ಕಂದಾಯ ಮನ್ನಾಕ್ಕೆ ಮನವಿ
Team Udayavani, May 21, 2020, 5:19 AM IST
ಮೈಸೂರು: ಕಲ್ಯಾಣ ಮಂಟಪಗಳ ಕಂದಾಯ ಮನ್ನಾ ಹಾಗೂ ಟ್ರೇಡ್ ಲೈಸನ್ಸ್ ಶುಲ್ಕ ಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಮೈಸೂರು ಕಲ್ಯಾಣ ಮಂಟಪ ಮಾಲೀಕರ ಸಂಘದಿಂದ ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರಪಾಲಿಕೆ ಕಚೇರಿಗೆ ಭೇಟಿ ನೀಡಿದ ಮೈಸೂರು ಕಲ್ಯಾಣ ಮಂಟಪ ಮಾಲೀಕರ ಸಂಘದ ಸದಸ್ಯರು, ಆಯುಕ್ತರಿಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಕೆ.ಆರ್. ಸತ್ಯನಾರಾಯಣ ಮಾತನಾಡಿ, ಕಳೆದ 2 ತಿಂಗಳಿನಿಂದ ಕಲ್ಯಾಣ ಮಂಟಪದಲ್ಲಿ ಯಾವುದೇ ಕಾರ್ಯಕ್ರಮ ನಡೆಯುತ್ತಿಲ್ಲ.
ಈ ಹಿಂದೆ ಬುಕ್ ಆಗಿದ್ದ ಸಮಾರಂಭಗಳೂ ರದ್ದಾಗಿವೆ. ಮುಂದಿನ 6 ತಿಂಗಳು ಯಾವುದೇ ಸಮಾರಂಭ ನಡೆಯುವುದಿಲ್ಲ. ಇದರಿಂದ ನಮಗೆ ನಷ್ಟವಾಗುತ್ತಿದೆ ಎಂದರು. ಸರ್ಕಾರ ಮದುವೆ ಸಮಾರಂಭಗಳಲ್ಲಿ 50 ಮಂದಿ ಮಾತ್ರ ಇರಬೇಕು ಎಂದು ನಿರ್ದೇಶನ ನೀಡಿದೆ. ಈ ವರ್ಷ ಯಾವ ಸಮಾರಂಭಗಳೂ ನಡೆಯದ ಕಾರಣ ಕಂದಾಯ ಮನ್ನಾ ಮಾಡಬೇಕು,
ಟ್ರೇಡ್ ಲೈಸನ್ಸ್ ಶುಲ್ಕ ಮನ್ನಾ ಮಾಡಬೇಕು. ಮುಂದಿನ ವರ್ಷಕ್ಕೆ ಕಂದಾಯ, ಟ್ರೇಡ್ ಲೈಸನ್ಸ್ ಶುಲ್ಕ ಕಡಿಮೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಸಂಘದ ಉಪಾಧ್ಯಕ್ಷ ಎಸ್. ಮೂರ್ತಿ, ಕಾರ್ಯದರ್ಶಿ ಎಂ.ಎನ್. ವೆಂಕಟೇಶ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಉಪಸ್ಥಿತರಿದ್ದರು.