ತೋಳನಕೆರೆಗೆ ಸ್ಮಾರ್ಟ್ ಲುಕ್; 26 ಕೋಟಿ ರೂ. ವೆಚ್ಚದಲ್ಲಿ ಹೊಸ ರೂಪ
ಕೆರೆ ಆವರಣದಲ್ಲಿ ಬಗೆ ಬಗೆಯ ಸಸ್ಯಗಳುಳ್ಳ ಸುಂದರವಾದ ಉದ್ಯಾನ
Team Udayavani, May 14, 2022, 5:55 PM IST
ಸ್ಮಾರ್ಟ್ಸಿಟಿ ಯೋಜನೆಯಡಿ ಮೊದಲು ಅಂದಾಜು 18.75ಕೋಟಿ ರೂ. ವೆಚ್ಚದಲ್ಲಿ ತೋಳನಕೆರೆ ಅಭಿವೃದ್ಧಿಗೆ ಯೋಜನಾ ವೆಚ್ಚ ಸಿದ್ಧಪಡಿಸಿ, 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಬೆಂಗಳೂರಿನ ಸೌಹಾರ್ದ ಇನ್ಪ್ರಾಟೆಕ್ಗೆ ಟೆಂಡರ್ ನೀಡಲಾಗಿತ್ತು. ನಂತರ ಯೋಜನೆಯಲ್ಲಿ ಕೆಲ ಮಾರ್ಪಾಡು ಮಾಡಲಾಯಿತು. ಜೊತೆಗೆ ಮಳೆ ಹಾಗೂ ಕೋವಿಡ್ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ಯೋಜನಾ ವೆಚ್ಚವು ಶೇ. 27ರಷ್ಟು ಹೆಚ್ಚಳವಾಗಿದ್ದರಿಂದ ಅಂದಾಜು 20.88ಕೋಟಿ ರೂ. ವೆಚ್ಚದಲ್ಲಿ ತೋಳನಕೆರೆ ಅಭಿವೃದ್ಧಿ ಪಡಿಸಲಾಗಿದೆ. ಈಗಲೂ ಕೆರೆಗೆ ಹಿಂಭಾಗದ ಪ್ರದೇಶಗಳ ಕೊಳಚೆ ಸೇರುತ್ತಿದ್ದು, ಇದರಿಂದ ಕೆರೆಯ ನೀರಲ್ಲಿ ಕೆಟ್ಟ ವಾಸನೆ ಸೂಸುತ್ತಿದೆ. ಈ ಹರಿದು ಬರುತ್ತಿರುವ ಕೊಳಚೆ ನೀರು ತಡೆಗಟ್ಟಬೇಕೆಂದು ಶ್ರೇಯಾ ಪಾರ್ಕ್ ಸೇರಿದಂತೆ ತೋಳನಕೆರೆ ಸುತ್ತಮುತ್ತಲಿನ ಜನರ ಒತ್ತಾಸೆಯಾಗಿದೆ. ಅಂದುಕೊಂಡಂತೆ ತೋಳನಕೆರೆ ಅಭಿವೃದ್ಧಿಯ ಕಾಮಗಾರಿಗಳು ನಿಗದಿತ ಸಮಯದಲ್ಲಿ ಪೂರ್ಣಗೊಂಡಿದ್ದರೆ ಇದು 2021ರಲ್ಲೇ ಉದ್ಘಾಟನೆಗೊಳ್ಳಬೇಕಿತ್ತು.
ಹುಬ್ಬಳ್ಳಿ: ಮಹಾನಗರದ ಗೋಕುಲ ರಸ್ತೆ-ಶಿರೂರ ಪಾರ್ಕ್ ನಡುವೆ 32 ಎಕರೆ ವಿಶಾಲ ಜಾಗದಲ್ಲಿ ಅಂದಾಜು 26 ಕೋಟಿ ರೂ. ವೆಚ್ಚದಲ್ಲಿ ಅತ್ಯಾಕರ್ಷಕವಾಗಿ ಅಭಿವೃದ್ಧಿ ಪಡಿಸಲಾದ ತೋಳನಕೆರೆ ಮೇ 15 ರಂದು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ. ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಂಗಳೂರಿನ ಸೌಹಾರ್ದ ಇನ್ಪ್ರಾಟೆಕ್ ಸಂಸ್ಥೆ ಅಂದಾಜು 20.88 ಕೋಟಿ ರೂ. ವೆಚ್ಚದಲ್ಲಿ ತೋಳನಕೆರೆ ಅಭಿವೃದ್ಧಿ ಪಡಿಸಿದ್ದರೆ, ಚಿತ್ರದುರ್ಗದ ಕೋಚಿ
ಪ್ಲೇ ಇಕ್ವಿಪಮೆಂಟ್ಸ್ ಸಂಸ್ಥೆ ಕೆರೆ ಸುತ್ತಲಿನ ಆವರಣದ ಸುಮಾರು 14 ಎಕರೆ ಜಾಗದಲ್ಲಿ ಅಂದಾಜು 4.94ಕೋಟಿ ರೂ. ವೆಚ್ಚದಲ್ಲಿ ಸ್ಫೋರ್ಟ್ಸ್ ಗಾರ್ಡನ್ ನಿರ್ಮಿಸಿದೆ. ಹೀಗಾಗಿ ತೋಳನಕೆರೆ ಈಗ ವಾಣಿಜ್ಯ ನಗರಿಯ ಮತ್ತೂಂದು ಅತ್ಯಾಕರ್ಷಕ ಪಿಕ್ನಿಕ್ ಸ್ಪಾಟ್ ಆಗಿ ರೂಪುಗೊಂಡಿದೆ.
ಹಲವು ಅಭಿವೃದ್ಧಿ ಕಾರ್ಯ: ಸ್ಮಾರ್ಟ್ ಸಿಟಿ ಯೋಜನೆಯಡಿ ತೋಳನಕೆರೆಯ ಮುಖ್ಯ ಪಾದಚಾರಿ ಮಾರ್ಗ 1.4 ಕಿ.ಮೀ. ಹಾಗೂ ಕೆರೆ ಆವರಣದ ಒಳಗಿನ ಪಾದಚಾರಿ ಮಾರ್ಗ 1.8 ಕಿ.ಮೀ.ಯನ್ನು ಪೇವರ್ ಹಾಕಿ ಅಭಿವೃದ್ಧಿ ಪಡಿಸಲಾಗಿದೆ. ಕೆರೆ ಸುತ್ತಲೂ ಬಂಡ್ ಅಭಿವೃದ್ಧಿ, ಸಿಟಿಂಗ್ ಪ್ಲಾಜಾ, ಗಜೇಬೊ, ಆರು ಫೂಡ್ ಕಿಯೋಕ್ಸ್, ಯೋಗಾ ಸೆಂಟರ್, ಶೌಚಾಲಯ ಬ್ಲಾಕ್ಸ್, ಎರೆಹುಳು ಗೊಬ್ಬರ ಘಟಕ, ಕಂಟ್ರೋಲಮೆಂಟ್ ಗಾರ್ಡನರ್ ರೂಮ್, ಪಂಪ್ ರೂಮ್, ಆರ್ಒ ಪ್ಲಾಂಟ್ ಕೆರೆಯ ಸುತ್ತಮುತ್ತಲಿನ ರಮಣೀಯ ಸ್ಥಳ ವೀಕ್ಷಿಸಲು ವಾಚ್ ಟಾವರ್, ಹೆಡ್ಮೇಜ್ ನಿರ್ಮಿಸಲಾಗಿದೆ. ಇದಲ್ಲದೆ ಸಂಜೆ ವೇಳೆ ಸಂಗೀತ ಅಥವಾ ಸಣ್ಣಪುಟ್ಟ ಕಾರ್ಯಕ್ರಮ ಆಯೋಜಿಸಲು ಸುಮಾರು 80 ಜನ ಕುಳಿತುಕೊಳ್ಳಬಹುದಾದ ತೆರೆದ ಎಂಪಿ ಥಿಯೇಟರ್ ಹಾಗೂ ಸುಮಾರು 40 ಕಾರು ಮತ್ತು ಅಂದಾಜು 200 ದ್ವಿಚಕ್ರ ವಾಹನಗಳ ನಿಲುಗಡೆಗಾಗಿ 45 ಸಾವಿರ ಚದರ ಅಡಿಯಲ್ಲಿ ಪಾರ್ಕಿಂಗ್ ಪಾಥ್ ನಿರ್ಮಿಸಲಾಗಿದೆ.ಕೆರೆಯ ಸುತ್ತ ಕಂಪೌಂಡ್ ವಾಲ್ ನಿರ್ಮಿಸಿ
ಗ್ರಿಲ್ ಹಾಕಲಾಗಿದೆ.
ದೀಪಗಳ ಶೃಂಗಾರ: ಕೆರೆ ಸುತ್ತ ಹಾಗೂ ಗಾರ್ಡನ್ ಮತ್ತು ಇತರೆ ಪ್ರದೇಶಗಳಲ್ಲಿ ಪೋಸ್ಟರ್ ಲ್ಯಾಂಟೀನ್ 170, ಕೆರೆಯ ಸುತ್ತಲೂ ಸ್ಟ್ರೀಟ್ಲೆçಟ್ ಪೋಲ್ 108,
ಪ್ಯಾಸೋಲೇಟ್ ಪೋಲ್ 170 ಹಾಗೂ ಡಬಲ್ ಆರ್ಮ್, ಸಿಂಗಲ್ ಆರ್ಮ್ ಸ್ಟ್ರೀಟ್ ಲೈಟ್ 29, ಬುಲಾಟ್ಸ್ 117, ಹೈಮಾಸ್ಟ್ 3 ಹೀಗೆ ವಿವಿಧ ಬಗೆಯ ದೀಪಗಳನ್ನು ಅಳವಡಿಸಿ ಶೃಂಗರಿಸಲಾಗಿದೆ. ಮುಖ್ಯ ಪ್ರವೇಶ ದ್ವಾರ ಮತ್ತು ಹಿಂದುಗಡೆಯ ಪ್ರವೇಶ ದ್ವಾರ ಬಳಿ ಟಿಕೆಟ್ ಕೌಂಟರ್ ಹಾಗೂ ಭದ್ರತಾ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ ಕೆರೆ ಆವರಣದಲ್ಲಿ ಬಗೆ ಬಗೆಯ ಸಸ್ಯಗಳುಳ್ಳ ಸುಂದರವಾದ ಉದ್ಯಾನ ಹಾಗೂ ಕಾಲು ದಾರಿ ಮಾರ್ಗದ ಅಕ್ಕಪಕ್ಕ ಹೂದೋಟ ಮತ್ತು ಹಸಿರು ಹುಲ್ಲಿನ ಹೊದಿಕೆ ನಿರ್ಮಿಸಿ ಶೃಂಗಾರಗೊಳಿಸಲಾಗಿದೆ.
ಕ್ರೀಡಾ-ಜಿಮ್ ಪರಿಕರ ಅಳವಡಿಕೆ: ಕೆರೆ ಸುತ್ತಮುತ್ತಲಿನ ಸುಮಾರು 14 ಎಕರೆ ಜಾಗದಲ್ಲಿ ಚಿತ್ರದುರ್ಗದ ಕೋಚಿ ಪ್ಲೇ ಇಕ್ವಿಪ್ ಮೆಂಟ್ಸ್ ಸಂಸ್ಥೆ ಅಂದಾಜು 4.94 ಕೋಟಿ ರೂ. ವೆಚ್ಚದಲ್ಲಿ ನ್ಪೋರ್ಟ್ಸ್ ಗಾರ್ಡನ್ ನಿರ್ಮಿಸಿದೆ. ಇಲ್ಲಿ ಚಿಕ್ಕಮಕ್ಕಳಿಂದ ಹಿಡಿದು ವಯಸ್ಕರು, ವೃದ್ಧರು ಹಾಗೂ ಅಂಗವಿಕಲರು ಪ್ರತ್ಯೇಕವಾಗಿ ಉಪಯೋಗಿಸಬಹುದಾದಂತಹ 56 ಬಗೆಯ ಅತ್ಯುತ್ತಮ ಗುಣಮಟ್ಟದ ಜನಸ್ನೇಹಿ ಆಟದ ಉಪಕರಣಗಳನ್ನು ಅಳವಡಿಸಲಾಗಿದೆ . ಅಲ್ಲದೇ ಅಂದಾಜು 10 ಸಾವಿರ ಚದುರ ಅಡಿಯಲ್ಲಿ ಬಾಸ್ಕೆಟ್ ಬಾಲ್, ವಾಲಿಬಾಲ್ ಕೋರ್ಟ್ (ಅಂಗಣ) ನಿರ್ಮಿಸಲಾಗಿದೆ.
ಬಾಲಿಯ ಓರ್ವ ಡಿಸೈನರ್ ಪರಿಕಲ್ಪನೆಯಂತೆ ಈ ಸ್ಫೋರ್ಟ್ಸ್ ಗಾರ್ಡನ್ ನಿರ್ಮಿಸಲಾಗಿದ್ದು, ಇಂತಹ ಪರಿಕಲ್ಪನೆ ಹೊಂದಿದ ಏಷ್ಯಾ ಖಂಡದಲ್ಲಿಯೇ 2 ನೇಯ ಕ್ರೀಡಾ ಉದ್ಯಾನ ಇದಾಗಿದೆ.
ಸಿಸಿಟಿವಿ ಕ್ಯಾಮೆರಾ: ಇದಲ್ಲದೆ ವಿದ್ಯುದ್ದೀಪಗಳ ನಿರ್ವಹಣೆಗಾಗಿ ಪ್ರತ್ಯೇಕವಾಗಿ 5ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ಪ್ಲಾಂಟ್ ಹಾಗೂ ಪ್ರತ್ಯೇಕ ಖರ್ಚಿನಲ್ಲಿ ಐದು ತೋಳದ ಆಕೃತಿಗಳನ್ನು ನಿರ್ಮಿಸಲಾಗಿದೆ. ಕೆರೆಯ ಸುತ್ತಲಿನ ಆವರಣದ ಸುರಕ್ಷತೆಗಾಗಿ 16ಕ್ಕೂ ಹೆಚ್ಚು ಸರ್ವೇಲೆನ್ಸ್ ಸಿಸಿಟಿವಿ ಕ್ಯಾಮರಾಗಳ ಕಣ್ಗಾವಲು ಇಡಲಾಗಿದೆ. ಕೆರೆಗೆ ಹರಿದುಬರುತ್ತಿದ್ದ ಸುತ್ತಮುತ್ತಲಿನ ಪ್ರದೇಶದ ತ್ಯಾಜ್ಯ ನೀರನ್ನು ತಡೆಗಟ್ಟಲಾಗಿದ್ದು, ಪಾಲಿಕೆ ಎಸ್ಟಿಪಿ ಪ್ಲಾಂಟ್ ಸಹ ನಿರ್ಮಿಸಿದೆ. ಕೆರೆಯ ಪ್ರವೇಶ ದ್ವಾರ ಬಳಿ ಈಗಾಗಲೇ ಹೈಟೆಕ್ ಬೈಸಿಕಲ್ ನಿಲ್ದಾಣ ಸಹ ಸ್ಥಾಪಿಸಲಾಗಿದೆ. ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆಗೆ ಯೋಜನೆ ರೂಪಿಸಲಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ತೋಳನಕೆರೆಯು ಅತ್ಯಾಕರ್ಷಕವಾಗಿ ಅಭಿವೃದ್ಧಿಗೊಂಡು ಪಿಕ್ನಿಕ್ ಸ್ಪಾಟ್ ಆಗಿ ರೂಪುಗೊಂಡಿದೆ. ಮೇ 15ರಂದು ಉದ್ಘಾಟನೆ ಮಾಡಲಾಗುವುದು. ಆಗ ಇದು ಸಾರ್ವಜನಿಕರಿಗೆ ಮುಕ್ತವಾಗಲಿದೆ.
ಅರವಿಂದ ಬೆಲ್ಲದ, ಶಾಸಕ
ತೋಳನಕೆರೆಯ 32 ಎಕರೆ ಪ್ರದೇಶವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗಿದೆ. ಮೇ 15ರಂದು ಇದರ ಉದ್ಘಾಟನೆ ನಡೆಯಲಿದ್ದು, ಇದನ್ನು ಗುತ್ತಿಗೆ ಪಡೆದ ಬೆಂಗಳೂರಿನ ಸೌಹಾರ್ದ ಇನ್ಪ್ರಾಟೆಕ್ ಸಂಸ್ಥೆಯವರೆ 5 ವರ್ಷ ಇದನ್ನು ನಿರ್ವಹಣೆ ಮಾಡಲಿದ್ದಾರೆ.
ಚನ್ನಬಸವರಾಜ ಧರ್ಮಂತಿ,
ಹು-ಧಾ ಸ್ಮಾರ್ಟ್ ಸಿಟಿ ಡಿಜಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ