ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಸಹಕಾರ: ಅಪ್ಪು ಗೌಡ
Team Udayavani, Dec 26, 2021, 9:59 AM IST
ಕಲಬುರಗಿ: ಬರುವ ಜನವರಿ 3 ಮತ್ತು 4ರಂದು 25 ವರ್ಷದ ನಂತರ ನಗರದಲ್ಲಿ ನಡೆಯುತ್ತಿರುವ ಪತ್ರಕರ್ತರ 36ನೇ ರಾಜ್ಯ ಸಮ್ಮೇಳನ ಯಶಸ್ಸಿಗೆ ಸಹಕಾರ, ಸಹಾಯ ಕಲ್ಪಿಸುವುದಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ ಡಿಬಿ) ಅಧ್ಯಕ್ಷ, ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.
ಸಮ್ಮೇಳನದ ಸಿದ್ಧತೆ ಕುರಿತು ಸಂಘದ ಪದಾಧಿಕಾರಿಗಳೊಂದಿಗೆ ಸಮಾಲೋಚಿಸಿದ ಅವರು, ಸಮ್ಮೇಳನ ನಮ್ಮೆಲ್ಲರ ಕಾರ್ಯಕ್ರಮವಾಗಿದೆ. ಮೊದಲ ದಿನದ ಅಂದರೆ ಜ. 3ರ ಸಂಪೂರ್ಣ ದಿನದ (ಬೆಳಗಿನ ಉಪಹಾರ, ಮಧ್ಯಾಹ್ನ ಊಟ, ರಾತ್ರಿ ಎರಡು ಕಡೆ ಊಟ) ಅನ್ನದಾಸೋಹ ಸೇವೆ ತಮ್ಮಿಂದ ಆಗಲಿದೆ ಎಂದರು.
ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಪತ್ರಕರ್ತರು ತಮ್ಮ ಆತಿಥ್ಯ ಸ್ವೀಕರಿಸಲಿ. ಒಟ್ಟಾರೆ ಸಮ್ಮೇಳನಕ್ಕೆ ಯಾವುದೇ ಕೊರತೆಯಾಗದಂತೆ ನಿಗಾ ವಹಿಸುವುದು ಸ್ಥಳೀಯ ಪತ್ರಕರ್ತರು ಹಾಗೂ ತಮ್ಮ ಕಾರ್ಯವಾಗಿದೆ ಎಂದು ಹೇಳಿದರು.
ಸಮ್ಮೇಳನಕ್ಕೆ ಆಗಮಿಸುವ ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಸುಸಜ್ಜಿತ ವಸತಿ ವ್ಯವಸ್ಥೆ ಕಲ್ಪಿಸುವುದು ಸವಾಲಿನ ಕೆಲಸವಾಗಿದೆ. ಮುಖ್ಯವಾಗಿ ಸರ್ಕಾರಿ ವಸತಿ ಗೃಹಗಳನ್ನು ಪತ್ರಕರ್ತರಿಗೆ ಮೀಸಲಿಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಶರಣಬಸವೇಶ್ವರರ ಮಹಾದಾಸೋಹ ಸಂಸ್ಥಾನದ ಬಸವರಾಜಪ್ಪ ಸ್ಮಾರಕ ಭವನದಲ್ಲಿ ಸಮ್ಮೇಳನ ನಡೆಯುವಂತಾಗಲು ಹಾಗೂ ಸಮ್ಮೇಳನ ಯಶಸ್ವಿಗೆ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಶುಭ ಹಾರೈಸಿರುವುದು ಮಾದರಿಯಾಗಿದೆ ಎಂದು ಹೇಳಿದರು.
ಜ. 4ರಂದು ಸಮ್ಮೇಳನ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರುವುದಾಗಿ ಹೇಳಿದ್ದಾರೆ. ಅದೇ ರೀತಿ ನಾಡಿನ ಹಿರಿಯ ಪತ್ರಕರ್ತರೆಲ್ಲರು ಆಗಮಿಸುತ್ತಿರುವುದರಿಂದ ಸಮ್ಮೇಳನಕ್ಕೆ ಕಳೆ ಬರಲಿದೆ. ಒಟ್ಟಾರೆ ಅರ್ಥಪೂರ್ಣ ರೀತಿಯಲ್ಲಿ ಸಮ್ಮೇಳನಕ್ಕೆ ಸರ್ವ ನಿಟ್ಟಿನಲ್ಲಿಯೂ ಸಹಕಾರ ನೀಡಲಾಗುವುದು ಎಂದು ಪುನರುಚ್ಚರಿಸಿದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಪ್ರಧಾನ ಕಾರ್ಯದರ್ಶಿ ದೇವಿಂದ್ರಪ್ಪ ಆವಂಟಿ, ರಾಜ್ಯ ಸಮಿತಿ ಸದಸ್ಯರಾದ ಹಣಮಂತರಾವ ಭೈರಾಮಡಗಿ, ದೇವಿಂದ್ರಪ್ಪ ಕಪನೂರ, ಖಜಾಂಚಿ ರಾಜು ದೇಶಮುಖ, ಸಮ್ಮೇಳನದ ಆಹಾರ ಸಮಿತಿ ಅಧ್ಯಕ್ಷ ಪ್ರವೀಣ ರೆಡ್ಡಿ, ಸದಸ್ಯ ಭಜರಂಗಿ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
ದಿ| ಜಾರ್ಜ್ ಫೆರ್ನಾಂಡಿಸ್ ಆದರ್ಶ, ಅವರೇ ಸ್ಫೂರ್ತಿ: ಕ್ಯಾ| ಬ್ರಿಜೇಶ್ ಚೌಟ
ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
Kinnigoli ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ