್ಲಿಗಳನ್ನು ಅಳವಡಿಸಬೇಕು. ಪೈಪ್ಲೈನ್ ಅಳವಡಿಸುವ ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗಬೇಕೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೆ ಸಮ್ಮತಿ ಸೂಚಿಸಿದ ಆಧಿಕಾರಿ ಕೂಡಲೇ ಕಾಮಗಾರಿ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಮಣಕವಾಡದಿಂದ ನಲವಡಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಸರಕಾರದ ಯೋಜನೆಗಳು ಜನರಿಗೆ ತಲುಪಬೇಕು. ಮನೆ ಬಿದ್ದವರಿಗೆ, ಬಡವರಿಗೆ ಪರಿಹಾರದ ಚೆಕ್ ವಿತರಿಸಬೇಕು. ಬೆಳೆ ಪರಿಹಾರ ಹಂಚಿಕೆಯಲ್ಲಿ ರೈತರಿಗೆ ಮೋಸವಾಗಬಾರದು. ಬೆಳೆ ಹಾನಿ ಪ್ರದೇಶಗಳ ಸರ್ವೇ ಕಾರ್ಯ ಮುಗಿದ ಬಳಿಕ ಪರಿಹಾರ ವಿತರಿಸಲಾಗುತ್ತದೆ. ರಸ್ತೆ, ಕುಡಿಯುವ ನೀರು, ಸಾರಿಗೆ ಸೇರಿದಂತೆ ಮೂಲ ಸೌಕರ್ಯಗಳು ಸಾರ್ವಜನಿಕರಿಗೆ ದೊರೆಯಬೇಕು. ಕುಮಾರವ್ಯಾಸನ ಹುಟ್ಟೂರಾದ ಕೋಳಿವಾಡದಲ್ಲಿ ರುದ್ರಭೂಮಿಗಾಗಿ 3 ಎಕರೆ ಭೂಮಿ ಖರೀದಿಸಲಾಗಿದೆ. ಅಲ್ಲದೇ ಈ ಗ್ರಾಮಕ್ಕೆ ಕೆರೆ, ರಸ್ತೆ ಇತರೆ ಮೂಲ ಸೌಕರ್ಯ ಒದಗಿಸಲಾಗಿದೆ ಎಂದರು.
ಗ್ರಾಮೀಣ ಭಾಗದ ರಸ್ತೆಗಳಲ್ಲಿ 50 ರಿಂದ 60 ಟನ್ ಭಾರ ಹೊತ್ತು ಸಾಗುವ ಭಾರೀ ಗಾತ್ರದ ವಾಹನಗಳಿಂದ ರಸ್ತೆಗಳು ಹದಗೆಡುತ್ತವೆ. ಬಸ್, ಟ್ರ್ಯಾಕ್ಟರ್, ಚಕ್ಕಡಿಗಳು ಸಂಚಾರ ಮಾಡಲು ದುಸ್ತರವಾಗುವ ರೀತಿಯಲ್ಲಿ ರಸ್ತೆಗಳು ಬದಲಾಗುತ್ತವೆ. ಭಾರವಾದ ವಾಹನಗಳ ಸಂಚಾರ ಕುರಿತು ಬ್ಯಾಹಟ್ಟಿ ಗ್ರಾಪಂನಿಂದ ಶಿಸ್ತು ಕ್ರಮ ಕೈಗೊಳ್ಳಬೇಕು. ಈ ಹಿಂದೆ ಭಾರವಾದ ವಾಹನಗಳ ನಿಷೇಧಕ್ಕೆ ನಾನು ಸೂಚಿಸಿದಾಗ ರೈತರು ನನ್ನ ಮೇಲೆ ಮುಗಿ ಬಿದ್ದರು ಎಂದು ಸಚಿವ ಮುನೇನಕೊಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಹೆಸ್ಕಾಂ ಅಧಿಕಾರಿ ಕಿರಣ ಮಾತನಾಡಿ, ಇಲಾಖೆಯಿಂದ ಕೈಗೊಳ್ಳಲಾದ ಯೋಜನೆಗಳ ಕುರಿತು ಮಾಹಿತಿ ನೀಡಿದರು. ವಿದ್ಯುತ್ ಬಿಲ್ ತುಂಬದೇ ಇರುವ ಗ್ರಾಮೀಣ ಭಾಗದ ಜನರ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಅವರನ್ನು ಕತ್ತಲಿಗೆ ದೂಡಬೇಡಿ, ಅದಕ್ಕೂ ಮೊದಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ಹೆಸ್ಕಾಂ ಅಧಿಕಾರಿ ಕಿರಣಕುಮಾರ ಅವರಿಗೆ ಸಚಿವರು ಸೂಚಿಸಿದರು.
ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ ಮಾತನಾಡಿ, ಜೂನ್, ಜುಲೈ ತಿಂಗಳಲ್ಲಿ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ಮನೆ ಬಿದ್ದವರಿಗೆ ಪರಿಹಾರ ನೀಡಲಾಗಿದೆ. ಎಬಿಸಿ ವರ್ಗಗಳ ಮೂಲಕ ಪರಿಹಾರ ವಿತರಿಸಲಾಗಿದೆ ಎಂದರು.
ನಂತರ ಕೃಷಿ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ, ಪಂಚಾಯತ ರಾಜ್ಯ ಸಹಾಯಕ ನಿರ್ದೇಶಕ ಚಂದ್ರಶೇಖರ ಕುರ್ತಕೋಟಿ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ, ಸಭೆಯ ನಾಮನಿರ್ದೇಶನ ಸದಸ್ಯರಾದ ವಿರೂಪಾಕ್ಷಪ್ಪ ಮೊರಬ, ಹನುಮಂತಪ್ಪ ಹಳ್ಯಾಳ, ಮಹಾವೀರ ಅಂಗಡಿ, ಶಕುಂತಲಾ ಚರಂತಿಮಠ, ಕೆಂಚಪ್ಪ ಮಲ್ಲಮ್ಮನವರ, ಹನುಮಂತಪ್ಪ ಬೂದಿಹಾಳ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಚೌಡಮ್ಮಾ ಅಂಬಿಗೇರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕಾ ಕಲ್ಯಾಣಾಧಿಕಾರಿ ಚಂದ್ರಶೇಖರ ಕರವೀರಮಠ, ಶಹರ ಬಿಇಒ ಎಂ.ಎಸ್.ಶಿವಳ್ಳಿಮಠ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿಕ್ಷಕ ಸಿ.ಎಚ್. ಅದರಗುಂಚಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli ಅಪಾರ್ಟಮೆಂಟ್ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ
Hubli: ದಿಂಗಾಲೇಶ್ವರರು ಸ್ಪರ್ಧಿಸುತ್ತಿರುವ ಸಮಯ, ಜಾಗ ಸರಿಯಿಲ್ಲ: ಗುಣಧರನಂದಿ ಮಹಾರಾಜ
L.S Polls: ನಮ್ಮದು ಧರ್ಮ ಯುದ್ಧ, ಧರ್ಮದ ಹಾದಿಯಲ್ಲೇ ಸಾಗುತ್ತೇವೆ: ದಿಂಗಾಲೇಶ್ವರ ಶ್ರೀ
Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ
UPSC ಪರೀಕ್ಷೆಯಲ್ಲಿ 101ನೇ ರ್ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ