ಕೇಂದ್ರ ಸರಕಾರದ ಕ್ರಮಕ್ಕೆ ರಾಷ್ಟ್ರಪತಿಮೆಚ್ಚುಗೆ ಪ್ರೇರಣಾದಾಯಕ: ಜೋಶಿ
Team Udayavani, Jan 30, 2021, 2:57 PM IST
ಹುಬ್ಬಳ್ಳಿ: ಕೋವಿಡ್ ಸಂಕಷ್ಟ ಸ್ಥಿತಿಯಲ್ಲಿ ಕೋವಿಡ್ ನಿಯಂತ್ರಣ ಜತೆಗೆ ಆರ್ಥಿಕತೆ ಸುಧಾರಣೆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಕ್ರಮ ಶ್ಲಾಘನೀಯವಾಗಿದೆ ಎಂಬ ರಾಷ್ಟ್ರಪತಿಯವರ ಹೇಳಿಕೆ ಪ್ರೇರಣಾದಾಯಕವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯಪಟ್ಟಿದ್ದಾರೆ.
ಸಂಸತ್ತಿನ ಉಭಯ ಸದನ ಉದ್ದೇಶಿಸಿ ರಾಷ್ಟ್ರಪತಿಯವರು ಮಾಡಿದ ಭಾಷಣ ಮೇಲೆ ಸದನದಲ್ಲಿ ಮಾತನಾಡಿದ ಸಚಿವರು, ಕೇಂದ್ರ ಸರಕಾರ ಪ್ರತಿ ಭಾರತೀಯನಿಗೂ ಸುಲಭದ ಜೀವನ ನಡೆಸಲು ಅನುಕೂಲಕರ ವಾತಾವರಣ ನಿರ್ಮಿಸುವಲ್ಲಿ ಶ್ರಮಿಸುತ್ತಿದೆ. ಕೋವಿಡ್ ನಿಯಂತ್ರಣಕ್ಕ ದೇಸಿ ಲಸಿಕೆ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ರಾಷ್ಟ್ರಪತಿಯವರ ಮಾತುಗಳು ಪ್ರೇರಣಾದಾಯಕವಾಗಿವೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ:ಹುಳಿಯಾರಿನ ಏಕೈಕ ಮೈದಾನ ಉಳಿಸಿ
ಗಣರಾಜ್ಯೋತ್ಸವ ದಿನದಂದು ರೈತರ ಟ್ರ್ಯಾಕ್ಟರ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಹಿಂಸಾಚಾರ ಘಟನೆಯ ಬಗ್ಗೆ ರಾಷ್ಟ್ರಪತಿಗಳು ಅಸಮಾಧಾನ ವ್ಯಕ್ತಪಡಿಸಿರುವುದು ಸರಿಯಾದ ಸಂದೇಶ ಆಗಿದೆ. ಮೋದಿ ನೇತೃತ್ವದ ಸರ್ಕಾರ ದೇಶದ ಸಾರ್ವಭೌಮತೆ ರಕ್ಷಿಸಲು, ಹಿತಾಸಕ್ತಿಗಳನ್ನು ಕಾಪಾಡಲು ಬದ್ಧವಾಗಿದೆ. ಹೊಸ ದಶಕದಲ್ಲಿ ಸಂಸತ್ನ ಬಜೆಟ್ ಅಧಿವೇಶನ ಉಜ್ವಲ ಭವಿಷ್ಯ ಭಾರತವನ್ನು ಕಾಣಲಿದೆ. ಜನರ ಮಹತ್ವಾಕಾಂಕ್ಷೆಗಳನ್ನು ಈಡೇರಿಸುವಲ್ಲಿ ಪ್ರಧಾನಿ ಮೋದಿಯವರ ನೇತೃತ್ವದ ಸರಕಾರ ಯಾವತ್ತೂ ಹಿಂದೆ ಬೀಳುವುದಿಲ್ಲ. ಒಟ್ಟಾರೆ ರಾಷ್ಟ್ರಪತಿಗಳ ಭಾಷಣ ಮೋದಿ ಸರಕಾರದ ದೂರದರ್ಶಿ ಯೋಜನೆಗಳ ಕಾರ್ಯಾನುಷ್ಠಾನ ಹಾಗೂ ಕೋವಿಡ್ ನಂತರದ ದೇಶದ ಆರ್ಥಿಕತೆ ಹಾಗೂ ತನ್ಮೂಲಕ ದೇಶದ ಜನರ ಜೀವ ರಕ್ಷಣೆಗೆ ತಮ್ಮ ಸರಕಾರದ ಆದ್ಯತಾ ಗುರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾಗಿ ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.