ನ್ಯಾಯಾಲಯ ಕಾರ್ಯಕಲಾಪ ಪುನಾರಂಭ
Team Udayavani, Jun 2, 2020, 6:00 AM IST
ಮೈಸೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ನ್ಯಾಯಾಲಯದ ಕಾರ್ಯ ಕಲಾಪಗಳು ಎರಡೂವರೆ ತಿಂಗಳ ಬಳಿಕ ಸೋಮವಾರ ಪುನಾರಂಭಗೊಂಡಿವೆ. ಲಾಕ್ಡೌನ್ ಘೋಷಣೆಯಾದ ಬಳಿಕ ಹೈಕೋರ್ಟ್ ಆದೇಶದ ಮೇರೆಗೆ ಕಳೆದ ಮಾರ್ಚ್ 17ರಿಂದ ಕೋರ್ಟ್ ಕಲಾಪಗಳು ಸ್ಥಗಿತಗೊಂಡಿತ್ತು.
ಕೋರ್ಟ್ನಲ್ಲಿ ಬೆಳಗ್ಗೆ 10 ಮತ್ತು ಮಧ್ಯಾಹ್ನ 10 ಪ್ರಕರಣಗಳ ವಿಚಾರಣೆಗೆ ಮಾತ್ರ ಅವಕಾಶ ನೀಡಲಾಗಿದ್ದು, ನ್ಯಾಯಾಧೀಶರೊಂದಿಗೆ ಸಂಬಂಧ ಪಟ್ಟ ವಕೀಲರಿಗೆ ಮಾತ್ರ ಕೋರ್ಟ್ ಹಾಲ್ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಸೋಮವಾರ ಕಲಾಪ ಆರಂಭವಾಗುವ ಮುನ್ನವೇ ಯಾವ ಪ್ರಕರಣಗಳು ವಿಚಾರಣೆಗೆ ಕೈಗೊತ್ತಿಕೊಳ್ಳಲಾಗಿದೆ ಎಂಬುದರ ಬಗ್ಗೆ ಹಿಂದಿನ ದಿನವೇ ವಕೀಲರಿಗೆ ಮಾಹಿತಿ ನೀಡಲಾಗುತ್ತದೆ.
ಆ ವಕೀಲರು ತಮ್ಮ ಕೇಸ್ ವಿಚಾರವಾಗಿ ಕೋರ್ಟ್ಗೆ ಹಾಜರಾಗಿದ್ದರಿಂದ ನ್ಯಾಯಾಧೀಶರು ವಿಚಾರಣೆ ನಡೆಸಿ, ವಿಚಾರಣೆಯ ದಿನಾಂಕ ಮುಂದೂಡಿದರು. ಇನ್ನೂ ನ್ಯಾಯಾಧೀಶರಿಗೂ ದಿನ ಬಿಟ್ಟು ದಿನ ಕೋರ್ಟ್ ಕಲಾಪ ನಡೆಸುವಂತೆ ತಿಳಿಸಲಾಗಿದೆ. ವಿಚಾರಣೆ ಮುನ್ನ ದಿನವೇ ಸಂಬಂಧ ಪಟ್ಟ ವಕೀಲರಿಗೆ ಕೋರ್ಟ್ಗೆ ಹಾಜರಾಗುವಂತೆ ಮಾಹಿತಿ ನೀಡಲಾಗುತ್ತಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಆನಂದ್ ಕುಮಾರ್ ಅವರು ತಿಳಿಸಿದ್ದಾರೆ.
ನ್ಯಾಯ ಕೊಠಡಿ ಉದ್ಘಾಟನೆ: ಮೈಸೂರು ನಗರದ ಮಳಲವಾಡಿಯಲ್ಲಿರುವ ನ್ಯಾಯಾಲಯದ ಆವರಣದಲ್ಲಿ 5, 6 ಮತ್ತು 7ನೇ ಕೋರ್ಟ್ನ ಕೊಠಡಿಗಳನ್ನು ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರಾಮಚಂದ್ರ ಉದೂರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳು ಹಾಜರಿದ್ದರು