ಪಾಲಿಕೆ ಗೊಬ್ಬರ ಮಾರುಕಟ್ಟೆಗೆ ಬರಲು ಸಜ್ಜು
ಐದು ವರ್ಷಗಳ ನಂತರ ಯೋಜನೆ ಸಾಕಾರ
Team Udayavani, Apr 19, 2022, 9:02 AM IST
ಹುಬ್ಬಳ್ಳಿ: ಹಸಿ ತ್ಯಾಜ್ಯದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಮಹಾನಗರ ಪಾಲಿಕೆಯ ಯೋಜನೆ ಕಾರ್ಯಗತಗೊಂಡಿದ್ದು, ಮಾರುಕಟ್ಟೆಗೆ ಅಧಿಕೃತವಾಗಿ ಲೋಕಾರ್ಪಣೆಗೊಳಿಸಲು ಪಾಲಿಕೆ ಸಿದ್ಧವಾಗಿದೆ. ಭೂ ಸಮೃದ್ಧಿ ಬ್ರ್ಯಾಂಡ್ ಹೆಸರಲ್ಲಿ ಕಾಂಪೋಸ್ಟ್ ಗೊಬ್ಬರವನ್ನು ಕೈಗೆಟುಕುವ ದರದಲ್ಲಿ ನೀಡುವ ಚಿಂತನೆ ಪಾಲಿಕೆ ಹೊಂದಿದೆ. ಬರೋಬ್ಬರಿ ಐದು ವರ್ಷಗಳ ನಂತರ ಯೋಜನೆ ಸಾಕಾರಗೊಂಡಿದೆ.
ಮಹಾನಗರದ ಘನತ್ಯಾಜ್ಯ ಸಮರ್ಪಕ ನಿರ್ವಹಣೆಗಾಗಿ ಪಾಲಿಕೆ ಸಮಗ್ರ ಘನತ್ಯಾಜ್ಯ ಯೋಜನೆ ರೂಪಿಸಿತ್ತು. ಹಸಿ ತ್ಯಾಜ್ಯದಿಂದ ಸಾವಯವ ಗೊಬ್ಬರ, ಒಣ ತ್ಯಾಜ್ಯದಿಂದ ಸಿಮೆಂಟ್ ಕಂಪನಿಗಳಿಗೆ ಅಗತ್ಯವಾದ ಪರ್ಯಾಯ ಇಂಧನ ಸಿದ್ಧಪಡಿಸುವುದು ಯೋಜನೆಯಲ್ಲಿತ್ತು. ಇದರ ಮೂಲಕ ಮಹಾನಗರದ ಸ್ವತ್ಛತೆ ಪ್ರಮುಖ ಉದ್ದೇಶವಾಗಿತ್ತು. ಇದಕ್ಕಾಗಿ ಸುಮಾರು 65 ಕೋಟಿ ರೂ. ವ್ಯಯಿಸಲಾಗಿದೆ. ಕಳೆದ ಐದು ವರ್ಷಗಳ ಹಿಂದೆ ಸಿದ್ಧವಾದ ಯೋಜನೆ ಇದೀಗ ಕಾರ್ಯರೂಪಕ್ಕೆ ಬಂದಿದೆ. ಇದೀಗ ಮೊದಲ ಹಂತದಲ್ಲಿ ಹಸಿ ತ್ಯಾಜ್ಯದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಲಾಗುತ್ತಿದ್ದು, ಭೂ ಸಮೃದ್ಧಿ ಹೆಸರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ.
ಕಾಂಪೋಸ್ಟ್ ದಾಸ್ತಾನು: ಹುಬ್ಬಳ್ಳಿಯಲ್ಲಿ ದಿನಕ್ಕೆ ಸುಮಾರು 60-70 ಟನ್ ಹಾಗೂ ಧಾರವಾಡದಲ್ಲಿ 30-35 ಟನ್ ಹಸಿ ತ್ಯಾಜ್ಯ ದೊರೆಯುತ್ತಿದೆ. ಧಾರವಾಡದಲ್ಲಿ ಈಗಾಗಲೇ ಕಾಂಪೋಸ್ಟ್ ಗೊಬ್ಬರ ತಯಾರಿಕೆ ಕಾರ್ಯ ಪ್ರಾಯೋಗಿಕವಾಗಿ ಕಳೆದ ಐದಾರು ತಿಂಗಳಿನಿಂದ ನಡೆಯುತ್ತಿದೆ. ಆದರೆ ಹುಬ್ಬಳ್ಳಿ ಘಟಕದಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿದೆ.
ಧಾರವಾಡದಲ್ಲಿ ಈಗಾಗಲೇ ಸುಮಾರು 60 ಟನ್ಗೂ ಹೆಚ್ಚಿನ ಗೊಬ್ಬರ ಮಾರಾಟ ಮಾಡಲಾಗಿದೆ. ಸುಮಾರು 80 ಟನ್ ಗೊಬ್ಬರ ದಾಸ್ತಾನಿದೆ. ಇನ್ನೂ ಹುಬ್ಬಳ್ಳಿಯಲ್ಲಿ ಇದೀಗ 40 ಟನ್ ಸಿದ್ಧವಾಗಿದೆ. ಸಮರ್ಪಕವಾಗಿ ರೈತರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಭೂ ಸಮೃದ್ಧಿ ಎಂದು ಬ್ರ್ಯಾಂಡಿಂಗ್ ಮಾಡಲಾಗಿದೆ.
ಕೈಗೆಟುಕುವ ದರ: ಯಾವುದೇ ಲಾಭದ ನಿರೀಕ್ಷೆಯಿಲ್ಲದೆ ಕೇವಲ ನಿರ್ವಹಣಾ ವೆಚ್ಚ ಸರಿದೂಗಿಸುವ ನಿಟ್ಟಿನಲ್ಲಿ ಕೈಗೆಟುಕುವ ದರದಲ್ಲಿ ಮಾರಾಟ ಮಾಡುವ ಇಂಗಿತ ಪಾಲಿಕೆಗಿದೆ. ಸದ್ಯಕ್ಕೆ ಪ್ರತಿ ಕೆಜಿಗೆ 2.36 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಗೊತ್ತಿರುವ ರೈತರು, ಜನರು ಧಾರವಾಡದಲ್ಲಿ ಖರೀದಿ ಮಾಡುತ್ತಿದ್ದಾರೆ. ಇದನ್ನು 50 ಹಾಗೂ 25 ಕೆಜಿ ಬ್ಯಾಗ್ನಲ್ಲಿ ಮಾರಾಟ ಮಾಡುವ ಚಿಂತನೆಯಿದೆ. ಹೀಗಾಗಿ ಈ ಎಲ್ಲಾ ವೆಚ್ಚ, ಬ್ರ್ಯಾಂಡಿಂಗ್ ಸೇರಿದಂತೆ ಪ್ರತಿ ಕೆಜಿಗೆ 3 ರೂ. ಮಾಡಬೇಕು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.
ಒಂದೇ ಮಾದರಿಯ ಗೊಬ್ಬರ ಎಲ್ಲಾ ತೋಟ, ಹೊಲಗಳಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಈ ಕಾಂಪೋಸ್ಟ್ ಗೊಬ್ಬರಕ್ಕೆ ಇನ್ನೊಂದಿಷ್ಟು ಸಾವಯವ ಪೋಷಕಾಂಶಗಳನ್ನು ಸೇರಿಸಿ ಪ್ರತಿ ಕೆಜಿಗೆ 5 ರೂ. ಮಾಡಬೇಕು ಎನ್ನುವ ಚರ್ಚೆಗಳು ನಡೆಯುತ್ತಿವೆಯಾದರೂ ಇನ್ನೂ ನಿರ್ಧಾರವಾಗಿಲ್ಲ.
ಪಾಲಿಕೆ ಸಿಬ್ಬಂದಿ ಮೂಲಕ ನಿರ್ವಹಣೆ:
ಆರಂಭದಲ್ಲಿ ಪಾಲಿಕೆ ಕಚೇರಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಂಡು ನಂತರ ಬೇಡಿಕೆ ಆಧಾರದ ಮೇಲೆ ಹೊರಗಡೆ ಕೇಂದ್ರಗಳನ್ನು ಆರಂಭಿಸುವ ಗುರಿಯಿದೆ. ಹುಬ್ಬಳ್ಳಿ ಹಾಗೂ ಧಾರವಾಡದ ಎರಡು ಘಟಕಗಳನ್ನು ಸದ್ಯಕ್ಕೆ ಪಾಲಿಕೆ ಸಿಬ್ಬಂದಿ ಮೂಲಕ ನಿರ್ವಹಿಸಲಾಗುತ್ತಿದೆ. ಪ್ರಾಯೋಗಿಕ ಹಂತವಾಗಿರುವುದರಿಂದ ಇನ್ನೂ ಪರಿಣಾಮಕಾರಿಯಾಗಿ ಕಾಂಪೋಸ್ಟ್ ಗೊಬ್ಬರ ಉತ್ಪಾದನೆ ಆಗುತ್ತಿಲ್ಲ. ಘಟಕಗಳ ಸಾಮರ್ಥ್ಯದ ಸಂಪೂರ್ಣ ಸದ್ಬಳಕೆ ಮಾಡಿಕೊಳ್ಳಬೇಕಾದರೆ ಹೆಚ್ಚಿನ ಪ್ರಮಾಣದ ಮಾನವ ಸಂಪನ್ಮೂಲದ ಅಗತ್ಯವಿದೆ. ಪ್ರಾಥಮಿಕ ಹಂತದಲ್ಲಿ ಹಸಿ ಹಾಗೂ ಒಣ ತ್ಯಾಜ್ಯ ಪ್ರತ್ಯೇಕವಾಗಿ ಸಂಗ್ರಹ ಕಾರ್ಯ ಕಟ್ಟುನಿಟ್ಟಾಗಿ ಆದರೆ ಇನ್ನಷ್ಟು ಪರಿಣಾಮಕಾರಿ ಹಾಗೂ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿದೆ.
ಉತ್ತಮ ಅಂಶಗಳು ದೃಢ:
ಸಿದ್ಧಪಡಿಸಿರುವ ಕಾಂಪೋಸ್ಟ್ ಗೊಬ್ಬರವನ್ನು ಪ್ರತಿಷ್ಠಿತ ಎಸ್ಎಲ್ಎನ್ ಬಯೋಟೆಕ್ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಉತ್ತಮ ಅಂಶಗಳನ್ನು ಹೊಂದಿರುವುದು ದೃಢವಾಗಿದೆ. ಆರ್ಗ್ಯಾನಿಕ್ ಕಾರ್ಬನ್-23.24(14 ಕನಿಷ್ಟ), ನೈಟ್ರೋಜೆನ್-1.835 (0.8 ಕನಿಷ್ಟ), ಪಾಸ್ಪೇಟ್ಸ್-0.878 (0.4 ಕನಿಷ್ಟ), ಪೊಟ್ಯಾಷ್-0.862 (0.4 ಕನಿಷ್ಟ) ಪ್ರಮಾಣವನ್ನು ಹೊಂದಿದೆ. ಹೀಗಾಗಿ ಈ ಗೊಬ್ಬರ ಕೃಷಿ, ತೋಟಗಾರಿಕೆ, ಮನೆ ಮುಂದಿನ ಉದ್ಯಾನಗಳಿಗೆ ಬಳಸಬಹುದಾಗಿದೆ. ಕೆಲ ಅಡಕೆ ಬೆಳೆಗಾರರು ಕೂಡ ಗೊಬ್ಬರದ ಬೇಡಿಕೆ ಸಲ್ಲಿಸಿದ್ದಾರೆ. ನಿತ್ಯವೂ ಮಾರಾಟದ ಉದ್ದೇಶದಿಂದ ಅರಣ್ಯ ಇಲಾಖೆಯ ನರ್ಸರಿಗಳಿಗೆ ಪೂರೈಸಬಹುದು ಎನ್ನುವ ಕಾರಣಕ್ಕೆ ಪತ್ರ ವ್ಯವಹಾರ ನಡೆದಿದೆ.
ಪಾಲಿಕೆಯಿಂದ ತಯಾರಿಸುತ್ತಿರುವ ಕಾಂಪೋಸ್ಟ್ ಗೊಬ್ಬರಕ್ಕೆ ಸಾಕಷ್ಟು ಬೇಡಿಕೆಯಿದ್ದು, ರೈತರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ. ಸಾವಯವ ಗೊಬ್ಬರದಲ್ಲಿ ಇರಬೇಕಾದ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿರುವುದು ಪ್ರಯೋಗಾಲಯದ ಪರೀಕ್ಷೆಯಿಂದ ಸ್ಪಷ್ಟವಾಗಿದೆ. ಅರಣ್ಯ ಇಲಾಖೆ ನರ್ಸರಿಗಳಿಗೆ ಈ ಗೊಬ್ಬರ ಬಳಕೆ ಮಾಡುವ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ. ಅತೀ ಶೀಘ್ರದಲ್ಲಿ ಅಧಿಕೃತವಾಗಿ ಬ್ರ್ಯಾಂಡಿಂಗ್ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. –ಡಾ| ಬಿ.ಗೋಪಾಲಕೃಷ್ಣ, ಆಯುಕ್ತ, ಮಹಾನಗರ ಪಾಲಿಕೆ
-ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ
Hubli ಅಪಾರ್ಟಮೆಂಟ್ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ