ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಶ್ಲಾಘನೀಯ
Team Udayavani, Jan 17, 2022, 11:44 AM IST
ಆಳಂದ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ನಿರಂತರವಾಗಿ ತಾಲೂಕಿನಲ್ಲಿ ಜನಪರ ಕಾರ್ಯ ಕೈಗೊಳ್ಳುತ್ತಿರುವುದು ಶ್ಲಾಘನೀಯವಾಗಿದೆ ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಕಚೇರಿ ಸ್ಥಳಾಂತರವಾಗಿ ಪಟ್ಟಣದ ಜೈನ ಬಸದಿಯಲ್ಲಿ ಆರಂಭಿಸಿದ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆ, ಸ್ವಚ್ಛತೆ, ಕೆರೆಗಳ ಹೂಳೆತ್ತುವ ಜತೆಗೆ ಮಹಿಳಾ ಸಂಘಗಳ ಮೂಲಕ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಒದಗಿಸುವಲ್ಲಿ ಧರ್ಮಸ್ಥಳ ಸಂಸ್ಥೆ ಅಗತ್ಯ ಸಹಕಾರ ನೀಡುತ್ತಿದೆ. ಈ ಯೋಜನೆಗಳಲ್ಲಿ ಮಹಿಳೆಯರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಶಿವರಾಯ ಪ್ರಭು ಮಾತನಾಡಿ, ತಾಲೂಕಿನ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಏಳು ವಲಯಗಳಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಕಾರ್ಯ ಚಟುವಟಿಕೆ ನಡೆಯುತ್ತಿದೆ. ಸರ್ಕಾರಗಳು ಕೈಗೊಳ್ಳುವ ಕಾರ್ಯಗಳನ್ನು ಸಂಸ್ಥೆ ಮಾಡುತ್ತಿದೆ. ಇದರಿಂದ ಅನೇಕರ ಬಾಳಲ್ಲಿ ಬೆಳಕು ಕಾಣಲು ಅನುಕೂಲವಾಗಿದೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ, ಪ್ರದೀಪ ಶಹಾ, ರವಿ ಪಾಟೀಲ, ಬಾಬುರಾವ್ ಮಡ್ಡೆ, ಚನ್ನು ಪಾಟೀಲ, ಸಂಸ್ಥೆಯ ಜಿಲ್ಲಾ ಸಂಯೋಜನಾಧಿಕಾರಿ ಸತೀಶ ಸುವರ್ಣ, ತಾಲೂಕು ಯೋಜನಾಧಿಕಾರಿ ಕೃಷ್ಣಪ್ಪ ಬೆಳವಣಕಿ, ಜಾನಪದ ಪರಿಷತ್ ಅಧ್ಯಕ್ಷ ಅಪ್ಪಸಾಹೇಬ ತೀರ್ಥ, ವೀರಭದ್ರ ಹಾರಕೆ, ಎಚ್.ಎಂ. ರೆಡ್ಡಿ, ಶ್ರೀಶೈಲ ಖಜೂರಿ ಮತ್ತಿತರು ಇದ್ದರು. ಆರಂಭದಲ್ಲಿ ಅರ್ಚಕರಿಂದ ವಿಶೇಷ ಪೂಜೆ, ಅರ್ಚನೆ, ಪೂರ್ಣಾಹುತಿ, ದೀಪಾರತಿ ಕೈಗೊಳ್ಳಲಾಯಿತು.